ಎರಡೂ ಕಾಲಿಲ್ಲದ ಈ ಅಂಗವಿಕಲನಿಗೆ ಸೋರುವ ಪೆಟ್ಟಿಗೆ ಅಂಗಡಿಯೇ ಸೂರು….!

ಶಿರಾ:

         ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಯ್ಯ, ಎನ್ನ ಕಾಲೇ ಕಂಬ ದೇಹವೇ ದೇಗುಲ… ಅನ್ನುವ ಬಸವಣ್ಣನವರ ವಚನಕ್ಕೆ ಪೂರಕವೇನೋ ಅನ್ನುವಂತೆ ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಕೈ, ಕಾಲುಗಳ ಸ್ವಾದೀನವೂ ಸರಿಯಾಗಿಲ್ಲದೆ, ತೊಡಲು ಒಳ್ಳೆಯ ಬಟ್ಟೆ, ಸಮಯಕ್ಕೆ ಸರಿಯಾಗಿ ಊಟ ಹಾಗೂ ಸ್ವಂತದ್ದೊಂದು ಸೂರು ಕೂಡಾ ಇಲ್ಲದೆ ಹಳೆಯ ಖಾಲಿಯಾದ ಗೂಡಂಗಡಿಯಲ್ಲಿ ಬದುಕುತ್ತಿದ್ದಾನೆ.

         ಶಿರಾ ನಗರದ ಶಿರಾ-ಅಮರಾಪುರ ರಸ್ತೆಯ ಬೆಸ್ಕಾಂ ಕಛೇರಿಯ ಮುಭಾಗದ ಬದಿಯಲ್ಲಿ ಸಣ್ಣದೊಂದು ಹಳೆಯ ಪೆಟ್ಟಿಗೆ ಅಂಗಡಿ ಇದೆ. ದಾರಿ ಹೋಕರಿಗೆ ಈ ಪೆಟ್ಟಿಗೆ ಅಂಗಡಿಯ ಕಡೆ ಗಮನ ಹೋಗುತ್ತದೆಯಾದರೂ ಈ ಪೆಟ್ಟಿಗೆ ಅಂಗಡಿಯಲ್ಲಿರುವ ಕರಾಳ ಬದುಕಿನ ಚಿತ್ರಣ ಮಾತ್ರಾ ಯಾರಿಗೂ ಕಾಣಿಸುವುದಿಲ್ಲ. ತುಂಬಾ ಹಳೆಯದಾದ ಈ ಪೆಟ್ಟಿಗೆ ಅಂಗಡಿಯಲ್ಲಿ ಕಳೆದ 20 ವರ್ಷಗಳಿಂದಲೂ ಕೈ ಕಾಲುಗಳು ಸ್ವಾದೀನವಿಲ್ಲದ ವ್ಯಕ್ತಿಯೊಬ್ಬ ಸದಾ ಕುಳಿತಿರುತ್ತಾರೆ. ಈತನ ಹೆಸರು ರಾಜಶೇಖರಪ್ಪ. ಸುಮಾರು 60 ವರ್ಷದ ಈ ರಾಜಶೇಖರಪ್ಪನಿಗೆ ಕಳೆದ 20 ವರ್ಷಗಳಿಂದ ಈ ಹಳೆಯ ಪೆಟ್ಟಿಗೆ ಅಂಗಡಿಯೇ ಸ್ವಂತ ಮನೆಯಾಗಿಬಿಟ್ಟಿದೆ.

         ಕಾರಾಣಾಂತರಗಳಿಂದ ತನ್ನ ಎರಡೂ ಕಾಲು, ಕೈಗಳನ್ನು ಸ್ವಾದೀನಕ್ಕೆ ತಂದುಕೊಳ್ಳಲಾಗದೆ ಜೀವವನ್ನು ಹಿಡಿದಿಟ್ಟುಕೊಂಡು ಬದುಕುತ್ತಿರುವ ಈ ನಿರಾಶ್ರಿತನ ಬದುಕು ನಿಜಕ್ಕೂ ದುಸ್ಸಾಹಸವೇ ಸರಿ. ಅಂಗಡಿಯಲ್ಲಿ ಯಾವುದೇ ವ್ಯಾಪಾರ ಮಾಡಿಕೊಳ್ಳಲು ಕೂಡಾ ಈತನಿಗೆ ಸಾದ್ಯವಾಗುತ್ತಿಲ್ಲ. ಮಳೆ ಬಂದರೆ ಸೋರುವ ಹಾಗೂ ಆಗಲೋ ಈಗಲೋ ಮುರಿದು ಬೀಳಲಿರುವ ಈ ಹಳೆಯ ಪೆಟ್ಟಿಗೆ ಅಂಗಡಿಯೇ ಈತನ ಜಗತ್ತಾಗಿದೆ.

        ಇತ್ತೀಚೆಗಷ್ಟೆ ರಸ್ತೆ ಅಗಲೀಕರಣಗೊಳಿಸುವಾಗ ಈತನ ಪೆಟ್ಟಿಗೆಯನ್ನು ಪಕ್ಕಕ್ಕೆ ಸರಿಸಲಾಗಿದ್ದು ಮಳೆ ಬಂದಲ್ಲಿ ಈ ಪೆಟ್ಟಿಗೆ ಚರಂಡಿಗೆ ಬಿದ್ದರೂ ಅಚ್ಚರಿ ಇಲ್ಲ. ಇದ್ದ ತನ್ನ ಒಬ್ಬಳು ಪತ್ನಿ ಕೂಡಾ ಸಾವನ್ನಪ್ಪಿದ್ದು ಒಬ್ಬಳೇ ಮಗಳನ್ನು ಮದುವೆ ಮಾಡಿಕೊಟ್ಟಿರುವ ಈತನಿಗೆ ಈತನಕವೂ ವಾಸಿಸಲು ಮನೆಯೊಂದಿಲ್ಲದೆ ಹಳೆಯ ಪೆಟ್ಟಿಗೆ ಅಂಗಡಿಯೇ ಈತನ ವಾಸವಾಗಿದೆ.

       ಸರ್ಕಾರದಿಂದ ಅಂಗ ವಿಕಲ ವೇತನ ಬರುತ್ತಿದೆಯಾದರೂ ಮೂರು, ನಾಲ್ಕು ತಿಂಗಳಿಗೊಮ್ಮೆ ಬರುವ ಈ ವೇತನದಿಂದಲೂ ಜೀವನ ಸಾಗಿಸುವುದು ಕಷ್ಟವಾಗಿದೆ. ಈತನ ಸಂದಿಗ್ದತೆಯನ್ನರಿತ ಹೋಟೆಲ್ ನಾಗರಾಜಪ್ಪನವರು ಒಂದಿಷ್ಟು ಸಾಂಬಾರ್, ಅನ್ನ ಕಳಿಸಿದರೆ ಮಾತ್ರಾ ಈತನ ಹೊಟ್ಟೆ ತುಂಬುತ್ತದೆ. ಊಟವಿಲ್ಲದೆ ಅನೇಕ ಸಂದರ್ಬಗಳಲ್ಲಿ ಉಪವಾಸದ ದಿನಗಳನ್ನೂ ಈತ ಕಂಡಿದ್ದಾನೆ.

        ಅಕ್ಕಪಕ್ಕದ ಮನೆಯವರು ಒಂದಿಷ್ಟು ಅಕ್ಕಿ ಕೊಟ್ಟರೆ ಸೀಮೆಎಣ್ಣೆ ಸ್ಟೌವ್ ಸೌಂಡ್ ಮಾಡುತ್ತದೆಯಷ್ಟೆ. ಇಲ್ಲವಾದಲ್ಲಿ ಅದೂ ಇಲ್ಲವಾಗುತ್ತದೆ. ಈ ಹಿಂದೆ ಆಹಾರ ಪಡಿತರ ಚೀಟಿ ಇದ್ದಿತಾದರೂ ಅದನ್ನು ನವೀಕರಣಗೊಳಿಸಿಕೊಳ್ಳಲು ಹೆಬ್ಬೆಟ್ಟಿನ ಮುದ್ರೆ ಕೊಡಲು ಕಂದಾಯ ಇಲಾಖೆಗೆ ಹೋಗಲೂ ಸಾದ್ಯವಾಗದೆ ಪಡಿತರ ಚೀಟಿ ಕೂಡಾ ರದ್ದಾಗಿದೆ.

       ಶಿರಾ ನಗರ ವ್ಯಾಪ್ತಿಯಲ್ಲಿ ಸಾವಿರಾರು ಆಶ್ರಯ ಮನೆಗಳನ್ನು ನೀಡುವುದಾಗಿ ಹಾಗೂ ಅರ್ಹ ಫಲಾನುಭವಿಗಳನ್ನು ಗುರ್ತಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಇಲ್ಲಿನ ನಗರಸಭೆ ಕಳೆದ ಕೆಲ ತಿಂಗಳ ಹಿಂದಷ್ಟೇ ಕೆಲವು ಫಲಾನುಭವಿಗಳನ್ನು ಗುರ್ತಿಸಿ ನಿವೇಶನ ನೀಡಿದೆಯಾದರೂ ಈ ಅಂಗವಿಕಲನ ಕರಾಳ ಬದುಕಿನ ಚಿತ್ರಣ ನಗರಸಭೆಗೆ ಕಾಣದಾಗಿ ಹೋಯಿತೆ?.

       ಒಟ್ಟಾರೆ ಕಳೆದ 20 ವರ್ಷಗಳ ತನ್ನ ಜೀವನವನ್ನು ಹಳೆಯ ಪೆಟ್ಟಿಗೆ ಅಂಗಡಿಯಲ್ಲಿ ಕಷ್ಟದಿಂದಲೇ ಸಾಗಿಸುತ್ತಿರುವ ರಾಜಶೇಖರಪ್ಪನಿಗೆ ಇಲ್ಲಿನ ನಗರಸಭೆಯ ಆಡಳಿತ ಸ್ವಂತದೊಂದು ಸೂರನ್ನೂ ನೀಡಲಾಗದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಪಡಿತರ ಚೀಟಯನ್ನು ನವೀಕರಣಗೊಳಿಸಿಕೊಳ್ಳಲೂ ಸಾದ್ಯವಾಗದ ಈ ಅಂಗವಿಕಲನ ಬದುಕಿಗೆ ಕಂದಾಯ ಇಲಾಖೆಯಾಗಲಿ, ನಗರಸಭೆಯಾಗಲಿ ಗೂಡು ಕಟ್ಟಿಕೊಡುವ ಇಲ್ಲವೆ ಈತನ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕಿದೆ.

       ಇದು ಕೇವಲ ರಾಜಶೇಖರಪ್ಪನಂತಹ ಒಬ್ಬ ಅಂಗವಿಕಲನ ಕರಾಳ ಬದುಕಷ್ಟೇ ಅಲ್ಲ. ಇಂತಹ ಅನೇಕ ಅಂಗವಿಕಲರು ಸ್ವಂತದೊಂದು ಸೂರಿಲ್ಲದೆ ಬದುಕುತ್ತಿರುವ ಚಿತ್ರಣಗಳು ನಗರದಲ್ಲಿ ಸಾಕಷ್ಟಿದ್ದು ಇನ್ನಾದರೂ ಅಂತಹ ಅಂಗವಿಕಲರು ಹಾಗೂ ಅರ್ಹ ನಿರಾಶ್ರಿತರ ಬದುಕನ್ನು ಹಸನುಗೊಳಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬಲ್ಲದೇನೋ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link