ಕುಣಿಗಲ್
ಐತಿಹಾಸಿಕ ಸುಪ್ರಸಿದ್ಧ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಶುಕ್ರವಾರ ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಮಹಾ ರಥೋತ್ಸವ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಮಹಾರಥೋತ್ಸವವು ಹರಗುರುಚರಣರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳೊಂದಿಗೆ ಚಾಲನೆ ನೀಡಿದ ನಂತರ, ಬೃಹತ್ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ನಡೆಯಿತು.
ಶ್ರೀ ಸಿದ್ಧಲಿಂಗೇಶ್ವರರ ಭಕ್ತಗಣ ಇಡಿ ರಾಜ್ಯ ದೇಶದಾದ್ಯಂತ ಪಸರಿಸಿದ್ದು ಈ ಜಾತ್ರೆಯಲ್ಲಿ ವಿಶೇಷವಾಗಿ ಭಕ್ತರು ತಮ್ಮ ಶಕ್ತಾನುಸಾರ ರಥೋತ್ಸವದಂದು ಉಚಿತವಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ನೀಡುವ ಮೂಲಕ ಬೇಸಿಗೆಯಲ್ಲಿ ಧಣಿವು ನೀಗಿಸುವ ಕಾಯಕದಲ್ಲಿ ತೊಡಗಿ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯವರ ರಥೋತ್ಸವದ ಪ್ರಯುಕ್ತ ವಿತರಿಸಿದರು. ಬಿರು ಬಿಸಿಲಿನ ದಾಹದಲ್ಲಿಯೂ ಸ್ವಾಮಿಯ ಜಾತ್ರೆಗೆ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.