ನಗರದಲ್ಲಿ ರೌಡಿತನ ನಿಗ್ರಹಕ್ಕೆ ಪೊಲೀಸ್ ತಂಡ

ತುಮಕೂರು

      ‘‘ತುಮಕೂರು ನಗರದಲ್ಲಿ ಪುಂಡ ಪೋಕರಿಗಳನ್ನು ಹಾಗೂ ರೌಡಿಗಳನ್ನು ನಿಗ್ರಹಿಸಲು ಪೊಲೀಸರ ವಿಶೇಷ ತಂಡ ರಚಿಸಿದ್ದು, ಈ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ’’ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯಾ ವಿ.ಗೋಪಿನಾಥ್ ಪ್ರಕಟಿಸಿದರು.
‘‘ನಗರದ 15-20 ಅಪರಾ‘ ಪ್ರಕರಣಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಪುಂಡ ಪೋಕರಿಗಳನ್ನು ಹಾಗೂ ರೌಡಿಗಳನ್ನು ನಿಗ್ರಹಿಸಲು ಈಗ ಸಕಾಲ ಉಂಟಾಗಿದೆ’’ ಸೋಮವಾರ ಮಧ್ಯಾಹ್ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು.

         ‘‘ಪೊಲೀಸರ ವಿಶೇಷ ತಂಡವು ಈಗಾಗಲೇ ಪ್ರತಿನಿತ್ಯ ರಾತ್ರಿ 10 ಗಂಟೆ ನಂತರ ನಗರಾದ್ಯಂತ ಕ್ರಿಯಾಶೀಲವಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಈ ತಂಡ ಸಂಚರಿಸುತ್ತಿದೆ. ಪೊಲೀಸ್ ಇಲಾಖೆಯ ರೌಡಿ ಪಟ್ಟಿಯಲ್ಲಿರುವವರನ್ನು ಗುರುತಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡುತ್ತಿದೆ. ಅವರನ್ನು ಠಾಣೆಗೆ ಕರೆಸಿ, ಎಚ್ಚರಿಕೆ ನೀಡಲಾಗುತ್ತಿದೆ. ಇದಲ್ಲದೆ ನಗರದ ಬಾರ್‌ಗಳ ಬಳಿ ಗಲಾಟೆ ಮಾಡುವವರು, ಆಟದ ಮೈದಾನಗಳಲ್ಲಿ ಅನಗತ್ಯವಾಗಿ ಅವೇಳೆಯಲ್ಲಿ ಕುಳಿತಿರುವವರು, ರಾತ್ರಿ ವೇಳೆ ರಸ್ತೆಗಳಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವವರನ್ನು ಈ ತಂಡವು ವಿಚಾರಣೆ ಮಾಡಿ ಕಳಿಸುತ್ತಿದೆ. ಅನುಮಾನ ಬಂದರೆ ಅವರನ್ನು ಠಾಣೆಗೆ ತರಲಾಗುತ್ತಿದೆ. ರಾತ್ರಿ ವೇಳೆಯ ಬೀಟ್ ಜೊತೆಗೆ ಈ ಕಾರ್ಯವೂ ನಡೆಯುತ್ತಿದೆ’’ ಎಂದು ಅವರು ವಿವರಿಸಿದರು.

ಊರು ಬಿಡುತ್ತಿದ್ದಾರೆ

       ‘‘ಪೊಲೀಸರು ಆರಂಭಿಸಿರುವ ಈ ಕಾರ್ಯದಿಂದ ಕಂಗೆಟ್ಟಿರುವ ಪುಂಡರು ಹಾಗೂ ರೌಡಿಗಳು ಅನಿವಾರ್ಯವಾಗಿ ತಾವು ವಾಸವಿರುವ ಬಡಾವಣೆ ಬಿಡುವಂತಹ ಬೆಳವಣಿಗೆ ಕಂಡುಬಂದಿದೆ’’ ಎಂದು ಡಾ. ದಿವ್ಯಾ ವಿ.ಗೋಪಿನಾಥ್ ಹೇಳಿದರು.

         ‘‘ಸಮಾಜದಲ್ಲಿ ಶೇ. 96 ರಷ್ಟು ಒಳ್ಳೆಯವರೇ ಇರುತ್ತಾರೆ. ಆದರೆ ಶೇ. 3 ರಿಂದ 4 ರಷ್ಟು ಇರುವ ದುಷ್ಟರಿಂದ ಇಡೀ ಸಮಾಜ ಕಷ್ಟವನ್ನು ಅನು‘ವಿಸುವಂತಾಗುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯು ಇಂಥ ಪುಂಡರು ಮತ್ತು ರೌಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಿದೆ’’ ಎಂದು ಅವರು ಖಡಕ್ ಆಗಿ ಹೇಳಿದರು.

ತಿಪಟೂರಿನಲ್ಲೂ ಕ್ರಮ

          ‘‘ಪ್ರಸ್ತುತ ತುಮಕೂರು ನಗರದಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ತಿಪಟೂರು ನಗರದಲ್ಲೂ ಇದೇ ಮಾದರಿ ಕ್ರಮ ಕೈಗೊಳ್ಳಲಾಗುವುದು’’ ಎಂದು ಎಸ್ಪಿ ದಿವ್ಯಾ ವಿ.ಗೋಪಿನಾಥ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಡಾ.ಶೋಭಾರಾಣಿ, ನಗರ ಡಿವೈಎಸ್ಪಿ ಕೆ.ಎಸ್.ನಾಗರಾಜು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link