ಬೆಂಗಳೂರು
ಸರ್ಕಾರ ರಚಿಸುವ ಗಡಿಬಿಡಿಯಲ್ಲಿರುವ ಬಿಜೆಪಿ ನಾಯಕರು ಈಗಾಗಲೇ ಯಡಿಯೂರಪ್ಪ ನೇತೃತ್ವದಲ್ಲಿ 22:12 ಸೂತ್ರದಡಿ ಮಂತ್ರಿ ಮಂಡಲ ರಚಿಸಲು ಸಜ್ಜಾಗಿದ್ದಾರೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಬಂದಿರುವವರು ಸೇರಿದಂತೆ ಪಕ್ಷಕ್ಕೆ ಬರುತ್ತಿರುವವರ ಪೈಕಿ ಕನಿಷ್ಟ ಹನ್ನೆರಡು ಮಂದಿಗೆ ಮಂತ್ರಿ ಸ್ಥಾನಗಳನ್ನು ನೀಡಬೇಕು ಎಂದು ತೀಮಾನಿಸಲಾಗಿದೆ.
ಸರ್ಕಾರ ರಚಿಸಲು ಬೆಂಬಲ ನೀಡಿರುವ ಈ ಶಾಸಕರ ಪೈಕಿ ಹನ್ನೆರಡು ಮಂದಿ ತಮಗೆ ಮಂತ್ರಿಗಿರಿ ಬೇಕೆಂದು ಒತ್ತಾಯ ಮಾಡಿದ್ದು ಕೊಟ್ಟಿರುವ ವಚನದ ಪ್ರಕಾರ ಆ ತಂಡದ ಹನ್ನೆರಡು ಮಂದಿಗೆ ಮಂತ್ರಿಗಿರಿ ನೀಡಲು ತೀರ್ಮಾನ ಮಾಡಲಾಗಿದೆ.
ಉಳಿದಂತೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಬಿಜೆಪಿಯ ಇಪ್ಪತ್ತೆರಡು ಮಂದಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ವಿವರ ನೀಡಿವೆ.ಉಪಮುಖ್ಯಮಂತ್ರಿ ಹುದ್ದೆಗೇರಲು ಅರ್ಧ ಡಜನ್ನಷ್ಟು ಮಂದಿ ಸ್ಪರ್ಧೆಯಲ್ಲಿದ್ದಾರಾದರೂ ಒಬ್ಬರಿಗಿಂತ ಹೆಚ್ಚು ಮಂದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಭಾವಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೆ.ಎಸ್.ಈಶ್ವರಪ್ಪ ಹಾಗೂ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿಗಳಾಗಿದ್ದರಾದರೂ ಈಗ ಆ ಹುದ್ದೆಗೇರಲು ಬಿ.ಶ್ರೀರಾಮುಲು,ಗೋವಿಂದ ಕಾರಜೋಳ್ ಸೇರಿದಂತೆ ಇನ್ನೂ ಹಲವು ಹೆಸರುಗಳು ಮುಂದೆ ಬಂದಿವೆ.
ಈ ಮಧ್ಯೆ ಮಹಿಳಾ ಕೋಟಾದಡಿ ಮಂತ್ರಿಯಾಗಲು ಮೂರು ಮಂದಿ ಸ್ಪರ್ಧೆಯಲ್ಲಿದ್ದಾರಾರೂ ಶಶಿಕಲಾ ಜೊಲ್ಲೆ ಅವರಿಗೆ ಆ ಸ್ಥಾನವನ್ನು ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ಬಹುತೇಕರಲ್ಲಿದೆ.ಸರ್ಕಾರ ರಚನೆಯ ನಂತರ ಕೆಲಸ ಮಾಡಲು ಆದ್ಯತೆ ಕೊಡಬೇಕು.ಯಾವ ಕಾರಣಕ್ಕೂ ಮೀಡಿಯಾ ಟೈಗರ್ಗಳಾಗಲು ಯಾರೂ ಹೋಗಬಾರದು ಎಂದು ಈಗಾಗಲೇ ಪ್ರಾಥಮಿಕವಾಗಿ ಎಲ್ಲ ಶಾಸಕರಿಗೂ ಸೂಚಿಸಲಾಗಿದೆ.
ಸರ್ಕಾರದ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಪ್ರತಿ ದಿನ ನಡೆಸುವ ರೌಂಡ್ಸ್ ಪರಂಪರೆಯನ್ನು ಪರಿಷ್ಕರಿಸಲು ಬಿಜೆಪಿ ನಾಯಕರು ಬಯಸಿದ್ದು,ರೌಂಡ್ಸ್ ಬದಲು ಸಮ್ಮೇಳನ ಸಭಾಂಗಣ ಇಲ್ಲವೇ ಸಮಿತಿ ಕೊಠಡಿಯಲ್ಲಿ ಪ್ರತಿನಿತ್ಯ ಅಥವಾ ನಿರ್ದಿಷ್ಟ ದಿನಗಳಂದು ಒಬ್ಬ ಮಂತ್ರಿ ಮಾಧ್ಯಮಗಳ ಜತೆ ಮಾತನಾಡಬೇಕು.
ಹಾಗಾಗದೆ ಮಾಧ್ಯಮಗಳು ತಮಗೆ ಬೇಕಾದವರ ಬಳಿ ಮಾತನಾಡುತ್ತಾ ಹೋದರೆ ಯಾವ ತಯಾರಿಯೂ ಇಲ್ಲದೆ ಸಚಿವರಾಡುವ ಮಾತು ಸಾರ್ವಜನಿಕ ವಲಯಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು.ಹೀಗಾಗಿ ಪೂರ್ವ ಸಿದ್ಧತೆಯೊಂದಿಗೆ ಮಾಧ್ಯಮಗಳ ಜತೆ ಸಚಿವರಾದವರು ಮಾತನಾಡಬೇಕು ಎಂದು ನಿರ್ಧರಿಸಲಾಗಿದೆ.ಅದೇ ರೀತಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬೇಕೇ ಹೊರತು ಬಹಿರಂಗವಾಗಿ ಮಾತನಾಡಬಾರದು ಎಂದು ತೀರ್ಮಾನಿಸಲಾಗಿದ್ದು,ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
