ತುಮಕೂರು:
ಮನಸ್ಸುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿರುವ ಸಾಹಿತ್ಯ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಿದರೆ ಮಾತ್ರ ಸಂಘರ್ಷ ರಹಿತ ಸಮಾಜ ನಿರ್ಮಿಸಲು ಸಾಧ್ಯ ಎಂದು ಕವಯಿತ್ರಿ ವಿದ್ಯಾ ಅರಮನೆ ಅಭಿಪ್ರಾಯಪಟ್ಟರು. ತಾಲೂಕಿನ ಮೈದಾಳ ಗ್ರಾಮದ ಶ್ರೀ ಶಿವ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ಕಾವ್ಯ ಸಂಗಮ ಸಾಹಿತ್ಯ ವೇದಿಕೆಯು ಆಯೋಜಿಸಿದ್ದ ಅನಾಥಾಶ್ರಮದಲ್ಲಿ ಒಂದು ದಿನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿಯಾಗಬೇಕಾದರೆ ಧ್ಯಾನಸ್ಥ ಸ್ಥಿತಿಯ ಅಧ್ಯಯನ ಅಗತ್ಯವಾಗಿದೆ. ಮಾತು ಮೌನವಾಗಿ ಭಾವನೆ ಅಕ್ಷರ ರೂಪತಾಳಬೇಕು ಎಂದರು.
ಬಿಡದಿ ಘಟಕದ ಬಾಷ್ ಕಂಪನಿಯ ಹೆಚ್ ಕುಮಾರಸ್ವಾಮಿ ಮಾತನಾಡಿ, ಅನಾಥಾಶ್ರಮದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಕಂಪನ್ನು ಸೂಸುವ ಕೆಲಸವನ್ನು ಕಾವ್ಯ ಸಂಗಮ ವೇದಿಕೆಯು ಕೈಗೊಂಡಿರುವುದು ಶ್ಲಾಘನೀಯವಾಗಿದೆ. ಸಾಹಿತ್ಯವು ಬಳಸಿದೊಷ್ಟು ಶ್ರೀಮಂತಗೊಳ್ಳುತ್ತದೆ, ವಿಶಾಲವಾಗುತ್ತದೆ ಎಂದರು.
ಕವಯಿತ್ರಿ ಕಮಲ ಬಡ್ಡಿಹಳ್ಳಿ ಮಾತನಾಡಿ, ಮಕ್ಕಳನ್ನು ಆಟ, ಪಾಠ ಜೊತೆ ಸಾಹಿತ್ಯದೆಡೆಗೆ ಕೊಂಡೊಯ್ಯಬೇಕು. ವಿದ್ಯಾರ್ಥಿ ಜೀವನದಲ್ಲಿ ಸಣ್ಣ ಸಣ್ಣ ಚುಟುಕು ಸಾಹಿತ್ಯವನ್ನು ಬರೆಸಲು ಶಿಕ್ಷಕರು ಮುಂದಾದರೆ ಮಕ್ಕಳು ಭವಿಷ್ಯದಲ್ಲಿ ಕನ್ನಡಕ್ಕೆ ಒಳ್ಳೆಯ ಕವಿ, ಕವಯಿತ್ರಿಯರಾಗಿ ಹೊರ ಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು.
ಕಾವ್ಯ ಸಂಗಮ ಸಾಹಿತ್ಯ ವೇದಿಕೆಯ ಅಡ್ಮಿನ್ಅರುಣ್ ಕುಮಾರ್ ಬ್ಯಾತ ಮಾತನಾಡಿ, ಅನಾಥಾಶ್ರಮದಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸುವುದು ನನ್ನ ಬಹುದಿನದ ಕನಸಾಗಿತ್ತು. ಅದು ಈಗ ನೆರವೇರಿದೆ. ಇದಕ್ಕೆ ನನ್ನೊಬ್ಬನ ಪರಿಶ್ರಮವಲ್ಲ ನಮ್ಮ ಸಾಹಿತ್ಯ ವೇದಿಕೆಯ ಎಲ್ಲ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆ ಇನ್ನೂ ವಿಭಿನ್ನವಾದ ಕಾರ್ಯಕ್ರಮಗಳನ್ನು ನಡೆಸಿ ಸಾಹಿತ್ಯವನ್ನು ಮತ್ತು ನಮ್ಮ ಕಾವ್ಯ ಸಂಗಮ ವೇದಿಕೆಯನ್ನು ಎಲ್ಲೆಡೆ ಪಸರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಮಾಡಲಾಯಿತು ಹಾಗೂ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಶಿವ ಶೈಕ್ಷಣಿಕ ಸೇವಾ ಆಶ್ರಮಕ್ಕೆ ಕಾವ್ಯ ಸಂಗಮ ಸಾಹಿತ್ಯ ವೇದಿಕೆಯಿಂದ 15 ಸಾವಿರ ರೂಗಳನ್ನು ದೇಣಿಗೆ ನೀಡಲಾಯಿತು ಮತ್ತು ಮಕ್ಕಳಿಗಾಗಿ 60 ಟವೆಲ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಊರ್ಡಿಗೆರೆ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಹೊನ್ನಾರು ರಂಗಸ್ವಾಮಯ್ಯ, ಕಾವ್ಯಸಂಗಮ ಸಾಹಿತ್ಯ ವೇದಿಕೆಯ ಅಡ್ಮಿನ್ ತಿಲಕ್ಲಕ್ಷ್ಮೀಪುರ, ಯುವಕವಿ ಯೋಗೇಶ್ಮಲ್ಲೂರು , ರಾಜೇಶ್ವರಿ, ಪದ್ಮ ಗೋವಿಂದಯ್ಯ, ಮಧುಸೂದನ್, ಫರ್ಮಾನ್, ಮಂಜುನಾಥ್ ಇನ್ನಿತರರು ಹಾಜರಿದ್ದರು..