ಚಳ್ಳಕೆರೆ
ಪ್ರತಿವರ್ಷದ ಯುಗಾದಿ ಹಬ್ಬದಂದು ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿ ಹಟ್ಟಿಯ ಬಾವಾಜಿ ಸೇವಾಶ್ರಮದ ಶ್ರೀವೆಂಕಟೇಶ್ವರ ಸ್ವಾಮಿ ಪಲ್ಲಕಿ ಉತ್ಸವವನ್ನು ಶನಿವಾರ ಸಂಜೆ ಆಶ್ರಮದ ಸ್ವಾಮೀಜಿ ಶಿವಸಾಧುಸ್ವಾಮೀಜಿಯವರ ನೇತೃತ್ವದಲ್ಲಿ ವೈಭವದಿಂದ ನಡೆಸಲಾಯಿತು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀಸ್ವಾಮಿಯ ಪಲ್ಲಕಿ ಉತ್ಸವವನ್ನು ನಡೆಸಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವರ ದರ್ಶನ ಪಡೆದು ಕಾಣಿಕೆಯನ್ನು ಸಲ್ಲಿಸಿ, ಉತ್ತಮ ಮಳೆ, ಬೆಳೆ ನೀಡುವಂತೆ ಪ್ರಾರ್ಥಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಶಿವಸಾಧುಸ್ವಾಮೀಜಿ, ಗ್ರಾಮದಲ್ಲಿ ಉತ್ತಮ ಮಳೆ, ಬೆಳೆ ನೀಡುವಂತೆ ದೇವರನ್ನು ಪ್ರಾರ್ಥಿಸಿ ಸಂಜೆಯ ವೇಳೆಗೆ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನಮ್ಮ ಪೂರ್ವಜರ ಪದ್ದತಿಯಂತೆ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲರೂ ಸಹ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಜನತೆಗೆ ಒಳಿತನ್ನು ಬಯಸಿ ದೇವರಲ್ಲಿ ಪ್ರಾರ್ಥಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಮಾನಾಯ್ಕ, ಗೋವಿಂದನಾಯ್ಕ, ಪುರುಷೋತ್ತ ಮನಾಯ್ಕ, ವೆಂಕಟೇಶ್, ಗಿರಿಕುಮಾರ್, ಹೇಮಂತಕುಮಾರ್, ಕುಮಾರನಾಯ್ಕ, ಮನು, ರಮೇಶ್, ಪುಟ್ಟಿಬಾಯಿ, ಕಾಳಿಬಾಯಿ, ಲಕ್ಷ್ಮಿಬಾಯಿ ಮುಂತಾದವರು ಉಪಸ್ಥಿತರಿದ್ದರು.