ತುರುವೇಕೆರೆ
ಬಿರುಗಾಳಿ ಸಹಿತ ಸುರಿದ ಮಳೆಯಿಂದ ತಾಲ್ಲೂಕಿನ ರಾಮಡಿಹಳ್ಳಿ ಗ್ರಾಮದಲ್ಲಿ ನೂರಾರು ಅಡಕೆ, ತೆಂಗು, ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಹಾನಿಯಾಗಿದೆ.
ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಪ್ರಾರಂಭವಾದ ರೋಹಿಣಿ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಮುಂಗಾರು ಹಂಗಾಮಿನಲ್ಲಿಯೆ ಇದು ಉತ್ತಮ ಮಳೆ ಎನ್ನಲಾಗಿದೆ. ಒಣಗಿದ್ದ ತೋಟ, ಕಟ್ಟೆ, ಹಳ್ಳಗಳಲ್ಲಿಯೂ ಮಳೆಯಿಂದ ನೀರು ಸಂಗ್ರಹವಾಗಿದೆ. ತಾಲ್ಲೂಕಿನ ದಂಡಿನಶಿವರ ಹೋಬಳಿ ರಾಮಡಿಹಳ್ಳಿ ಗ್ರಾಮ ಮಳೆ ಗಾಳಿಗೆ ತತ್ತರಿಸಿ ಹೋಗಿದೆ. ರೈತರ ನೂರಾರು ಅಡಕೆ, ತೆಂಗು, ಜಾಲಿ ಮರಗಳು ಸಹ ಮುರಿದು ಬಿದ್ದು ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ರಾಮಡಿಹಳ್ಳಿ ಗ್ರಾಮದ ಸಂಪರ್ಕ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಮುರಿದು ಬಿದ್ದ ಕಾರಣ ರಸ್ತೆ ಬಂದ್ ಆಗಿತ್ತು. ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೆಯೆ ಮರ ಬಿದ್ದಿದ್ದರಿಂದಾಗಿ, ವಿದ್ಯುತ್ ಕಂಬ ಮುರಿದು, ತಂತಿಗಳು ತುಂಡಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಸ್ಕಾಂ ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ