ಹುಳಿಯಾರು
ವಿದ್ಯಾರ್ಥಿಗಳೇ ನೀವು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಗುರಿ ಇಟ್ಟುಕೊಂಡಿರುವವರಾಗಿದ್ದರೆ ಉಪನ್ಯಾಸಕರ ನೋಟ್ಸ್ ಓದಬೇಡಿ. ಬದಲಾಗಿ ಪಠ್ಯ ಪುಸ್ತಕ ಓದಿ ನೀವೇ ನೋಟ್ಸ್ ಸಿದ್ಧಪಡಿಸಿಕೊಳ್ಳಿ.
ಏಕೆಂದರೆ ಶೇ.100 ರಷ್ಟು ಅಂಕಗಳಿಸುವಷ್ಟು ನೋಟ್ಸ್ಗಳನ್ನು ಯಾವ ಉಪನ್ಯಾಸಕರೂ ಮಾಡಿರುವುದಿಲ್ಲ. ಅವರು ಶೇ.70 ರಷ್ಟಕ್ಕೆ ಮಾತ್ರ ಮಾಡಿರುತ್ತಾರೆ, ಅದನ್ನು ನೀವು ಓದಿದರೆ ಶೇ.40-50 ಕ್ಕೆ ಸೀಮಿತರಾಗುತ್ತೀರಿ ಎಚ್ಚರ ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಮತ್ತು ರೇಂಜರ್ಸ್ ರೋವರ್ಸ್ ಘಟಕಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಹಿಯಾ ಅವರು ಸ್ವಾವಲಂಭಿಯಾಗಿ ಬದುಕುವಂತೆ ಮಾಡುವುದು ಶಿಕ್ಷಣ ಅಂದರೆ, ವಿವೇಕಾನಂದರೂ ಸಹ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡುವುದೇ ಶಿಕ್ಷಣ ಅಂದಿದ್ದಾರೆ. ಹಾಗಾಗಿ ಯಂತ್ರದ ರೀತಿ ಕಂಠಪಾಠ ಮಾಡುವುದ ಬಿಟ್ಟು ಪಠ್ಯವನ್ನು ಅರ್ಥ ಮಾಡಿಕೊಳ್ಳಿ.
ಉಪನ್ಯಾಸಕರು ಪಾಠ ಮಾಡುವಾಗಲೇ ಅರ್ಥ ಮಾಡಿಕೊಂಡರೆ ಪರೀಕ್ಷೆ ಎದುರಿಸುವುದು ಸುಲಭ. ಹಾಗಾಗಿ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತ್ತೆ ಓದದೆ ಅಂದಿನ ಪಾಠವನ್ನು ಅಂದೇ ಓದಿ ಅರ್ಥ ಮಾಡಿಕೊಳ್ಳಿ. ಓದುವಾಗ ಮನಸ್ಸು ಸಾಕು ಎನ್ನಿಸಿದರೆ ತಕ್ಷಣ ನಿಲ್ಲಿಸಿ ಸಂಗೀತ, ಆಟ, ಧ್ಯಾನ ಮಾಡಿ ನಂತರ ಓದಿ. ಮುಖ್ಯವಾಗಿ ಟಿವಿಯಿಂದ ಮೊದಲು ದೂರವಿರಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್.ನಾಗರತ್ನ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಬಿಎಂಎಸ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ವಲಿ.ಆರ್ ವಿಶೇಷ ಉಪನ್ಯಾಸ ನೀಡಿದರು.
ದಾನಿಗಳಾದ ಲೋಕಪ್ರಭಾಕರ್, ವರ್ತಕರ ಸಂಘದ ಅಧ್ಯಕ್ಷ ಎಂಎಸ್ಆರ್ ನಟರಾಜು, ತಾ.ಪಂ ಸದಸ್ಯ ಹೆಚ್.ಎನ್.ಕುಮಾರ್, ಕೆಂಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಉಮೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎಂ.ನವೀನ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳುಗಳಾದ ಸುವರ್ಣಮ್ಮ, ದಾಸಪ್ಪ, ದುರ್ಗಣ್ಣ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.
