ಹರಿಹರ;
ನಿಶ್ಚಿತ ಪಿಂಚಣಿ ಜಾರಿಗೊಳಿಸಲು ಆಗ್ರಹಿಸಿ ರಾಜ್ಯ ಸರಕಾರಿ ಎನ್ಪಿಎಸ್ ನೌಕರರು ನಗರದಲ್ಲಿ ರಕ್ತ ದಾನ ಮಾಡಿ, ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ನಗರದ ಡಿಆರ್ಎಂ ಕಾಲೇಜು ಮೈದಾನದಲ್ಲಿ ಸೇರಿದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿದರು. ನಂತರ ಮಿನಿ ವಿಧಾನಸೌಧದ ಎದುರು ಸಂಜೆವರೆಗೆ ಧರಣಿ ನಡೆಸಿದರು.
ನಂತರ ಮಾತನಾಡಿದ ಸಂಘದ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರಿಗೆ ನಿಗದಿತ ಪಿಂಚಣಿಯನ್ನು ರದ್ದುಪಡಿಸಿ ಅದರ ಬದಲು ನೂತನ ಪಿಂಚಣಿ ಕಾಂಟ್ರಿಬ್ಯೂಟರಿ ಯೋಜನೆ ಜಾರಿ ಮಾಡಲಾಗಿದೆ.
ಈ ಯೋಜನೆಯಿಂದ ಸಮಸ್ಯೆ ಎದುರಾಗಿದೆ. ಅನೇಕ ನೌಕರರು ಈಗಾಗಲೆ ಮರಣಹೊಂದಿದ್ದು ಅವರ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವೈಜ್ಞಾನಿಕ ನೂತನ ಪಿಂಚಣಿ ಯೋಜನೆ ವಿರೋಧಿಸಿ ಸಂಘವು ಕಳೆದ 3 ವರ್ಷಗಳಿಂದ ಹೋರಾಟ ಮಾಡುತ್ತಾ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ.
ಆದರೆ ಸರಕಾರಗಳು ತಾತ್ಸಾರ ಭಾವನೆ ತಾಳಿವೆ. ಈಗ ನಾವೂ ಮೆರವಣಿಗೆ ಮಾಡಿ ಸಾಂಕೇತಿಕವಾಗಿ ರಕ್ತದಾನ ಮಾಡುತ್ತಿದ್ದೇವೆ. ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಎಂಬ ಹೋರಾಟವನ್ನೂ ನಡೆಸಿದ್ದೇವೆ. ಈಗಲೂ ಸರಕಾರ ಸಮಸ್ಯೆ ಪರಿಹಾರಕ್ಕೆ ಮುಂದೆ ಬಾರದಿದ್ದರೆ ಹೋರಾಟವನ್ನು ಉಗ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಮಂಜಪ್ಪ ಜಿ.ಎನ್., ಪರಶುರಾಮ ಜಿ., ಪೀರೂ ನಾಯಕ್, ಗಿರೀಶ್ ಎಂ., ಶಿವರಾಜ್ ಎ.ಇ., ಶಿವಾನಂದ ಎಚ್., ವಿಜಯ ಮಹಾಂತೇಶ್, ಡಾ.ಬಿ.ಎಂ.ಚಂದ್ರಮೋಹನ್, ಈಶಪ್ಪ ಬೂದಿಹಾಳ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಹೊರಕೇರಿ, ಎಂ.ಉಮ್ಮಣ್ಣ, ಭೀಮರಾಯ, ಸಂತೋಷ್, ಲಿಂಗರಾಜ್ ಎಂ.ವಿ., ಶೀಲಾ ಸಿ.ಕೆ., ರಾಮನಗೌಡ ಪ್ಯಾಟಿ, ತ್ರಿವೇಣಿ, ಕುಸುಮಾ, ಜ್ಯೋತಿ ಎಚ್., ಮಂಜುಳಾ ಎಚ್. ಇತರರಿದ್ದರು.
ನಗರಸಭೆ, ಕಂದಾಯ, ಬೆಸ್ಕಾಂ, ಶಿಕ್ಷಣ, ಬಿಸಿಎಂ, ಕೃಷಿ, ತೋಟಗಾರಿಕೆ, ಪಂಶು ಸಂಗೋಪನೆ, ನ್ಯಾಯಾಂಗ, ಆರೋಗ್ಯ, ಸೇರಿದಂತೆ ವಿವಿಧ ಇಲಾಖೆ ನೌಕರರು ಧರಣಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
