ಹೊಸದುರ್ಗ:
ಪಟ್ಟಣದ ಕುಂಚಿಟಿಗ ಮಠದಲ್ಲಿ ತಾಲೂಕಿನ ಕೆರೆಗಳ ಜೀಣೋದ್ದಾರಕ್ಕಾಗಿ ಯೋಜನೆ ರೂಪಿಸಲು ಹಾಗೂ ಯೋಜನೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸೇರಿದ್ದ ಗಣ್ಯರು ಮಠಾೀಶರು ಕೈಗೊಂಡಿರುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು.
ತಾಲೂಕಿನಲ್ಲಿ ಮಳೆಯಾಶ್ರಿತದಿಂದಲೇ ತುಂಬುವಂತಹ ಸಾಕಷ್ಟು ಕೆರೆಗಳಿವೆ ಅವುಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಬಿದ್ದಂತಹ ಮಳೆ ನೀರನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಹಿಂಗಿಸುವ ಯೋಜನೆ ರೂಪಿಸಬೇಕು. ಒತ್ತುವರಿಯಾಗಿರುವ ವೇದಾವತಿ ನದಿಪಾತ್ರ ಗುರುತಿಸಿ ಪುನಶ್ಚೇತನ ಮಾಡುವ ಮೂಲಕ ನದಿಗೆ ಜೀವಕಳೆ ತುಂಬಬೇಕು. ಸಂಪೂರ್ಣ ಮಧ್ಯಪಾನದ ನಿಷೇಧದ ಬಗ್ಗೆಯೂ ಹೋರಾಟ ರೂಪಿಸಬೇಕು.
ಈ ಮಹಾತ್ವಾಕಾಂಕ್ಷಿ ಯೋಜನೆಗೆ ಬೇಕಾಗುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿಕೊಡಲಾಗುವುದು. ಅನೇಕರು ಇದೊಂದು ಐತಿಹಾಸಿಕ ಯೋಜನೆಯಾಗಿ ರೂಪಗೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಣೇಹಳ್ಳಿ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲ ಹಂತದಲ್ಲಿ ನಾಲ್ಕು ಕೆರೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಲಾಗುವುದು. ಕೆರೆಗಳಿಗೆ ನೀರು ತರುವುದು ನಮ್ಮ ಉದ್ದೇಶವಲ್ಲ. ಮಳೆ ನೀರಿನಿಂದ ಕೆರೆ ತುಂಬಿಸುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಸರಕಾರ ಅನುದಾನ ನೀಡುತ್ತದೆಯೆಂದು ಈ ಕಾರ್ಯಕ್ಕೆ ಮುಂದಾಗಿಲ್ಲ. ಜನ ಸಮುದಾಯಕ್ಕೆ ಒಳ್ಳೆಯದಾಗಲಿ ಎನ್ನುವ ಅಭಿಲಾಷೆ ಹೊಂದಲಾಗಿದೆ ಎಂದರು.
ಕುಂಚಿಟಿಗ ಮಠದ ಡಾ. ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸರಕಾರ, ಸಂಘ ಸಂಸ್ಥೆಗಳ ಅನುದಾನ, ಗ್ರಾಮಸ್ಥರ ಸಹಕಾರದಿಂದ ಕೆರೆಗಳ ಅಭಿವೃದ್ಧಿ ಪಡಿಸಲಾಗುವುದು. ವರ್ಷದ ಹಿಂದೆಯೇ ತಾಲೂಕಿನ ಮಠಾೀಶರು ಈ ಬಗ್ಗೆ ಚಿಂತನೆ ಮಾಡಿದ್ದೇವು. ಈಗ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದ್ದೇವೆ ಎಂದರು.
ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಕೇವಲ ಕೆರೆಗಳನ್ನು ಹೂಳೆತ್ತುವುದಷ್ಟೇ ಅಲ್ಲದೇ ನೀರಿನ ಸಂರಕ್ಷಣೆ, ನಿರ್ವಹಣೆ, ಬಳಕೆಯ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ವೀಕ್ಷಣೆ ಮಾಡಿದ್ದು, ಅಧಿಕಾರಿಗಳು ಹಾಗೂ ಸರಕಾರಕ್ಕೆ ಬಹು ಬೇಗ ನೀರು ಹರಿಸುವಂತೆ ಒತ್ತಡ ತರಲಾಗಿದೆ. ನಾವು ಮಾಡುತ್ತಿರುವ ಕಾರ್ಯದಿಂದ ಜನರಿಗೆ ನೀರಿನ ಮಹತ್ವದ ಬಗ್ಗೆ ಸ್ವ ಅರಿವು ಮೂಡಬೇಕು ಎಂದು ಹೇಳಿದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಪರಿಸರರಕ್ಷಣೆ, ಸ್ವಚ್ಚತೆ, ಮೌಢ್ಯತೆ, ಬಯಲು ಮುಕ್ತ ಶೌಚಾಲಯ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಮೊದಲ ಆದ್ಯತೆಯಾಗಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ. ತಾಲೂಕಿನ ಕೆರೆಗಳ ಸಂಪೂರ್ಣ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಸಾಮಾಜಿಕ ಕಳಕಳಿಯುಳ್ಳ ಯೋಜನೆಯಾಗಿರುವ ಇದು ಕೇವಲ ಭರವಸೆಯಾಗಿ ಉಳಿಯದೇ, ಜನರಿಗೆ ಅದರ ಫಲ ನೀಡಲಿದ್ದೇವೆ ಎಂದರು.
ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ತಾಲೂಕಿನ ಮಠಾೀಶರು ಕೈಗೊಂಡಿರುವ ನಿರ್ಧಾರಕ್ಕೆ ಎಲ್ಲಾ ರೀತಿಯ ನೆರವು ಕೊಡಲಾಗುವುದು. ಪ್ರಾಯೋಗಿಕವಾಗಿ ಪ್ರಾರಂಭಿಕ ಹಂತದಲ್ಲಿ ಮಠದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ಉತ್ತಮ ಎಂದರು.
ಮಾಜಿ ಸಚಿವ ಮಹಿಮಾ ಪಟೇಲ್ ಮಾತನಾಡಿ, ನೀರಿನ ಸಮಸ್ಯೆ ಉಲ್ಬಣ ಆದಾಗ ಎಚ್ಚೆತ್ತು ಕೊಳ್ಳುವುದಕ್ಕಿಂತ ಮುಂಚೆಯೇ ಜನ ಜಾಗೃತರಾಗಬೇಕು. ಕೇವಲ ಕೆರೆ ಕಟ್ಟೆಗಳನ್ನು ಹೂಳೆತ್ತಿದ್ದರೇ ಸಾಲದು, ಅರಣ್ಯ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದರಿಂದ ನೀರನ್ನು ಹಿಡಿದಿಡಲು ಸಾಧ್ಯವಾಗುತ್ತದೆ.ಅಲ್ಲಲ್ಲಿಕಿರುಅರಣ್ಯ ಪ್ರದೇಶಗಳನ್ನು ಬೆಳಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಇಲ್ಕಲ್ ವಿಜಯ್ಕುಮಾರ್, ಮಾಜಿ ಜಿಪಂ ಸದಸ್ಯ ಬಿ.ಎಸ್.ದ್ಯಾಮಪ್ಪ, ಜೆಡಿಎಸ್ ಮುಖಂಡರಾಗಿ ಶಿವಮೂರ್ತಿ, ಬಿಜೆಪಿ ಮುಖಂಡರಾದ ಕಲ್ಲೇಶಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಗುರುಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಪಿ.ಬಿ.ಓಂಕಾರಪ್ಪ, ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಮಂಜುನಾಥ್, ಕೋಡಿಹಳ್ಳಿ ತಮ್ಮಣ್ಣ, ಮಧುರೆ ನಟರಾಜ್, ಪಟ್ಟಣದ ಮುಖಂಡರಾದ ಬಿ.ವಿ.ಲವಕುಮಾರ್ ಮತ್ತಿತರಿದ್ದರು.