ರಾಷ್ಟ್ರ ಕಟ್ಟಲು ಹೃದಯವಂತರು ಬೇಕು;ಶಿಮೂಶ

ಚಿತ್ರದುರ್ಗ :

         ಹೃದಯ ಸ್ವಚ್ಛವಾಗಿರಬೇಕು. ರಾಷ್ಟ್ರ ಕಟ್ಟಲು ಹೃದಯವಂತರು ಬೇಕು. ವ್ಯಕ್ತಿ ಅನಾರೋಗ್ಯಕರ ವಾತಾವರಣ ಸೃಷ್ಟಿಸುತ್ತಿದ್ದು, ದುರ್ಮಾರ್ಗಗಳಿಂದ ಹೊರಬರುವುದು ಸಹ ಜೀವನದ ಒಂದು ತಿರುವು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬಸವಕೇಂದ್ರ ಶ್ರೀಮುರುಘಾಮಠ, ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶರಣಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

           ಒಂದು ಜೀವಿಯನ್ನು ನೋಡಿ ಸಂತಸಪಡಬೇಕು. ಅದಕ್ಕೆ ನೋವನ್ನು ಕೊಡುವ ಕೆಲಸ ಮಾಡಬಾರದು. ಯಾರೂ ಸಹ ಜೀವಹಿಂಸೆ ಮಾಡಬಾರದು. ನಮ್ಮೊಳಗಿನ ತಿಳಿವು, ಅರಿವು ಅಳಿದು ಹೋಗಬಾರದು. ತಿಂಗಳ ತಿಳಿವು ದಿನದ ತಿಳಿವು ಆಗಬೇಕು. ಅರಿವು ಇಲ್ಲದೆ ಹೋದರೆ ಬದುಕು ಕೊಳೆಯುತ್ತದೆ. ನಮ್ಮ ಶರೀರದ ಎರಡು ಕಾಲುಗಳು ಎಂದರೆ ಆಶಾವಾದ ಮತ್ತು ಉತ್ಸಾಹ. ಚಲನಶೀಲತೆ ಮತ್ತು ಪ್ರಯೋಗಶೀಲತೆ ಇವು ಮುರುಘಾಮಠದ ಜೀವಂತಿಕೆ ಎಂದರು.

           ವಿಷಯಾವಲೋಕನ ಮಾಡಿದ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಬಿ. ಚಿದಾನಂದ ಮಾತನಾಡಿ, ಭಯೋತ್ಪಾದನೆ ಇಡೀ ಜಗತ್ತನ್ನು ಬಾಧಿಸುತ್ತಿದೆ. ಅಮೆರಿಕಾದ ಸರ್ವಾಧಿಕಾರದ ಧೋರಣೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇವು ಮಾನವ ನಿರ್ಮಿತವಾದ ಘಟನೆಗಳು. ಇನ್ನೊಂದು ಕಡೆ ಪ್ರಕೃತಿಯಿಂದಾಗುವ ಪರಿಣಾಮಗಳು. ಅತಿಯಾದ ಬಿಸಿಲು, ಭೂಕಂಪ ಮೊದಲಾದುವು ಹೆಚ್ಚು ಸಮಸ್ಯೆ ಸೃಷ್ಟಿಸುತ್ತಿದೆ. ನಗರೀಕರಣ, ಕೈಗಾರೀಕರಣ, ಆಧುನೀಕರಣದಿಂದಾಗಿ ವಿಶ್ವ ವಿನಾಶದತ್ತ ಬಂದು ನಿಂತಿದೆ. ವಿಶ್ವಸಂಸ್ಥೆ ಮಾಡುವ ಪ್ರಯತ್ನಕ್ಕೆ ಬೇರೆ ರಾಷ್ಟ್ರಗಳು ಸಹಕಾರ ನೀಡುತ್ತಿಲ್ಲ. ಭಾರತಕ್ಕೆ ಮಿಶ್ರ ಪ್ರತಿಫಲ ಸಿಗುತ್ತಿದೆ. ಕೇರಳ ಮತ್ತು ಮಡಿಕೇರಿ ಎದುರಿಸಿದ ಪ್ರಾಕೃತಿಕ ಮುನಿಸಿಗೆ ಕಾರಣವೂ ಇದೆ. ಇದಕ್ಕೆ ಸರ್ಕಾರ ಸ್ಪಂದಿಸಿದ ರೀತಿ ಏನೂ ಅಲ್ಲ. ಆದರೆ ನಾಗರೀಕ ಸಮಾಜ ಸ್ಪಂದಿಸಿದ್ದು ಸ್ಮರಣೀಯ. ಶ್ರೀಮಠ ಕೊಡಗಿನ ಜನರಿಗೆ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಸಾಂತ್ವನ ಹೇಳಿದ್ದು ಮುಖ್ಯ. ಅಬ್ದುಲ್‍ಕಲಾಂ 2025ರ ವೇಳೆಗೆ ವಿಶ್ವದ ಮುಂಚೂಣಿಗೆ ಭಾರತ ಹೋಗುತ್ತದೆಂದು ಹೇಳಿದ್ದರು. ಕಾರಣ ನಮ್ಮಲ್ಲಿ 18ರಿಂದ 45 ವರ್ಷ ವಯೋಮಿತಿಯವರು ಹೆಚ್ಚಿರುತ್ತಾರೆ ಎಂಬುದು ಅವರ ಆಶಯ. ಆದರೆ ಇದೇ ಯುವಕರು ಇಂದು ಹಲವಾರು ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮುಂದೆ ಬರುವುದು ಕಷ್ಟ ಎಂದು ಹೇಳಬಹುದು. ವಿಜ್ಞಾನ ಮತ್ತು ಅನುಭಾವದ ಸಂಘರ್ಷಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೈತಿಕ ಶಿಕ್ಷಣ ಕೊಡದೇ ಹೋದರೆ ನಮ್ಮ ಗುರಿ ತಲುಪಲು ಸಾಧ್ಯವಿಲ್ಲ. ಈ ದೃಷ್ಟಿಯಲ್ಲಿ ಯುವ ಸಮುದಾಯವನ್ನು ನೈತಿಕತೆಯ ಕಡೆ ಕರೆದುಕೊಂಡು ಹೋಗುವ ಕಾರ್ಯ ಆಗಬೇಕಿದೆ ಎಂದರು.

         ವೇದಿಕೆಯಲ್ಲಿ ಮಹೇಶ್ ಜೋಷಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುರೇಶ್ ಪಟ್ಟಣ್, ಪತ್ರಕರ್ತರು, ಚಿತ್ರದುರ್ಗ ಅವರನ್ನು ಸನ್ಮಾನಿಸಲಾಯಿತು.ಪ್ರಾರಂಭದಲ್ಲಿ ಜಮುರಾ ಕಲಾವಿದರಿಂದ ಪ್ರಾರ್ಥನೆ, ಶ್ರೀಮತಿ ಅನ್ನಪೂರ್ಣ ಸ್ವಾಗತಿಸಿದರು. ವೀರಣ್ಣ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link