ಚಳ್ಳಕೆರೆ
ದಕ್ಷಿಣ ಭಾರತ ಮೇರು ನಟ, ನಟಸಾರ್ವಭೌಮ ದಿವಂಗತ ಡಾ.ರಾಜಕುಮಾರ್ರವರ 91ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ತ್ಯಾಗರಾಜ ನಗರದ ವೆಲ್ಕಮ್ ಹೇರ್ಡ್ರಸಸ್ ಮಾಲೀಕ ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ ಮತ್ತು ಮಕ್ಕಳು ಡಾ.ರಾಜ್ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಸಾರ್ವಜನಿಕರಿಗೆ ಉಚಿತ ಕ್ಷೌರ ಕಾರ್ಯಕ್ರಮವನ್ನು ನಡೆಸಿದರು.
ಪ್ರತಿವರ್ಷ ಚಳ್ಳಕೆರೆ ನಗರದಲ್ಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದ ಅವರು, ಡಾ.ರಾಜ್ರವರ 91ನೇ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಿದರು.
ಕನ್ನಡ ನಾಡಿನ ಹೆಸರಾಂತ ಸಾಹಿತಿ, ಲೇಖಕ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮಕ್ಕೆ ಆಗಮಿಸಿ ವರನಟ ಡಾ.ರಾಜ್ಕುಮಾರ್ರವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ ಬೆಂಗಳೂರಿಗೆ ಆಗಮಿಸಿ ಡಾ.ರಾಜ್ರವರ ಆತ್ಮಕ್ಕೆ ಶಾಂತಿಕೋರಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ ತಮ್ಮ ಉಚಿತ ಕ್ಷೌರ ಸೇವೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ಧಾರೆ.
ಅವರ ಅಭಿಮಾನಕ್ಕೆ ಅಭಿನಂದನೆಯನ್ನು ಸಲ್ಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಅಧಿಕಾರಿ ವಿಶುಕುಮಾರ್, ಡಾ.ರುಕ್ಕುಜೀ ಮುಂತಾದವರು ಭಾಗವಹಿಸಿದ್ದರು. ಸುಮಾರು 100ಕ್ಕೂ ಹೆಚ್ಚು ಅಭಿಮಾನಿಗಳಿಗೆ ಉಚಿತ ಕ್ಷೌರ ಸೇವೆಯನ್ನು ಸಲ್ಲಿಸಲಾಯಿತು.