ಪಾವಗಡ
ಚಳ್ಳಕೆರೆ ತಾಲ್ಲೂಕು ಕುರುಡಿಹಳ್ಳಿ, ಬೊಮ್ಮದೇವರಹಟ್ಟಿ ಮತ್ತು ನಾಯಕನಹಟ್ಟಿ ಪ್ರದೇಶಗಳಲ್ಲಿ ದೇವರ ಹಸುಗಳ ಸ್ಥಿತಿ ಚಿಂತಾಜನಕವಾಗಿತ್ತು. ಯಾವುದೇ ರೀತಿಯ ಮೇವು ಸರಬರಾಜಿಲ್ಲದೆ ಸುಧಾಮೂರ್ತಿ, ಇನ್ಫೋಸಿಸ್ ಫೌಂಡೇಶನ್ ರವರು ಕಾಲ ಕಾಲಕ್ಕೆ ನೀಡುತ್ತಿರುವ ಮೇವೆ ಈ ಗೋವುಗಳ ಪ್ರಾಣ ಉಳಿಸಿರುವುದು ಎನ್ನಬಹುದು.
ಇಲ್ಲಿಯ ತಹಸೀಲ್ದಾರರು ವರ್ಗಾವಣೆ ಗೊಂಡಿದ್ದು ಲೆಕ್ಕಪತ್ರಗಳನ್ನು ಪೂರ್ಣಪ್ರಮಾಣದಲ್ಲಿ ಪರೀಕ್ಷಿಸಿಯಾದ ನಂತರವೆ ಮೇವನ್ನು ನೀಡಲು ಪ್ರಯತ್ನಿಸುತ್ತೇವೆ. ಜೊತೆಯಲ್ಲಿ ಚುನಾವಣಾ ಸಮಯವಾಗಿದೆ. ಹಾಗಾಗಿ ಈ ಭಯಂಕರ ಸ್ಥಿತಿಯಲ್ಲಿ ಸುಧಾಮೂರ್ತಿರವರ ಸಹಾಯ ಹಸ್ತವೆ ಈ ಮೂಕ ಪ್ರಾಣಿಗಳಿಗೆ ಆಧಾರವಗಿದ್ದು, ಸ್ವಾಮಿ ಜಪಾನಂದಜಿರವರ ಸೇವೆ ಹಾಗೂ ಶ್ರಮ ಇಂದು ಈ ಗೋವುಗಳನ್ನು ಬದುಕಿಸಿದೆ.
ಹರೇಗಾವಲು, ನಾಯಕರಹಟ್ಟಿ ಗೋವುಗಳ ಕತೆಯೂ ಇದೇಯಾಗಿದೆ ಜಾಗನೂರಹಟ್ಟಿ, ನಾಯಕನಹಟ್ಟಿ ಇಲ್ಲಿಯೂ ದೇವರ ಹಸುಗಳಿಗೆ ಯಾವುದೇ ತರಹ ಮೇವು ಇಲ್ಲದ ಕಾರಣ, ಇಲ್ಲಿಯೂ ಹಸಿದ ಗೋವುಗಳಿಗೆ ಮೇವನ್ನು ನೀಡಲಾಯಿತು. ಇಲ್ಲಿ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಗೋವುಗಳಿಗೆ ಸರಕಾರದ ವತಿಯಿಂದ ಮೇವು ಸಿಗುವವರೆಗೂ ಮೇವನ್ನು ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ. ಸ್ವಾಮೀಜಿ ಜೊತೆಯಲ್ಲಿ ರೈತ ಮುಖಂಡ ಪ್ರಕಾಶ್, ಅರ್ಚಕ ಬೋರಣ್ಣ ಹಾಗೂ ರೈತ ಕುಮಾರ್ ಸಹಕಾರ ನೀಡಿದರು.
ಒಂದು ಚಿಂತನೆ
ಯಾವ ಅಧಿಕಾರಿಯನ್ನು ಕೇಳಿದರೂ ಚುನಾವಣೆ ನೀತಿ ಸಂಹಿತೆ ಎಂದು ತಮ್ಮ ಮೂಲಭೂತ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಗೋವುಗಳಿಗೆ ಮೇವು, ನೀರು ನೀಡುವ ವಿಚಾರದಲ್ಲಿ ಇದು ಖಂಡಿತ ಅಕ್ಷಮ್ಯ ಎನಿಸುತ್ತಿದೆ. ಈ ವಿಚಾರಕ್ಕೂ ಚುನಾವಣೆ ನೀತಿಗೂ ಸಂಬಂಧ ಉಂಟೇ? ಪಾಪ ಆ ಗೋವುಗಳಿಗೇನು ಗೊತ್ತು ನಿಮ್ಮ ಚುನಾವಣೆಯ ವಿಚಾರ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಸ್ವಾಮಿ ಜಪಾನಂದಜಿ ಪ್ರಾರ್ಥಿಸಿದರು.
ಸಾವಿರಾರು ಗೋವುಗಳ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಸ್ವಾಮಿ ಜಪಾನಂದಜಿ ಭಯಂಕರ ಬಿಸಿಲಿನಲ್ಲಿ ಚಳ್ಳಕೆರೆ ತಾಲ್ಲೂಕು ಹಾಗೂ ಮೊಣಕಾಲ್ಮೂರು ತಾಲ್ಲೂಕುಗಳಲ್ಲಿ ಗೋವುಗಳಿರುವ ಕಾವಲುಗಳಿಗೆ ಭೇಟಿಯಿತ್ತು, ಮೇವನ್ನು ಒದಗಿಸುತ್ತಿರುವುದು ನಿಜಕ್ಕೂ ಆಶ್ಚರ್ಯವನ್ನು ತರುತ್ತಿದೆ. ಈ ವಿಚಾರವನ್ನು ಮಾಧ್ಯಮದವರು ಸರಕಾರಕ್ಕೆ ಮುಟ್ಟಿಸಬೇಕು ಎಂದು ಗ್ರಾಮಸ್ಥರು, ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ