ಹರಪನಹಳ್ಳಿ:
ತಾಲ್ಲೂಕಿನ ಚಿಗಟೇರಿ ಕ್ರಾಸ್ ನಜೀರನಗರ ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ ಅವರು ಬುಧವಾರ ದಿಢೀರ್ ಭೇಟಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿದರು.
ಶಾಲೆಯ ಸಮಸ್ಯೆಗಳ ಬಗ್ಗೆ ಪಾಲಕರಿಂದ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕೆಲ ಮಕ್ಕಳ ಮೇಲೆ ಕಜ್ಜಿ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ವಿಚಾರಕರಿಂದ ಮಾಹಿತಿ ಪಡೆದರು. `ಕಜ್ಜಿ ಸಾಂಕ್ರಾಮಿಕ ರೋಗವಾಗಿದೆ. ಇತರೆ ಮಕ್ಕಳಿಗೆ ಹರಡದಂತೆ ಕ್ರಮ ವಹಿಸಿ’ ಎಂದು ಸೂಚನೆ ನೀಡಿದರು. ಕಜ್ಜಿ ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಕರೆಯಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
`ಕುಡಿಯುವ ನೀರಿನ ಸಮಸ್ಯೆ ವಸತಿ ನಿಲಯದಲ್ಲಿದೆ. ಕುಡಿಯುವ ನೀರನ್ನು ಪಕ್ಕದ ಹಳ್ಳಿಗಳ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತಂದು ಮಕ್ಕಳಿಗೆ ಹಾಗೂ ಅಡುಗೆ ಬಳಸುತ್ತಿದ್ದೇವೆ’ ಎಂದು ಪ್ರಾಂಶುಪಾಲರಾದ ಷಣ್ಮುಖಪ್ಪ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
`ಮುಂದಿನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಜಿಲ್ಲೆಯ ಎಲ್ಲ ಮೊರಾರ್ಜಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮ ಜರುಗಿಸಲಾಗುವುದು’ ಎಂದು ಅಧ್ಯಕ್ಷರು ತಿಳಿಸಿದರು.
ಇದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಗಾಂಧಿ ಶಾಲೆಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮಕ್ಕಳಿಗೆ ಅಭ್ಯಾಸ ಮಾಡಲು ವಿದ್ಯುತ್ ದೀಪದ ಕೊರತೆ ಕಂಡು ಬಂದಿದ್ದರಿಂದ ಗರಂ ಆದ ಅಧ್ಯಕ್ಷರು, `ನಿಮ್ಮ ಮನೆಯ ಮಕ್ಕಳಿಗೆ ಹೀಗೆಯೇ ಅಭ್ಯಾಸ ಮಾಡಿಸುತ್ತಿರಾ? ಕತ್ತಲಲ್ಲಿ ವಿದ್ಯಾರ್ಥಿಗಳು ಓದು ಮುಂದುವರಿಸಿದರೆ ಅವರ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ. ಶೀಘ್ರವೇ ಮತ್ತೆ ಭೇಟಿ ನೀಡಲಿದ್ದೇನೆ. ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ವಸತಿ ನಿಲಯದಲ್ಲಿ ಸೋಲಾರ ಹಿಟರ್ ದುರಸ್ತಿ ಕಾಣಿಸಿಕೊಂಡಿರುವುದರಿಂದ ತಣ್ಣಿರಲ್ಲಿ ಸ್ನಾನ ಮಾಡುತ್ತಿದ್ದೇವೆ ಎಂದು ಮಕ್ಕಳು ಅಧ್ಯಕ್ಷರ ಎದುರು ಅಳಲು ತೋಡಿಕೊಂಡರು. `ಮೂರು ವರ್ಷದಿಂದ ಸೋಲಾರ ಹಿಟರ್ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಪ್ರಾಂಶುಪಾಲ ಡಿ.ಭೀಮಪ್ಪ ತಿಳಿಸಿದರು. ತಾತ್ಕಾಲಿಕ ವ್ಯವಸ್ಥೆಗೆ ಕಲ್ಪಿಸಲು ಅಧ್ಯಕ್ಷರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/28-Hrp-4.gif)