ಹುಳಿಯಾರು:
ಪತ್ರಿಕಾ ವರದಿಯ ಫಲಶೃತಿಯಿಂದಾಗಿ ಹುಳಿಯಾರು ಹೋಬಳಿಯ ದಬ್ಬಗುಂಟೆ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಎಇಇ ರವಿಕುಮಾರ್ ಭೇಟಿ ನೀಡಿ ಕುಸಿದಿರುವ ಸೇತುವೆಯನ್ನು ವೀಕ್ಷಿಸಿದರು.
ದಬ್ಬಗುಂಟೆಯ ಬಸ್ ನಿಲ್ದಾಣದಲ್ಲಿ ಹಿರಿಯೂರಿಗೆ ಹೋಗುವ ರಸ್ತೆಗೆ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆಯ ಕಂಬಿಗಳು ಈಗಾಗಲೇ ತುಕ್ಕು ಹಿಡಿದು ತನ್ನ ಆಯಸ್ಸು ಕಳೆದುಕೊಂಡಿತ್ತು .ಪರಿಣಾಮ ಇಲ್ಲಿನ ಸೊಸ್ಶೆಟಿಗೆ ರೇಷನ್ ಇಳಿಸಲು ಬಂದಿದ್ದ ಲಾರಿಯ ಭಾರಕ್ಕೆ ಸೇತುವೆ ಕುಸಿದು ಲಾರಿಯ ಚಕ್ರ ಸಿಲುಕಿಕೊಂಡಿತ್ತು. ಜೆಸಿಬಿಯ ಸಹಾಯದಿಂದ ಲಾರಿ ಎತ್ತಿ ಕಳುಹಿಸಿಕೊಡಲಾಯಿತು.
ಈ ಸೇತುವೆ ಕುಸಿತದಿಂದ ಇತರ ವಾಹನಗಳು ಓಡಾಡಿಸಲು ವಾಹನ ಸಾವಾರರು ಹೆದರುತ್ತಿದ್ದರು. ಅಲ್ಲದೆ ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ವೃದ್ಧರು ಸಹ ಓಡಾಡುತ್ತಿದ್ದು ಕತ್ತಲೆಯಲ್ಲಿ ಕುಸಿದಿರುವ ಸೇತುವೆಯಲ್ಲಿ ಬೀಳುವ ಆತಂಕ ಸ್ಥಳೀಯರಲ್ಲಿ ಸೃಷ್ಠಿಯಾಗಿತ್ತು.
ಈ ಬಗ್ಗೆ ಪತ್ರಿಕೆ ವರದಿ ಮಾಡಿದ್ದು ಪತ್ರಿಕೆಯ ವರದಿಯ ದಿನವೇ ಪಿಡಬ್ಲ್ಯೂಡಿ ಎಂಜಿನಿಯರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಸೇತುವೆ ಜಿಪಂ ವ್ಯಾಪ್ತಿಗೆ ಬರುವುದಿದ್ದು ತಕ್ಷಣ ಸಂಬಂಧಪಟ್ಟವರನ್ನು ಕಳುಹಿಸಿಕೊಡುವ ಭರವಸೆ ನೀಡಿದ್ದರು.
ಅದರಂತೆ ಜಿಪಂ ಎಇಇ ರವಿಕುಮಾರ್ ಹಾಗೂ ಎಂಜಿನಿಯರ್ ಕುಮಾರ್ ಬಂದು ಕುಸಿದಿರುವ ಸೇತುವೆ ವೀಕ್ಷಿಸಿದರು. ಜಿಪಂನಲ್ಲಿ ಈಗಾಗಲೇ ಆಕ್ಷನ್ ಪ್ಲಾನ್ ಮಾಡಿಯಾಗಿದ್ದು ಶಾಸಕರ ಗಮನಕ್ಕೆ ತಂದು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿಯಲ್ಲಿ ಹೊಸ ಸೇತುವೆ ಮಾಡಿಸುವ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/12/19HULIYAR2.gif)