ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಕುರಿತ ವಿಶೇಷ ಕಾರ್ಯಕ್ರಮ

ತುಮಕೂರು:

       ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರವನ್ನು ಕೆಲವು ಮಾನದಂಡಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆ ತನ್ನ ಹಾಗೂ ತನ್ನ ಕುಟುಂಬವನ್ನು ಒಳಗೊಂಡಂತೆ, ನೆರೆಹೊರೆ, ಸಮಾಜದಲ್ಲಿ ಪ್ರಗತಿಯ ಆಶಯವನ್ನು ಬಿತ್ತಿ ಬೆಳೆಸಿದಾಗ ಕೂಡ ಅದು ಅಭಿವೃದ್ದಿ ಎನಿಸಿಕೊಳ್ಳುತ್ತದೆ. ಇತಿಹಾಸದಲ್ಲಿನ ರಾಣಿ ಅಬ್ಬಕದೇವಿ, ಕೆಳದಿಯ ಚೆನ್ನಮ್ಮ, ಓಬವ್ವ ಇತರೆ ವೀರವನಿತೆಯರ ಧೈರ್ಯ ನಮ್ಮ ಹೆಣ್ಣು ಮಕ್ಕಳಲ್ಲಿ ಮೂಡುವಂತಾಗಬೇಕು.

       ದೆಹಲಿಯ ರಾಣಿ ರಜಿಯಾ ಸುಲ್ತಾನ್, ಮಹಿಳಾ ಶಿಕ್ಷಣಕ್ಕೆ ಒತ್ತಾಯಿಸಿದ ಸಾವಿತ್ರಿಬಾಪುಲೆ, ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್, ಸ್ಪೀಕರ್ ಕಾರ್ಯ ನಿರ್ವಹಿಸಿದ ಮೀರಾಕುಮಾರಿ ಮುಂತಾದ ಮಹಿಳೆಯರು ಹಲವು ಪ್ರಥಮಗಳಿಗೆ ನಾಂದಿಯಾಡಿದ್ದು ಇಂದಿನ ಹೆಣ್ಣು ಮಕ್ಕಳು ಕೂಡ ಆ ದಾರಿಯಲ್ಲಿ ಸಾಗಿ ಯಶಸ್ವಿಯಾಗಲು ಪ್ರಯತ್ನಿಸಬೇಕು ಹಾಗೂ ಭಾರತೀಯ ಸಮಾಜದಲ್ಲಿ ಗೃಹಿಣಿಯ ಸೇವೆಗೆ ಯಾವುದೇ ಮೌಲ್ಯ ನೀಡುವುದಿಲ್ಲವಾದರೂ ಅದು ಕೂಡ ಅಭಿವೃದ್ದಿಯ ಭಾಗವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಚೇತನ್ ದಾಸರಹಳ್ಳಿರವರು ನುಡಿದರು.

      ಇವರು ಇತ್ತೀಚೆಗೆ ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಂಡಿನಶಿವರದಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಕಾಲೇಜಿನ ಯುವರೆಡ್ ಕ್ರಾಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

       ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಅರ್ಥಶಾಸ್ತ್ರ ಸಹಾಯಕಪ್ರಾಧ್ಯಾಪಕ ಪ್ರೊ.ರಾಘವೇಂದ್ರ.ಜೆ ರವರು ಪ್ರಾಸ್ತಾವಿಕ ನುಡಿಯಲ್ಲಿ ನೈಸರ್ಗಿಕ ಸಹಜವಾದ ಸಮಾನತೆ ನಾಗರಿಕ ಸಮಾಜದಲ್ಲೂ ಮಹಿಳೆಗೆ ದೊರಕುವಂತಾಗಬೇಕೆಂದು ಆಶಿಸಿದರು.

        ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಶ್ರೀ ಶಿವಾನಂದಯ್ಯ ಎನ್.ಪಿ. ರವರು ಮಾತನಾಡುತ್ತಾ ಸಾಂಪ್ರದಾಯಿಕ ಸಮಾಜದಲ್ಲಿ ಗೌಣವಾಗಿದ್ದ ಮಹಿಳೆಯ ಪಾತ್ರ ಇಂದು ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿದ್ದು ಎಲ್ಲರೂ ಗುರುತಿಸುವಂತಾಗಿದೆ ಹಾಗೂ ಗೌರವಿಸುವಂತಾಗಿದೆ ಎಂದು ಹೇಳಿದರು.

        ವಿದ್ಯಾರ್ಥಿಯಾದ ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು, ಕುಮಾರಿ. ಸಹನಾ ಮತ್ತು ಯಶಸ್ವಿನಿ ಪ್ರಾರ್ಥಿಸಿದರು, ಕುಮಾರಿ. ಜಯಶೀಲ ಸ್ವಾಗತಿಸಿದರು ಹಾಗೂ ಕುಮಾರಿ. ಅನು ವಂದಿಸಿದರು. ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap