ಹೊನ್ನಾಳಿ:
ವೈಯಕ್ತಿಕ ದ್ವೇಷದಿಂದ ಕ್ರುದ್ಧನಾದ ಯುವಕ ವ್ಯಕ್ತಿಯೊಬ್ಬರನ್ನು ರಿವಾಲ್ವರ್ನಿಂದ ಶೂಟ್ ಮಾಡಿ ಕೊಲೆ ಮಾಡಲು ಯತ್ನಿಸಿದ ದುರ್ಘಟನೆ ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ 11.20ರ ಸುಮಾರಿಗೆ ಸಂಭವಿಸಿದೆ. ಭಾರತೀಯ ಸೇನೆಯ ಸೈನಿಕ, ಬಿದರಗಡ್ಡೆ ಗ್ರಾಮದ ದೇವರಾಜ್ ಕೊಲೆಗೆ ಯತ್ನಿಸಿರುವ ಆರೋಪಿ.
ಬಿದರಗಡ್ಡೆ ಗ್ರಾಮದ ಬಿ.ಎಂ. ಪ್ರಕಾಶ್ ದುರ್ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿ.ಶೂಟೌಟ್ ದುರ್ಘಟನೆಯಲ್ಲಿ ಬಿ.ಎಂ. ಪ್ರಕಾಶ್ ಅವರ ಹೊಕ್ಕುಳು ಮೇಲ್ಭಾಗ ಮತ್ತು ಎದೆಯ ಕೆಳಭಾಗಕ್ಕೆ ಎರಡು ಗುಂಡುಗಳು ಹೊಕ್ಕಿದ್ದು, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಎರಡೂ ಗುಂಡುಗಳನ್ನು ಹೊರತೆಗೆದಿದ್ದಾರೆ. ಗಾಯಾಳು ಪ್ರಕಾಶ್ ಚೇತರಿಸಿಕೊಳ್ಳುತ್ತಿದ್ದಾರೆ.
ದುರ್ಘಟನೆಗೆ ಕಾರಣ:
ತನ್ನನ್ನು ಮದುವೆಯಾಗುವಂತೆ ಬಿದರಗಡ್ಡೆ ಗ್ರಾಮದ ಬಿ.ಎಂ. ಪ್ರಕಾಶ್ ಪುತ್ರಿಯನ್ನು(ಪ್ರಕಾಶ್ ಪುತ್ರಿ ಬಿ.ಪಿ. ಕಾವ್ಯ ದಾವಣಗೆರೆಯ ಸಾಯಿ ಹಾಸ್ಟೆಲ್ನಲ್ಲಿ ವಾಸವಾಗಿದ್ದು, ಬಾಪೂಜಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ.)ದೇವರಾಜ್ ಕಳೆದ ಮೂರು ವರ್ಷಗಳಿಂದ ಪೀಡಿಸುತ್ತಿದ್ದ. ಆದರೆ, ಪ್ರಕಾಶ್ ಪುತ್ರಿ ದೇವರಾಜ್ ಪ್ರೀತಿಗೆ ಸಮ್ಮತಿಸಿರಲಿಲ್ಲ. ಅಲ್ಲದೇ, ಪ್ರಕಾಶ್ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬಸ್ಥರು ಅಸಮ್ಮತಿ ಸೂಚಿಸಿದ್ದರು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೇವರಾಜ್ಗೆ ಬುದ್ಧಿ ಹೇಳಿ, ಈ ರೀತಿ ಮಾಡಬೇಡ ಎಂದು ತಿಳಿಸಿದ್ದರು.
ಇದಲ್ಲದೇ, ಪ್ರಕಾಶ್ ಪತ್ನಿ ನಾಗರತ್ನ ಅವರನ್ನು ಕೆಲ ದಿನಗಳ ಹಿಂದೆ ದೇವರಾಜ್ ಅಶ್ಲೀಲ ಪದಗಳಿಂದ ನಿಂದಿಸಿದ್ದ. ಈ ಹಿನ್ನೆಲೆಯಲ್ಲಿ ನಾಗರತ್ನ ಹೊನ್ನಾಳಿ ಠಾಣೆಯಲ್ಲಿ ದೇವರಾಜ್ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ, ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯ್ತಿ ನಡೆಸಿ, ಪ್ರಕರಣ ಇತ್ಯರ್ಥಪಡಿಸಲಾಗಿತ್ತು.
ಈ ಎರಡೂ ಘಟನೆಗಳಿಂದ ದ್ವೇಷ ಬೆಳೆಸಿಕೊಂಡಿದ್ದ ದೇವರಾಜ್, ಶುಕ್ರವಾರ ತಡರಾತ್ರಿ ಪ್ರಕಾಶ್ ಮನೆ ಬಳಿ ತೆರಳಿ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾನೆ. ಏನೋ ಶಬ್ದ ಆಗುತ್ತಿದೆ ಎಂದು ಮನೆಯಿಂದ ಪ್ರಕಾಶ್ ಹೊರಬರುತ್ತಿದ್ದಂತೆ ಅವರ ಮೇಲೂ ಗುಂಡು ಹಾರಿಸಿದ್ದಾನೆ. ತಕ್ಷಣ ಗಾಯಾಳು ಪ್ರಕಾಶ್ ಅವರನ್ನು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿ ದೇವರಾಜ್ನನ್ನು ಗ್ರಾಮಸ್ಥರು ಹಿಡಿದು ಹೊನ್ನಾಳಿ ಠಾಣೆಗೆ ಕರೆತಂದಿದ್ದಾರೆ. ಪ್ರಕಾಶ್ ಪತ್ನಿ ಎಲ್.ಬಿ. ನಾಗರತ್ನ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
