ಚಳ್ಳಕೆರೆ
ಕನ್ನಡ ಸಾಹಿತ್ಯ ಲೋಕದ ಮೇರು ಪರ್ವತವೆಂದೇ ಕರೆಯಲ್ಪಡುವ ತಳುಕಿನ ತ.ರಾ.ಸು.ರವರ ಜನ್ಮಶತಮಾನೋತ್ಸವದ ಅಂಗವಾಗಿ ಸಾಹಿತ್ಯಾಭಿಮಾನಿಗಳು ಅವರ ಸ್ವಕ್ಷೇತ್ರ ತಳಕಿನ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತ.ರಾ.ಸುರವರ ಸಾಹಿತ್ಯದ ಕೊಡುಗೆಯನ್ನು ನೆನಪಿಸುವ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ದೊಡ್ಡ ಮಲ್ಲಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ವಿಶೇಷ ಗೌರವವನ್ನು ಹೊಂದಿರುವ ಅನೇಕ ಹಿರಿಯ ಸಾಹಿತಿಗಳಲ್ಲಿ ತ.ರಾ.ಸುರವರು ಸಹ ಒಬ್ಬರಾಗಿದ್ಧಾರೆ. ಅವರ ಹುಟ್ಟಿನಲ್ಲಿಯೇ ಅವರ ಜನ್ಮ ಶತಮಾನೋತ್ಸವ ಕಾರ್ಯವನ್ನು ಶಾಲೆಯಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೂ ಸಹ ಇವರ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ.
ಚಳ್ಳಕೆರೆ ತಾಲ್ಲೂಕು ಅನೇಕ ಹಿರಿಯ ಸಾಹಿತಿ ದಿಗ್ಗಜರುಗಳನ್ನು ಹೊಂದಿದ ಪುಣ್ಯಭೂಮಿಯಾಗಿದೆ. ತ.ರಾ.ಸುರವರು ಇಂತಹ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದರೂ ಸಹ ವಿಶ್ವವೇ ಮೆಚ್ಚುವಂತಹ ಅಮೋಘ ಸಾಹಿತ್ಯದ ಕೃತಿಗಳನ್ನು ನಾಡಿನ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಮುಂದಿನ ಯುವ ಸಾಹಿತಿಗಳು ತ.ರಾ.ಸುರವರ ಸಾಹಿತ್ಯ ಕೃಷಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಲು ಮನವಿ ಮಾಡಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಇಂದಿಗೂ ಸಹ ತ.ರಾ.ಸುರವರ ಸಾಹಿತ್ಯದ ಶಕ್ತಿಯನ್ನು ಅರಿಯುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಪ್ರಸ್ತುತ ಹಲವಾರು ಸಾಹಿತ್ಯದ ಕೃತಿಗಳು ಬೆಳಕಿಗೆ ಬಂದಿದ್ದರೂ ಸಹ ತ.ರಾ.ಸುರವರ ಸಾಹಿತ್ಯುದಲ್ಲಿದ್ದ ನೈಜತನ ಹಾಗೂ ಗಟ್ಟಿತನ ಇಂದಿನ ಸಾಹಿತ್ಯದಲ್ಲಿ ಕಾಣಲು ಸಾಧ್ಯವಾಗಿಲ್ಲ.
ಮುಂದಿನ ದಿನಗಳಲ್ಲಾದರೂ ನಮ್ಮ ಯುವ ಸಾಹಿತಿಗಳು ಹಾಗೂ ಲೇಖಕರು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉನ್ನತ್ತ ಮಟ್ಟಕ್ಕೆ ಏರಿಸುವಂತಹ ಸಾಹಿತ್ಯವನ್ನು ರಚಿಸಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಶಿಕ್ಷಕ ಕೆ.ಎಸ್.ಶ್ರೀಕಾಂತ್, ತ.ರಾ.ಸುರವರ ಹುಟ್ಟಿರಿನಲ್ಲೇ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂತೋಷವೆನ್ನಿಸುತ್ತದೆ. ಈ ಬಗ್ಗೆ ಸಾಹಿತ್ಯ ಪ್ರೇಮಿಗಳಲ್ಲಿ ಚರ್ಚಿಸಿದಾಗ ಎಲ್ಲಾ ರೀತಿಯ ಸಹಕಾರ ನೀಡಿದ್ಧಾರೆ. ತ.ರಾ.ಸುರವರು ಸಾಹಿತ್ಯ ಕ್ಷೇತ್ರದ ಅದ್ವಿತೀಯ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅದ್ಯಕ್ಷ ಓಬಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಿ.ಎಲ್.ವಿಜಯ, ಚಿಟ್ಟಿಬಾಬು, ಮಂಜುನಾಥ, ಸುನೀತಾ, ಪ್ರಮೀಳಾ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತ.ರಾ.ಸುರವರ ಸಾಹಿತ್ಯಾಭಿಮಾನಿ, ಗ್ರಾಮದ ಹಿರಿಯ ಮುಖಂಡ ಓಬಣ್ಣನವರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
