ಚಿತ್ರದುರ್ಗ:
ಸಿಂದಗಿಯಲ್ಲಿ ನ್ಯಾಯವಾದಿ ದತ್ತಾತ್ರೇಯ ಲಕ್ಷ್ಮಣ ಬಂಡಿವಡ್ಡರ ಇವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದನ್ನು ಖಂಡಿಸಿ ಚಿತ್ರದುರ್ಗದಲ್ಲಿ ಶುಕ್ರವಾರ ವಕೀಲರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಕೊಲೆಪಾತಕಿಗಳನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿದರು.
ಸಿಂಧಗಿ ವಕೀಲರ ಸಂಘದ ಸಹಕಾರ್ಯದರ್ಶಿಯಾಗಿರುವ ವಕೀಲರಾದ ದತ್ತಾತ್ರೇಯ ಲಕ್ಷ್ಮಣ ಬಂಡಿ ವಡ್ಡರ ಕಚೇರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹಠಾತ್ತನೆ ಮೇಲೆರಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ರಾಜ್ಯಾದ್ಯಂತ ವಕೀಲರುಗಳ ಮೇಲೆ ಹಲ್ಲೆ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಲೆ ಆರೋಪಿಗಳನ್ನು ಕೂಡಲೆ ಬಂಧಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ವಕೀಲರುಗಳು ಆಗ್ರಹಿಸಿದರು.
ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರವುಳಿದ ವಕೀಲರುಗಳು ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಕಕ್ಷಿದಾರರ ಪರವಾಗಿ ವಕೀಲರುಗಳು ನ್ಯಾಯಾಲಯದಲ್ಲಿ ನಿರ್ಭಯವಾಗಿ ವಾದ ಮಂಡಿಸುವುದು ಕಷ್ಟವಾಗಿದೆ. ಇಂತಹ ಭಯದ ವಾತಾವರಣದಲ್ಲಿರುವ ವಕೀಲರುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ತಡಮಾಡದೆ ಕೊಲೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ವಕೀಲರುಗಳು ಸರ್ಕಾರವನ್ನು ಎಚ್ಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್, ಉಪಾಧ್ಯಕ್ಷ ಕೆ.ವೀರಪಭದ್ರಪ್ಪ, ಖಜಾಂಚಿ ಹೆಚ್.ಎಸ್.ನಿರಂಜನಮೂರ್ತಿ, ವಕೀಲರುಗಳಾದ ಬಿ.ಟಿ.ತಿಪ್ಪೇಸ್ವಾಮಿ, ಕೆ.ಚಂದ್ರಶೇಖರಪ್ಪ, ಬಿ.ಗಿರೀಶ್, ಟಿ.ಜಯಣ್ಣ, ಎಸ್.ಮೆಹಬೂಬ್ಭಾಷ, ಬಿ.ಪ್ರಕಾಶ್, ಕೆ.ಎನ್.ರಮೇಶ್, ಹೆಚ್.ರಾಂಬಾಬು, ಜಿ.ರಮೇಶ್, ಸಿ.ವಿರುಪಾಕ್ಷಪ್ಪ, ಅಶೋಕ್ಬೆಳಗಟ್ಟ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
