ಬೆಂಗಳೂರು:
ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಆದಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಮದ್ಯಂಗಡಿಗಳ ಪರವಾನಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಸೂಚನೆ ನೀಡಿದ್ದಾರೆ.
ಹೊಸ ಬಾರ್ ಅಂಡ್ ರೆಸ್ಟೋರೆಂಟ್ಗಳ ಮತ್ತು ಮದ್ಯದಂಗಡಿಗಳಿಗೆ ಅನುಮತಿ ನೀಡುವುದನ್ನು ಪರಿಶೀಲಿಸುತ್ತಿರುವ ಮುಖ್ಯಮಂತ್ರಿ ಅವರು, ಈ ಬಗ್ಗೆ ಶೀಘ್ರದಲ್ಲಿ ವರದಿ ನೀಡುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರತಿ 20 ಸಾವಿರ ಜನರಿಗೆ ಒಂದರಂತೆ ಮದ್ಯದಂಗಡಿಗಳನ್ನು ತೆರೆಯಲು ಉದ್ದೇಸಿಸಿದ್ದಾರೆ.
ಇದರ ಜತೆಗೆ ಜನಾಭಿಪ್ರಾಯ ಹೇಗಿದೆ ಎನ್ನುವ ಕುರಿತಂತೆಯೂ ವಿವರ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಕುರಿತ ವರದಿಯ ಪ್ರಸ್ತಾವನೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಉದ್ದೇಶಿಸಿದ್ದಾರೆ.
ಜನರಿಂದ ವಿರೋಧ ವ್ಯಕ್ತವಾಗುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹ ಸೇರಿ ಒಟ್ಟಾರೆ ಪ್ರಕ್ರಿಯೆ ಮೂರರಿಂದ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪ್ರತಿವರ್ಷ ಅಬಕಾರಿ ಆದಾಯ ಹೆಚ್ಚಾಗುತ್ತಿದೆ. 1966 -67 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಅಬಕಾರಿ ಇಲಾಖೆಯಲ್ಲಿ ಪ್ರತಿವರ್ಷ ಆದಾಯದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಲೇ ಬರುತ್ತಿದೆ. ಆ ವರ್ಷದಲ್ಲಿ 7.1 ಕೋಟಿ ರೂ ಆದಾಯ ಸಂಗ್ರಹಣೆಯ ಗುರಿ ಇತ್ತು. ನಂತರ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಕಳೆದ 2016-17 ರಲ್ಲಿ 17,948 ಕೋಟಿ ರೂ ಗುರಿ ನಿಗದಿಪಡಿಸಲಾಗಿತ್ತು. ಆದರೆ ಗುರಿ ಮೀರಿ 1,464 ಕೋಟಿ ರೂ ಆದಾಯ ಕ್ರೋಢೀಕರಣವಾಗುತ್ತಿದೆ. ಒಟ್ಟಾರೆ 8.89 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಣೆಗೊಂಡಿದೆ.
ರೈತರ ಸಾಲ ಮನ್ನಾ ಮತ್ತಿತರ ಸಮಾಜಿಕ ಕೆಲಸ ಕಾರ್ಯಗಳಿಗೆ ಮದ್ಯದ ಲಾಭವನ್ನು ವರ್ಗಾವಣೆ ಮಾಡಲಾಗುತ್ತಿದೆ. ಈ ಉದ್ದೇಶದಿಂದ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಇಲಾಖೆ ಮೂಲದಿಂದಲೇ ಹೆಚ್ಚುವರಿಯಾಗಿ ಆದಾಯ ಸಂಗ್ರಹಿಸುವ ಗುರಿ ಮುಖ್ಯಮಂತ್ರಿ ಹೊಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/kumar-1.gif)