ಬೆಂಗಳೂರು:

ಪ್ರಜಾಪ್ರತಿನಿಧಿ ನ್ಯೂಸ್ ಚಾನೆಲ್ನವರೆಂದು ಹೇಳಿಕೊಂಡು ಬಟ್ಟೆ ಅಂಗಡಿ ಮಾಲೀಕರೊಬ್ಬರಿಂದ ಸುಲಿಗೆ ನಡೆಸಿದ್ದ ಇಬ್ಬರು ಖದೀಮರನ್ನು ಬನಶಂಕರಿ ಪೊಲೀಸರು ಬಂಧಿಸಿ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಕೆರೆ ಹಳ್ಳಿಯ ಮಹದೇವ್ (31), ನಾಗರಬಾವಿಯ ಅಶೋಕ್ ಕುಮಾರ್ ಅಲಿಯಾಸ್ ಅಶೋಕ್ (33) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಇನೋವಾ ಹಾಗೂ ಓಮ್ನಿ ಸೇರಿ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೆಆರ್ ರಸ್ತೆಯಲ್ಲಿರುವ ಸ್ಟೈಲೊ ರೆಡಿಮೆಟ್ ಬಟ್ಟೆ ಅಂಗಡಿಗೆ ಕಳೆದ ಸೆ. 21 ರಂದು ಹೋಗಿ ನಾವು ಪ್ರಜಾಪ್ರತಿನಿಧಿ ಚಾನೆಲ್ನವರೆಂದು ಹೇಳಿಕೊಂಡು ಸ್ಟೈಲೊ ಹೆಸರಿನ ಬಟ್ಟೆಗಳನ್ನು ವಿಡೀಯೋ ಮಾಡಿ ಮಾಲೀಕರ ಮೊಬೈಲ್ ನಂಬರ್ ಪಡೆದಿದ್ದರು.
ನಂತರ ಮಾಲೀಕರಿಗೆ ಕರೆ ಮಾಡಿ ನಿಮ್ಮ ಅಂಗಡಿಯಲ್ಲಿ ನಕಲಿ ಬ್ರಾಂಡ್ಗಳ ಬಟ್ಟೆ ಮಾರಾಟ ಮಾಡುತ್ತಿದ್ದು, ವಿಡಿಯೋವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ. ಅದನ್ನು ತಡೆಯಲು 50 ಸಾವಿರ ನೀಡಬೇಕೆಂದು ಒತ್ತಡ ಹಾಕಿದ್ದರು. ಈ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಇನೋವಾ ಕಾರು, ಪ್ರಜಾಪ್ರತಿನಿಧಿ 24×7 ನ್ಯೂಸ್ ಚಾನೆಲ್ ಹೆಸರು ಹಾಕಿದ ಓಮ್ನಿ ಕಾರನ್ನು ವಶಪಡಿಸಿಕೊಂಡು ಬನಶಂಕರಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಎಸ್.ಡಿ ಶರಣಪ್ಪ ಅವರು ತಿಳಿಸಿದ್ದಾರೆ.








