ತುರುವೇಕೆರೆ : ತಾಲ್ಲೂಕು ಆಡಳಿತದ ಕ್ರಮಗಳನ್ನು ಗಾಳಿಗೆ ತೂರಿದ ಜನತೆ

ತುರುವೇಕೆರೆ:

         ಕರೊನಾ ಸೊಂಕು ತಡೆಗಟ್ಟಲು ತಾಲ್ಲೂಕಿನಾದ್ಯಂತ ಅನೇಕ ಮುಂಜಾಗ್ರತಾ ಕ್ರಮಗಳನ್ನು ತಾಲ್ಲೂಕು ಆಡಳಿತ ಕೈಗೊಂಡಿದ್ದರೂ ಜನತೆ ತಮಗೆ ಸಂಬಂದಿಸಿಯೇ ಇಲ್ಲವೇನೋ ಎಂಬಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಿಜಕ್ಕೂ ಆತಂಕಕ್ಕೆಡೆ ಮಾಡಿಕೊಟ್ಟಿದೆ.

      ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸೇರಿದಂತೆ ಅನೇಕ ಇಲಾಖೆಗಳು ಹಗಲೂ ರಾತ್ರಿ ಊಟ-ನಿದ್ರೆಯಿಲ್ಲದೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೊರೊನಾ ವಿರುದ್ದ ಶ್ರಮಿಸುತ್ತಿರುವುದು ಯಾರಿಗೋಸ್ಕರ ಎಂಬುದನ್ನು ತಾಲ್ಲೂಕಿನ ಜನತೆ ಅರ್ಥಮಾಡಿಕೊಳ್ಳಬೇಕಿದೆ. ಸೆಕ್ಷನ್ 144 ರ ಅಡಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು ಜನತೆ ಯಾವುದೇ ಕಾರಣಕ್ಕು ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

    ಅಗತ್ಯ ವಸ್ತುಗಳ ಪೂರೈಕೆಗೆಂದು ಪ್ರತಿದಿನ ಬೆಳಿಗ್ಗೆ 6 ರಿಂದ 12 ರ ವರೆವಿಗೂ ಕೆಲವು ನಿಯಮಗಳೊಂದಿಗೆ ತಾಲ್ಲೂಕು ಆಡಳಿತ ಗಡುವು ನೀಡಿದ್ದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನ ತರಕಾರಿ ಹಾಗೂ ರೇಷನ್ ಕೊಳ್ಳಲು ಮುಗಿಬಿದ್ದಿದ್ದಾರೆ. ಪಟ್ಟಣದ ನಾಗರೀಕರಿಗೆ ಅವರ ಮನೆಬಾಗಿಲಿಗೆ ಆಹಾರ ಪದಾರ್ಥಗಳನ್ನು ನೀಡಲು ಅನೇಕ ದಿನಸಿ ಅಂಗಡಿಗಳು ಮುಂದೆ ಬಂದಿವೆಯಾದರೂ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ವೈಯಕ್ತಿಕ ಅರೋಗ್ಯದ ಬಗ್ಗೆಯೂ ಕಾಳಜಿ ವಹಿಸದೆ ಮನೆಯಿಂದ ಹೊರಬಂದು ನೂಕು ನುಗ್ಗಲಿನಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುತ್ತಿರುವುದು ದುರಂತವೇ ಸರಿ.

   ಈಗಾಗಲೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ನಿಯಮವಳಿಗಳೊಂದಿಗೆ ಸರದಿಯ ಪ್ರಕಾರ ಆರೋಗ್ಯ ತಪಾಸಣೆ ಮೂಲಕ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಸುಪ್ರಿಯಾ ಅವರ ಆದೇಶದಂತೆ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗಳು ಹಗಲು ರಾತ್ರಿಯೆನ್ನದೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರ ಶ್ರಮ ನೋಡಿದರೆ ತಮ್ಮ ಕುಟುಂಬವನ್ನೇ ಮರೆತಂತಿದೆ.

    ಪಟ್ಟಣದಾದ್ಯಂತ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಪೌರಕಾರ್ಮಿಕರು ತಮ್ಮಗಳ ಜೀವ ಒತ್ತೆಯಿಟ್ಟು ತ್ಯಾಜ್ಯ ವಿಲೇವಾರಿ ಸೇರಿ ಚರಂಡಿಗಳಿಗೆ ಹಾಗೂ ರಸ್ತೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡುವ ಮೂಲಕ ಸ್ವಚ್ಚತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

  ಗ್ರಾಮಗಳಲ್ಲಿ ದಿಗ್ಬಂಧನ:

     ಈಗಾಗಲೇ ಕೆಲವು ಗ್ರಾಮಗಳಲ್ಲಿ ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಗ್ರಾಮಕ್ಕೆ ಹೊರಗಿನವರು ಬಾರದಂತೆ ಹಾಗೂ ಒಳಗಿನವರು ಹೊರಹೋಗದಂತೆ ರಸ್ತೆಗಳಿಗೆ ಬೇಲಿ ಹಾಗುವ ಮೂಲಕ ಗ್ರಾಮಸ್ಥರು ತಮ್ಮನ್ನು ತಾವೇ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಹಳ್ಳಿಯ ರೈತರು ತಮ್ಮ ತಮ್ಮ ಜಮೀನುಗಳತ್ತ ಮುಖ ಮಾಡಿದ್ದಾರೆ. ಕೂಲಿಯಾಳುಗಳು ಸಿಗದ ಕಾರಣ ತಾವುಗಳೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಮಿಕರಲ್ಲಿ ಅತಂಕ ಸೃಷ್ಟಿ:

     ಕರೊನಾ ದಿಂದ ಕೂಲಿಕಾರ್ಮಿಕರು ತತ್ತರಿಸಿ ಹೋಗಿದ್ದಾರೆ. ಕೂಲಿಕೆಲಸವಿಲ್ಲದೆ, ಇತ್ತ ತಿನ್ನಲು ಊಟವಿಲ್ಲದೆ, ನಿಲ್ಲಲು ನೆಲೆಯಿಲ್ಲದೆ ಅವರ ಜೀವನ ದುಸ್ಸರವಾಗಿದೆ. ಪಟ್ಟಣದ ಹಿರಣ್ಣಯ್ಯ ರಂಗಮಂದಿರದ ಆವರಣದಲ್ಲಿ ಹಗಲೆಲ್ಲಾ ಕೂಲಿ ಮಾಡಿ ರಾತ್ರಿವೇಳೆ ಪ್ರತಿದಿನ ತಂಗುತ್ತಿದ್ದ ಅದೆಷ್ಟೋ ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರು ಕರೊನ ಭೀತಿ ನಿಷೇದ ಹಿನ್ನಲೆಯಲ್ಲಿ ಹೊಟ್ಟೆಗೆ ಊಟವಿಲ್ಲದೆ ಹಾಗೂ ಪೋಲೀಸರ ಭಯದಿಂದ ಹೊರಬರಲಾರದೆ ಚಡಪಡಿಸುತ್ತಿದ್ದಾರೆ.

   ಈಗಾಗಲೇ ರಂಗ ಮಂದಿರದಲ್ಲಿರುವ ಕಾರ್ಮಿಕರ ರಕ್ಷಣೆಗೆ ಲಯನ್ಸ್‍ಕ್ಲಬ್ ಮುಂದಾಗಿದೆ. ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳು ಹಸಿದವರಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದ್ದು ಅದರಂತೆ ನಮ್ಮ ತಾಲ್ಲೂಕಿನಲ್ಲಿಯೂ ಅನೇಕ ಸಂಘ ಸಂಸ್ಥೆಗಳಿದ್ದು ಹಸಿವಿನಿಂದ ಪರಿತಪಿಸುವ ನೊಂದ ಜನತೆಗೆ ಇಂತಹ ಸಂಸ್ಥೆಗಳು ಸಹಾಯ ಹಸ್ತ ಚಾಚಬೇಕಿದೆ.

ಬಡವರ ಹೊಟ್ಟೆಗೆ ಕತ್ತರಿ:

      ಕರೂನಾ ಬಡಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದನ್ನೇ ನಂಬಿದ್ದ ಪ್ರತಿದಿನ ದುಡಿದು ತಿನ್ನುವ ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ನೌಕರರು, ಹಮಾಲಿಗಳು, ವಾಹನ ಚಾಲಕರು, ಆಟೋಚಾಲಕರು, ಸೆಲೂನ್‍ಗಳು, ತಳ್ಳುವಗಾಡಿ ವ್ಯಾಪಾರಿಗಳು ಇಂತಹ ಸಂಧಿಗ್ದ ಪರಿಸ್ಥಿತಿಯಿಂದ ಜೀವನ ನಡೆಸುವಲ್ಲಿ ತತ್ತರಿಸಿಹೋಗಿದ್ದಾರೆ. ಪಟ್ಟಣದ ಕೆಲವು ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿವೆ ಎಂಬ ದೂರುಗಳೂ ಸಹಾ ಕೆಲವರಿಂದ ಕೇಳಬರುತ್ತಿದೆ.

ಬಿಗಿ ಬಂದೋಬಸ್ತು:

      ತಾಲ್ಲೂಕಿನಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು ಪಟ್ಟಣ ಸೇರಿದಂತೆ ಹೋಬಳಿ ಮಟ್ಟದಲ್ಲಿಯೂ ಆರಕ್ಷಕ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಮನೆಯಿಂದ ಹೊರಬಾರದಂತೆ ಸೂಕ್ತ ಬಂದೋಬಸ್ತು ಮಾಡುತ್ತಿದೆ. ಮಾಸ್ಕ್ ಧರಿಸದೆ ಬಿದಿಗಿಳಿಯುವ ಜನರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಬೆಳಿಗ್ಗೆ 6 ರಿಂದ 12 ರ ವರೆವಿಗೆ ಪಟ್ಟಣದಲ್ಲಿ ಜನತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು 12 ರ ನಂತರ ಆರಕ್ಷಕ ಇಲಾಖೆ ಜನತೆ ರಸ್ತೆಗಿಳಿಯದಂತೆ ಶಿಸ್ತು ಕ್ರಮ ಕೈಗೊಂಡಿದೆ.

       ಮಾಸ್ಕ್‍ಗಳಿಗಾಗಿ ಪರದಾಟ: ರಸ್ತೆಗಿಳಿಯುವ ಜನ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಬರಬೇಕೆಂಬ ಕಟ್ಟುನಿಟ್ಟಿನ ಕ್ರಮ ಅರಕ್ಷಕ ಇಲಾಖೆ ಕೈಗೊಂಡಿದೆ. ಆದರೆ ತಾಲ್ಲೂಕಿನ ಯವುದೇ ಔಷಧಿ ಅಂಗಡಿಗಳಲ್ಲಿಯೂ ಸ್ಟಾಕ್ ಇಲ್ಲ ಎಂಬ ಮಾತು ಕೇಳಬರುತ್ತಿದ್ದು ನಾಗರೀಕರು ಮಾಸ್ಕ್‍ಗಾಗಿ ಪರದಾಡುವಂತಾಗಿದೆ. ಕರೊನಾ ಮುಂಜಾಗ್ರತೆಗಾಗಿ ಏನೆಲ್ಲಾ ಕ್ರಮ ಕೈಗೊಂಡಿರುವ ಸರ್ಕಾರ ಅವಶ್ಯಕತೆ ಇರುವಷ್ಟು ಮಾಸ್ಕ್ ಒದಗಿಸಿಕೊಡುವಲ್ಲಿ ಹಿಂದಿದೆ.

      ಮಾಸ್ಕ್‍ಗಳ ಕೊರತೆಯಿದ್ದು ಪತ್ರಕರ್ತರೂ ಸಹಾ ಮಾಸ್ಕ್ ಸಿಗದ ಕಾರಣ ಕರ್ಚೀಫ್ ಕಟ್ಟಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಣವಾಗಿದೆ. ಮಾಸ್ಕ್‍ಗಳು ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲವಾದರೂ ಮಾಸ್ಕ್‍ಗಳು ದೊರಕಿದ್ದೇ ಆದಲ್ಲಿ ಅವನ್ನು ಕೊಂಡು ಇಡೀ ತಾಲ್ಲೂಕಿನ ಜನತೆಗೆ ಉಚಿತವಾಗಿ ವಿತರಿಸಲು ಸಿದ್ದ ಎಂದು ಹಗಲಿರುಳು ಕರೊನಾ ವಿರುದ್ದ ಶ್ರಮಿಸುತ್ತಿರುವ ಪೋಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕರಿಗೆ ತಾವೇ ಸ್ವತಃ ಮಾಸ್ಕ್ ವಿತರಿಸಿದ ಸಂಧರ್ಭದಲ್ಲಿ ಶಾಸಕ ಮಸಾಲ ಜಯರಾಂ ತಿಳಿಸಿದ್ದಾರೆ.

   ಕರೊನಾ ವೈರಸ್ ಹರಡುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನಾದ್ಯಂತ ಮದ್ಯ ಮಾರಾಟವನ್ನೂ ನಿಷೇದಿಸಿದ್ದು ಮದ್ಯ ವ್ಯಸನಿಗಳು ಪರದಾಡುವಂತಾಗಿದೆ. ಪ್ರತಿ ದಿನ ಮದ್ಯ ಸೇವಿಸುತ್ತಿದ್ದವರು ತಕ್ಷಣ ಕುಡಿಯುವುದನ್ನು ನಿಲ್ಲಿಸಿದ್ದರಿಂದ ಅವರ ದೇಹದಲ್ಲಿ ನಡುಕ ಪ್ರಾರಂಬವಾಗಿ ದೇಹ ತಹಬದಿಗೆ ತರಲು ಸಾದ್ಯವಾಗುತ್ತಿಲ್ಲ ಎಂಬ ಮಾತುಗಳು ಮದ್ಯ ವ್ಯಸನಿಗಳಿಂದ ಕೇಳಿ ಬರುತ್ತಿದೆ. ಈಗಾಗಲೇ ಕೆಲ ಮದ್ಯ ವ್ಯಸನಿಗಳು ಮದ್ಯ ಸಿಗದೆ ಬೇಸತ್ತು ಮನಸ್ಸನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾದ್ಯವಾಗದೆ ಆಪತ್ತು ತರುವಂತ ಕೆಲಸಕ್ಕೆ ಕೈಹಾಕುತ್ತಿರುವುದು ದುರಂತವೇ ಸರಿ.

    ತಾಲ್ಲೂಕು ಆಡಳಿತ ಕರೊನ ವಿರುದ್ದ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹಾ ಜನತೆ ತಮಗೆ ಅನ್ವಯಿಸುವುದಿಲ್ಲವೇನೋ ಎಂಬಂತೆ ಅದೆಲ್ಲವನ್ನೂ ಗಾಳಿಗೆ ತೂರಿ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಆತಂಕಕ್ಕೆಡೆಮಾಡಿಕೊಟ್ಟಿದೆ. ದಿನೇ ದಿನೇ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇನ್ನೂ ಹೆಚ್ಚುವ ಭೀತಿ ಕೇಳಬರುತ್ತಿದೆ. ಏಪ್ರಿಲ್ 7ರ ಗಡುವಿನ ನಂತರ ನಿರ್ಣಾಯಕ ಹಂತವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link