ಹುಳಿಯಾರು:
ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಸೋಂಕು ಹರಡುವಿಕೆ ತಡೆಗೆ ಸಾಮಾಜಿಕ ಅಂತರವೇ ಮದ್ದಾಗಿದ್ದು ಈ ನಿಯಮ ಉಲ್ಲಂಘಿಸಿದವರಿಗೆ ಹಾಲು, ತರಕಾರಿ, ದಿನಸಿ ಕೊಡಬೇಡಿ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಸೂಚನೆ ನೀಡಿದರು.
ಹುಳಿಯಾರಿನಲ್ಲಿ ಕೋವಿಡ್–19 ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದೆಲ್ಲೆಡೆ ಜನ ಆತಂಕಗೊಂಡಿದ್ದಾರೆ. ದಿನ ಕಳೆದಂತೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಈಗಲೂ ಜನ ಜಾಗೃತರಾಗದಿದ್ದರೆ ಕೊರೊನಾದಿಂದ ಬಚಾವಾಗುವುದು ಅಸಾಧ್ಯ ಎಂದು ಎಚ್ಚರಿಸಿದರು.
ಪ್ರತಿಯೊಬ್ಬರೂ ದಿಗ್ಬಂಧನ ಆದೇಶ ಪಾಲಿಸಬೇಕು. ಮನೆಗಳಲ್ಲೇ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸದ್ಯ ನಗರಕ್ಕೆ ಸೀಮಿತವಾಗಿರುವ ಈ ಕಾಯಿಲೆಯು ಗ್ರಾಮೀಣ ಭಾಗದಲ್ಲಿ ಹರಡದಂತೆ ಮುನ್ನಚ್ಚರಿಕೆ ವಹಿಸಬೇಕು. ಹೊರ ಜಿಲ್ಲೆ, ರಾಜ್ಯ ಅಥವಾ ದೇಶಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.
ಹಣ್ಣು, ತರಕಾರಿಯನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದ್ದು ಪಪಂ ಸಿಬ್ಬಂಧಿಯನ್ನು ಮಫ್ತಿಯಲ್ಲಿ ಕಳುಹಿಸಿ ದುಪ್ಪಟ್ಟು ಬೆಲೆಗೆ ಮಾರುತ್ತಿರುವುದು ಸತ್ಯವಾಗಿದ್ದರೆ ಅಂತಹವರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರಲ್ಲದೆ ಬೆಳಗ್ಗೆ 10 ಗಂಟೆಯವರೆವಿಗೆ ನಾಡಕಛೇರಿ ಬಳಿ ತರಕಾರಿ ಮಾರಿ ನಂತರ ಬೀದಿಬೀದಿಗಳಿಗೆ ತೆರಳಿ ತರಕಾರಿ ಮಾರುವಂತೆ ತಿಳಿಸಿದರು.ತರಕಾರಿ ಮಾರಾಟಗಾರರು, ಪೊಲೀಸ್ ಹಾಗೂ ಪಪಂ ಸಿಬ್ಬಂದಿ ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








