ಹುಳಿಯಾರು:
ಪಟ್ಟಣದ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಧ್ಯಾನನಗರಿಯಲ್ಲಿರುವ ಶ್ರೀ ಕಂಕಾಳಿ ಮತ್ತು ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ದಸರಾ ಮತ್ತು ಶ್ರೀ ಮಾತಾ ನವರಾತ್ರಿ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗುವ ಹಿನ್ನೆಲೆಯಲ್ಲಿ ಭಾನುವಾರ ಮಾತಾ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಗಂಗಾಧರ್ ಹಾಗೂ ರಂಗಚೇತನ ಸಂಸ್ಕೃತಿ ಕೇಂದ್ರದ ವ್ಯವಸ್ಥಾಪಕ ತೊಟ್ಟವಾಡಿ ನಂಜುಂಡಸ್ವಾಮಿ ಅವರ ಉಪಸ್ಥಿತಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ಉತ್ಸವದಲ್ಲಿ ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ,ಅಲಂಕಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಷಯದ ಬಗ್ಗೆ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಗಂಗಾಧರ್ ಒಂಬತ್ತು ದಿನಗಳ ಕಾಲದ ಉತ್ಸವದಲ್ಲಿ ಆರು ದಿನಗಳ ಕಾಲ ರಾಷ್ಟ್ರೀಯ ಹೆಸರಾಂತ ಕಲಾವಿದರ ಉತ್ಸವ ನಡೆಯಲಿದೆ.ಇನ್ನುಳಿದ ಮೂರು ದಿನಗಳ ಕಾಲ ಶಾಸ್ತ್ರೀಯಸಂಗೀತ ಹಮ್ಮಿಕೊಳ್ಳಲಾಗುವುದು ಎಂದರು.
ಸ್ಥಳೀಯ ಕಲಾವಿದರುಗಳಿಗೆ ಪ್ರಾತಿನಿಧ್ಯ ನೀಡಬೇಕೆಂಬ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಒಂದು ಗಂಟೆಗಳ ಕಾಲ ಸ್ಥಳೀಯರಿಂದ ಹಾಡುಗಾರಿಕೆ, ಕೋಲಾಟ,ಮಹಿಳಾ ಭಜನಾ ತಂಡಗಳಿಂದ ಭಜನೆ,ತತ್ವಪದ,ನೃತ್ಯಕ್ಕೆ ಅವಕಾಶ ನೀಡಲಾಗಿದೆ ಎಂದರು.
ರಂಗಚೇತನ ಸಂಸ್ಕೃತಿ ಕೇಂದ್ರದ ತೊಟ್ಟವಾಡಿ ನಂಜುಂಡಸ್ವಾಮಿ ಮಾತನಾಡಿ ದಸರಾ ನಾಡಹಬ್ಬ ಹುಳಿಯಾರಿನ ಹಬ್ಬವಾಗಬೇಕು .ಹುಳಿಯಾರು ಸಾಂಸ್ಕೃತಿಕವಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು.ಇದು ನಿಮ್ಮದೇ ಕಾರ್ಯಕ್ರಮವಾಗಿದ್ದು,ಸ್ಥಳೀಯರಾದ ನೀವೆಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸುವುದರ ಮುಖಾಂತರ ಜಿಲ್ಲೆಯಲ್ಲಿಯೇ ಹೆಸರಾಗುವಂತಹ ಉತ್ಸವಕ್ಕೆ ನಾಂದಿ ಹಾಡಬೇಕು ಎಂದರು.
ಆದಿಶಕ್ತಿ ಸ್ವರೂಪಿಣಿ ಕಂಕಾಳಿ ಹಾಗೂ ತುಳುಜಾ ಭವಾನಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಮಾಡಲಾಗುವುದಿದ್ದು ಆಗಮಿಸುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಹುಳಿಯಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್, ಬಡಗಿ ರಾಮಣ್ಣ,ರೈತ ಸಂಘದ ಕೆಂಕೆರೆ ಸತೀಶ್,ಚಂದ್ರಶೇಖರ್, ಮೋತಿನಾಯ್ಕ , ಶ್ರೀನಿವಾಸ್ ನಾಯಕ್, ದಯಾನಂದ್,ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಲಕ್ಷ್ಮೀದೇವಿ,ಎಸ್ಒ ಉಮೇಶ್ ನಾಯ್ಕ್.
ಉಪನ್ಯಾಸಕ ರಮೇಶ್ ಪೂಜಾರಿ,ಬಡಗಿ ರಾಜು, ಕಂಪನಹಳ್ಳಿ ಪ್ರಕಾಶ್, ಎಬಿವಿಪಿ ನರೇಂದ್ರ ಬಾಬು,ಅರುಣ್,ರಾಜಣ್ಣ ,ಬಿ.ವಿ. ಶ್ರೀನಿವಾಸ್,ರವೀಂದ್ರ,ಕವಿತಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ