ಪಕ್ಷದಲ್ಲಿ ಹಿಡಿತ ಕಳೆದುಕೊಂಡ ಆರ್ ಅಶೋಕ್

ಬೆಂಗಳೂರು:

      ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಪಕ್ಷದಲ್ಲಿ ತನ್ನ ಹಿಡಿತ ಕಳೆದುಕೊಳ್ಳುವ, ಜತೆಗೆ ವರಿಷ್ಠರ ಕೆಂಗೆಣ್ಣಿಗೂ ಸಹ ಗುರಿಯಾಗಿದ್ದಾರೆ.

      ಒಂದೆಡೆ ಸ್ವಯಂಕೃತ ತಪ್ಪುಗಳು ಮತ್ತೊಂದೆಡೆ ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಪಿತೂರಿಯಿಂದ ಅಶೋಕ್ ರೋಸಿ ಹೋಗಿದ್ದಾರೆ. ಬೆಂಗಳೂರು ನಗರ ಮತ್ತು ರಾಜ್ಯ ಮಟ್ಟದಲ್ಲಿ ಅವರು ಪ್ರಭಾವ ಕಳೆದುಕೊಳ್ಳುತ್ತಿದ್ದಾರೆ.

     ಬಂಡೆಯಂತೆ ತಮ್ಮ ಪರವಾಗಿ ನಿಂತಿದ್ದ ಕೇಂದ್ರ ಸಚಿವ ಹಾಗೂ ಹಿರಿಯ ಮುಖಂಡ ಅನಂತ ಕುಮಾರ್ ಅನಾರೋಗ್ಯಕ್ಕೀಡಾಗಿ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಂದರ್ಭವನ್ನು ನೋಡಿ ಅಶೋಕ್ ಅವರ ವಿರುದ್ಧ ಬಿಜೆಪಿಯಲ್ಲಿ ಇದೀಗ ಕುಟುಕು ಕಾರ್ಯಾಚರಣೆ ನಡೆಯುತ್ತಿದೆ. ಅಶೋಕ್ ಬೆಂಗಳೂರಿನಲ್ಲಿ ತನ್ನ ಹಿಡಿತ ಕಳೆದುಕೊಂಡಿದ್ದು, ಮತ್ತೊಂದೆಡೆ ವಕ್ಕಲಿಗ ನಾಯಕ ಎನ್ನುವ ಅವರ ವರ್ಚಸ್ಸಿಗೂ ಧಕ್ಕೆಯಾಗುತ್ತಿದೆ.

     ಬೆಂಗಳೂರಿನ ಬಲಿಷ್ಠ ನಾಯಕರೆಂದು ಗುರುತಿಸಿಕೊಂಡಿದ್ದ ಅಶೋಕ್, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಸಹ ಅಧಿಕಾರವನ್ನು ಪಕ್ಷಕ್ಕೆ ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಚುನಾವಣೆ ನಡೆದಾಗ ಪಕ್ಷೇತರರನ್ನು ತನ್ನ ತೆಕ್ಕೆಗೆ ಕರೆದುಕೊಂಡು ಬರುವಲ್ಲಿ ಅಶೋಕ್ ವಿಫಲರಾಗಿದ್ದರು. ಬದಲಿಗೆ ಪಕ್ಷದ ಕಚೇರಿ ಬಾಗಿಲಿಗೆ ಬಂದಿದ್ದ ಪಕ್ಷೇತರರನ್ನು ನಿರ್ಲಕ್ಷಿಸಿದರಲ್ಲದೇ ದರ್ಪ ಪ್ರದರ್ಶಿಸಿದ್ದರು. ಆ ಸಿಟ್ಟು ಈಗಲೂ ಪಕ್ಷೇತರರಲ್ಲಿದೆ.

     ಆಗ ಕೇಂದ್ರ ಸಚಿವರಾಗಿದ್ದ ಈಗಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಘಟಾನುಘಟಿಗಳು ಅಶೋಕ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯೂ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಅಗತ್ಯ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲರಾಗಿದ್ದಾರೆ.

    ಲೋಕಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಲಿಕಾನ್ ನಗರಿ ಬೆಂಗಳೂರಿನ ಬಿಬಿಎಂಪಿ ಆಡಳಿತವನ್ನು ಬಿಜೆಪಿ ತನ್ನ ಕೈವಶ ಮಾಡಿಕೊಂಡಿದ್ದರೆ ಇಡೀ ದೇಶಕ್ಕೆ ಸ್ಪಷ್ಟ ಸಂದೇಶವೊಂದನ್ನು ಕಳುಹಿಸಬಹುದಿತ್ತು. ಅದಕ್ಕೆ ಬೇಕಾದ ಸಿದ್ಧತೆ, ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವಲ್ಲಿ ಅಶೋಕ್ ಸೋತಿದ್ದಾರೆ.

   ಬಿಬಿಎಂಪಿ ಚುನಾವಣೆಗೂ ಮುನ್ನವೇ ಅಶೋಕ್ ಅವರ ಕ್ರಮಕ್ಕೆ ಶಾಸಕರಾದ ವಿ. ಸೋಮಣ್ಣ ಮತ್ತಿತರರು ಪಕ್ಷದ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟಾದರೂ ಅವರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಿಬಿಎಂಪಿ ಆಡಳಿತ ಕೈ ತಪ್ಪಲು ಅಶೋಕ್ ಕಾರಣ ಎಂದು ಟ್ವೀಟ್ ಮಾಡಿದ್ದರು. ಆದರೆ ಸಂತೋಷ್ ಅವರ ಎದುರಾಳಿ ಬಿ.ಎಸ್. ಯಡಿಯೂರಪ್ಪ ಅವರು ಅನಿವಾರ್ಯವಾಗಿ ಅಶೋಕ್ ಅವರನ್ನು ಬಹಿರಂಗವಾಗಿ ಸಮರ್ಥಿಸಿಕೊಂಡು ಮುಜುಗರ ತಪ್ಪಿಸಿಕೊಂಡಿದ್ದಾರೆ.

   ಇಷ್ಟಕ್ಕೆ ಸುಮ್ಮನಾಗಿದ್ದರೆ ಬಹುಶಃ ಏನೂ ಆಗುತ್ತಿರಲಿಲ್ಲವೆನೋ. ಬಿ.ಎಲ್. ಸಂತೋಷ್ ಅವರ ವಿರುದ್ಧ ಆರ್. ಅಶೋಕ್ ಚಾಣಕ್ಯನ ವಾಕ್ಯ ಬಳಸಿ ಮಾಡಿರುವ ಟ್ವೀಟ್ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಈ ವಿಚಾರ ಬಿಜೆಪಿ ಹೈಕಮಾಂಡ್‍ವರೆಗೂ ತಲುಪಿದೆ. ಅಮಿತ್ ಷಾ ತಂಡದ ಸಂತೋಷ್ ಬಗೆಗಿನ ಟ್ವೀಟ್‍ನಿಂದ ಅಶೋಕ್‍ಗೆ ಕಂಟಕ ಕಾದಿದೆ ಎನ್ನಲಾಗುತ್ತಿದೆ.

   ಪಕ್ಷದ ಹಿರಿಯರಾಗಿ ಅಶೋಕ್ ಮಂಡ್ಯ, ರಾಮನಗರ ಸೇರಿದಂತೆ ವಕ್ಕಲಿಗರ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ  ವಿಚಾರದಲ್ಲೂ ಅತೀವ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮುಂಬರುವ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸನ್ನದ್ಧರಾಗುವಂತೆ ಬಿಜೆಪಿ ರಾಜ್ಯಾಧ್ಕಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸೂಚನೆ ನೀಡಿದರೂ ಸಹ ಅದನ್ನು ಪಾಲಿಸಲು ಆಸಕ್ತಿ ತೋರುತ್ತಿಲ್ಲ. ಇದು ಸಹ ವರಿಷ್ಠರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಎಲ್ಲವನ್ನೂ ಸಂತೋಷ್ ಮತ್ತಿತರ ಮುಖಂಡರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ.

   ಇನ್ನು ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಳ್ಳುತ್ತಿದೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಿರುವ ಟ್ವೀಟ್ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಸೂಚನೆ ನೀಡಿದೆ. ಹೀಗಾಗಿ, ಬಿಜೆಪಿಯ ಒಕ್ಕಲಿಗರ ನಾಯಕ, ಆರ್.ಆಶೋಕ್ ಅವರನ್ನು ಮೂಲೆ ಗುಂಪು ಮಾಡಲು ವರಿಷ್ಠರು ಮುಂದಾಗಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link