ದಾವಣಗೆರೆ:
ದಿನಕ್ಕೆ ಎಂಟು ಗಂಟೆಗಳು ಮಾತ್ರ ಕೆಲಸ ಮಾಡಬೇಕೆಂಬ ಕಾನೂನು ಇದ್ದರೂ ಸಹ, ಇಂದಿಗೂ ಕಾರ್ಮಿಕರಿಂದ ಎಂಟು ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ. ಹಾಗೂ ಮಾಡಿದ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಕೂಲಿ (ಪಗಾರ) ಸಿಗುತ್ತಿಲ್ಲ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ವಿಷಾಧಿಸಿದರು.
ನಗರದ ಜಯದೇವ ವೃತ್ತದ ಬಳಿಯ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಬುಧವಾರ ಭಾರತ ಕಮ್ಯುನಿಷ್ಟ್ ಪಕ್ಷ ಮತ್ತು ಎಐಟಿಯುಸಿ ಜಿಲ್ಲಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ 49ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೇ ದಿನದ ಹಿನ್ನೆಲೆ:
ಕೈಗಾರಿಕೆಗಳ ಮಾಲೀಕರು ದಿನದ 16ರಿಂದ 18 ಗಂಟೆಗೂ ಹೆಚ್ಚು ಕಾಲ ಕಾರ್ಮಿಕರಿಂದ ದುಡಿಸಿಕೊಂಡು ಶೋಷಣೆ ಮಾಡುತ್ತಿದ್ದ ಹಾಗೂ ದುಡಿಯುವವರ ಮೇಲೆ ಸರ್ಕಾರದ ದಬ್ಬಾಳಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ 1886ರ ಮೇ 1ರಂದು ಅಮೇರಿಕಾದ ಚಿಕಾಗೋ ನಗರದ ಹೇಗ್ ಚೌಕದಲ್ಲಿ ದಿನದ 8 ಗಂಟೆ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕೆಂದು ಒತ್ತಾಯಿಸಿ, ಕಾರ್ಮಿಕರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು.
ಆಗ ಅಲ್ಲಿಯ ಪೊಲೀಸರನ್ನು ಬಳಸಿಕೊಂಡು ವ್ಯವಸ್ಥೆ ಪ್ರತಿಭಟನಾನಿರತರ ಮೇಲೆ ಗುಂಡಿನ ಮಳೆಯೇ ಸುರಿಸಿತು. ಅಂದು ಕಾರ್ಮಿಕರಿಗಾಗಿ ಜೀವ ತ್ಯಾಗ ಮಾಡಿದ ಹುತಾತ್ಮರ ಮೈಯಿಂದ ಹರಿದ ಕೆಂಪು ರಕ್ತದ ಪ್ರತೀಕವೇ ಇಂದು ನಾವು ಹಿಡಿದಿರುವ ಕೆಂಬಾವುಟವಾಗಿದೆ. ಅಂದಿನಿಂದ ಈ ವರೆಗೆ ಪ್ರತಿವರ್ಷವೂ ಮೇ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಇನ್ನೂ ಸಿಗದ ಸ್ವಾತಂತ್ರ್ಯ:
ಈ ಹೋರಾಟದ ಫಲವಾಗಿ ಜಗತ್ತಿನ ಎಲ್ಲ ದೇಶಗಳು, ಕಾರ್ಮಿಕರ ದುಡಿಮೆಯನ್ನು 8 ಗಂಟೆಗೆ ನಿಗದಿ ಪಡಿಸಿ ಕಾಯ್ದೆಯನ್ನು ರೂಪಿಸಿವೆ. ಅದರಂತೆ ಭಾರತದಲ್ಲೂ ಕಾರ್ಮಿಕರ ಕೆಲಸದ ಅವಧಿ 8 ಗಂಟೆ ಎಂಬ ಕಾನೂನು ಇದ್ದರೂ ಸಹ 8 ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ. ಹಾಗೂ ಕಾರ್ಮಿಕರು ಮಾಡಿದ ಕೆಲಸಕ್ಕೆ ಸರಿಯಾಗಿ ಕೂಲಿ ನೀಡುತ್ತಿಲ್ಲ. ಭಾರತೀಯರಿಗೆ ಮತದಾನ ಮಾಡುವ ರಾಜಕೀಯ ಸ್ವಾತಂತ್ರ್ಯ ಬಂದಿದೆ. ಆದರೆ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ಕಾಯ್ದೆ ದುರ್ಬಲ:
1920ರಲ್ಲಿ ದೇಶದಲ್ಲಿ ಎಐಟಿಯುಸಿ ಅಸ್ತಿತ್ವಕ್ಕೆ ಬಂದು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಬಳಿಕ, 1926ರಲ್ಲಿ ಬ್ರಿಟೀಷ್ ಸರ್ಕಾರ ಕಾರ್ಮಿಕರ ಕಾಯ್ದೆಯನ್ನು ಅನುಷ್ಠಾನಗೊಳಿಸಿತು. ಹೀಗೆ ದೇಶದಲ್ಲಿ ಜಾರಿಯಾಗಿರುವ ಕಾರ್ಮಿಕ ಕಾನೂನುಗಳ ಹಿಂದೆ ಎಐಟಿಯುಸಿಯ ಪಾತ್ರವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮನಾಳುವ ವ್ಯವಸ್ಥೆ ಕಾರ್ಮಿಕರ ಕಾಯ್ದೆಯನ್ನು ದುರ್ಬಲ ಗೊಳಿಸುತ್ತಿದೆ ಎಂದು ದೂರಿದರು.
1990ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮಾಡಿದ ತಪ್ಪಿನಿಂದಾಗಿ ದೇಶವನ್ನು ಪ್ರವೇಶಿಸಿದ ಉಧಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ನೀತಿಗಳ ಪರಿಣಾಮದಿಂದಾಗಿ ಕಾರ್ಮಿಕರ ಸೌಲಭ್ಯಗಳು ಕಡಿತಗೊಳ್ಳುತ್ತಾ ಬಂದಿವೆ ಎಂದು ಆರೋಪಿಸಿದರು.
ಕೆಟ್ಟ ದಿನಗಳೆ ಹೆಚ್ಚು:
ಪ್ರಧಾನಿ ಮೋದಿ ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು. ಆದರೆ, ಈಗ ಕೆಟ್ಟ ದಿನಗಳೇ ಹೆಚ್ಚು ಬಂದಿವೆ. ಕಳೆದ ಐದು ವರ್ಷ ದೇಶ ಆಳಿದ ಎನ್ಡಿಎ ಸರ್ಕಾರ ಬ್ಯಾಂಕ್ಗಳನ್ನು ದಿವಾಳಿ ಮಾಡಿದೆ. ಸ್ಕೀಂ ವರ್ಕರ್ಗಳಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕೀಯರು, ಬಿಸಿಯೂಟ ತಯಾರಕಿಯರು, ಆಶಾ ಕಾರ್ಯಕರ್ತೆಯರಾಗಿ ದುಡಿಯುತ್ತಿರುವ ಒಂದು ಕೋಟಿಗೂ ಅಧಿಕ ಮಹಿಳೆಯರನ್ನು ಇನ್ನೂ ಸಹ ಕಾರ್ಮಿಕರನ್ನಾಗಿ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಬದಲಿಗೆ ಗೌರವ ಧನ, ಸಂಭಾವನೆ, ಪ್ರೋತ್ಸಾಹ ಧನದ ಹೆಸರಿನಲ್ಲಿ ಅತ್ಯಲ್ಪ ಕೂಲಿ ನೀಡುವ ಮೂಲಕ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಆಶ್ವಾಸನೆ ಈಡೇರಿಸಲಿಲ್ಲ:
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಕೇವಲ 10 ಲಕ್ಷ ಮಾತ್ರ ಉದ್ಯೋಗ ಸೃಷ್ಟಿಸಿದ್ದು, ಕಳೆದ 40 ವರ್ಷದ ಅವಧಿಯಲ್ಲಿ ಮೋದಿ ಆಡಳಿತದಲ್ಲಿ ಸೃಷ್ಟಿಯಾದಷ್ಟು ನಿರುದ್ಯೋಗ ಸಮಸ್ಯೆ ಎಂದೂ ಆಗಿರಲಿಲ್ಲ. ನೋಟು ಅಮಾನ್ಯೀಕರಣ ಮಾಡುವ ಮೂಲಕ ಹಾಗೂ ಜಿಎಸ್ಟಿ ಕಾಯ್ದೆ ಜಾರಿಗೆ ತಂದ ಕಾರಣ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳು ನೆಲ ಕಚ್ಚಿವೆ ಎಂದು ಆಪಾದಿಸಿದರು.
ಮೋದಿ 2014ರ ಚುನಾವಣೆಯ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳಲ್ಲಿ ಒಂದನ್ನೂ ಸಹ ಈಡೇರಿಸಲಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ಸ್ವಾಮಿನಾಥನ್ ವರದಿಯ ಶಿಫಾರಸು ಜಾರಿ ಮಾಡಿ, ರೈತರ ಆದಾಯ ದುಪ್ಪಟ್ಟು ಮಾಡಿ, ರೈತರ ಆತ್ಮಹತ್ಯೆ ತಡೆಯಲಿಲ್ಲ. ಹೀಗೆ ವಿದ್ಯಾರ್ಥಿ-ಯುವಜನರು, ರೈತ-ಕಾರ್ಮಿಕರು ಹಾಗೂ ಮಹಿಳೆಯರ ವಿರುದ್ಧ ಇರುವ ಮೋದಿಯನ್ನು ಸೋಲಿಸಬೇಕೆಂಬ ಕಾರಣಕ್ಕೆ ‘ಮೋದಿ ಹಠಾವೋ, ದೇಶ ಬಚಾವೋ’ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ್ದು, ಮತದಾರ ಪ್ರಭು ಏನು ನಿರ್ಧರಿಸಿದ್ದಾರೆಂಬುದನ್ನು ಕಾದು ನೋಡಬೇಕಾಗಿದೆ ಎಂದರು.
ಫ್ಯಾಸಿಸ್ಟ್ ಸರ್ಕಾರ:
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಭಾರತ ಸರ್ಕಾರ ಫ್ಯಾಸಿಸ್ಟ್ ಸರ್ಕಾರವಾಗಿ ಬದಲಾಗಲಿದೆ. ಅಲ್ಪಸಂಖ್ಯಾತರಿಗೆ ಸುರಕ್ಷತೆ ಎನ್ನುವುದು ಮರೀಚಿಕೆಯಾಗಲಿದೆ. ನನ್ನ ಜೀವಮಾನದಲ್ಲಿಯೇ ಮೋದಿಯಷ್ಟು ಕೋಮುವಾದಿ, ಜಾತಿವಾದಿ, ಸರ್ವಾಧಿಕಾರಿ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಐದು ವರ್ಷ ದೇಶವನ್ನು ಆಳಿದ ಮೋದಿ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಉದ್ದಿಮೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಆದ್ದರಿಂದ ದೇಶದಲ್ಲಿ ಬಡತನ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ದುಡಿಯುವ ವರ್ಗದ ಜನರು ವಿದ್ಯಾರ್ಥಿ-ಯುವಜನರು, ರೈತ-ಕಾರ್ಮಿಕರ ಪರವಾಗಿ ಹೋರಾಡುವ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿಯುಸಿ ಕಾರ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ, ಜನರ ಕಷ್ಟ ಪರಿಹರಿಸದ ಮೋದಿ ವಿರುದ್ಧ ಬೆಂಕಿಯ ಕಿಡಿಯಂತೆ ಸಿಡಿದಿರುವ ಕನ್ನಯ್ಯ ಕುಮಾರ್ ಗೆದ್ದು ಸಂಸತ್ ಪ್ರವೇಶಿಸಿದರೆ, ಮೋದಿಯೇ ಸೋತಂತಾಗಲಿದೆ. ಕನ್ನಯ್ಯಕುಮಾರ್ ಸಂಸತ್ಗೆ ಹೋದರೆ, ಜನಪರ ಧ್ವನಿ ಮೊಳಗಿಸಿ, ಸಂಸತ್ನಲ್ಲಿ ಹೊಸ ಚರಿತ್ರೆಯನ್ನು ಬರೆಯಲಿದ್ದಾರೆ ಎಂದರು.
ವರ್ಗ ರಹಿತ ಸಮಾಜ ನಿರ್ಮಾಣ ಎಯಟಿಯುಸಿ ಕನಸಾಗಿದ್ದು, ಸಮಾಜವಾದಿ ಸಮಾಜ, ಕಾರ್ಲ್ಮಾಕ್ರ್ಸ್, ಮಹಾತ್ಮ ಗಾಂಧಿ, ಭಗತ್ಸಿಂಗ್ ಅವರ ಕನಸಿನ ಸಮಾಜ ಒಂದಲ್ಲ ಒಂದು ದಿನ ನಿರ್ಮಾಣ ಮಾಡಿಯೇ ತೀರುತ್ತೇವೆಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಎಐಟಿಯುಸಿ ತಾಲೂಕು ಅಧ್ಯಕ್ಷ ಟಿ.ಎಸ್.ನಾಗರಾಜ್, ಜಿಲ್ಲಾ ಸಹ ಕಾರ್ಯದರ್ಶಿ ಎಂ.ಬಿ.ಶಾರದಮ್ಮ, ಎಐಬಿಇಎ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ, ಮುಖಂಡರಾದ ಟಿ.ಹೆಚ್.ನಾಗರಾಜ್, ಮಹಮದ್ ಭಾಷಾ, ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಆವರಗೆರೆ ವಾಸು ಸ್ವಾಗತಿಸಿದರು. ಐರಣಿ ಚಂದ್ರು ವಂದಿಸಿದರು. ಇಪ್ಟಾ ಕಲಾವಿದರು ಜಾಗೃತಗೀತೆ ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
