ಮೈಸೂರು
ಜೀವನೋಪಾಯಕ್ಕಾಗಿ ಟೀ ಸ್ಟಾಲ್ ಇಟ್ಟುಕೊಂಡವರನ್ನು ನೋಡಿದ್ದೇವೆ ಆದರೆ ಹಣದ ದುರಾಸೆಗಾಗಿ ಆದೇ ಅಂಗಡಿಯಲ್ಲಿ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲ ವರ್ಷಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ ಸುಮಾರು 23 ಕೆ.ಜಿ 567 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಫೆ.24ರಂದು ಖಚಿತ ಮಾಹಿತಿ ಮೇರೆಗೆ ಕೆಆರ್ ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಎದುರಿನ ಬಸ್ ಸ್ಟಾಪ್ ಬಳಿ ಇರುವ ಟೀ ಅಂಗಡಿಯ ಮೇಳೆ ದಾಳಿ ಮಾಡಿ ಅಲ್ಲಿ ಕಿಟ್ ಬ್ಯಾಗ್ನಲ್ಲಿ ಗಾಂಜಾವನ್ನು ತುಂಬಿಕೊಂಡು ಮಾರಾಟ ಮಾಡಲು ನಿಂತಿದ್ದ ಆರೋಪಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಸಿದ್ದರಾಜು (60) ವಶಕ್ಕೆ ಪಡೆದು ಆತನ ಬಳಿ ಇದ್ದ 5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ಮಗ ಬಿ.ಎಸ್.ಮಂಜುನಾಥ್ (36) ಮತ್ತೊಬ್ಬ ಆರೋಪಿಯಾಗಿದ್ದು, ಬೆಳಗೊಳದಲ್ಲಿರುವ ಟೀ ಸ್ಟಾಲ್ ನಲ್ಲಿ ಮಾರಾಟ ಮಾಡಲು ಇಟ್ಟುಕೊಂಡಿದ್ದ, 18 ಕೆ.ಜಿ 117 ಗ್ರಾಂ ತೂಕದ ಗಾಂಜಾ ಮತ್ತು 5380 ರೂ. ನಗದು ಪಡಿಸಿಕೊಂಡಿ ದ್ದಾರೆ. ಆರೋಪಿ ಮಂಜುನಾಥ್ ಇದೇ ರೀತಿ ತನ್ನ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂಬಂಧ ಈ ಹಿಂದೆ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದಾನೆ. ಈ ಕುರಿತು ಸಿಸಿಬಿ ಘಟಕದಲ್ಲಿ ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ