ಬೆಂಗಳೂರು
ಆನ್ಲೈನ್ನಲ್ಲಿ ದಿನಸಿ ಉತ್ಪನ್ನಗಳನ್ನು ಮಾರಾಟ ಮಾಡಲು ಬಿ 2 ಬಿ ಆ್ಯಪ್ನ್ನು ಜಾರಿಗೊಳಿಸಿರುವುದನ್ನು ಖಂಡಿಸಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ ವರ್ತಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಆರ್ಎಂಸಿ ಯಾರ್ಡ್ನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ ಸಾವಿರಾರು ವರ್ತಕರು, ಮಾಲೀಕರು ಆನ್ಲೈನ್ನಲ್ಲಿ ದಿನಸಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಆನ್ಲೈನ್ನಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿಯಂತಹ ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ವಾಪಸ್ ಪಡೆಯಬೇಕೆಂದು ಆಗ್ರಹ ಪಡಿಸಿದರು.
ಆನ್ಲೈನ್ನಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡಲು ಬಿ 2 ಬಿ ಆ್ಯಪ್ನ್ನು ಪರಿಚಯಿಸುವುದರಿಂದ ಆರ್ಎಂಪಿ ಯಾರ್ಡ್ನಲ್ಲಿ ವ್ಯಾಪಾರ ನಡೆಸುತ್ತಿರುವ ಸಾವಿರಾರು ವರ್ತಕರಿಗೆ ಹೆಚ್ಚು ನಷ್ಟವುಂಟಾಗಲಿದೆ. ನೇರವಾಗಿ ಆನ್ಲೈನ್ ಮೂಲಕವೇ ಮಾರಾಟವಾದಲ್ಲಿ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯು ತಗ್ಗಲಿದೆ ಎಂದು ಒಕ್ಕೂಟದ ಮುಖ್ಯಸ್ಥರಾದ ರಮೇಶ್ ಚಂದ್ರ ಹೋಟಿ ಅವರು ಆರೋಪಿಸಿದರು.
ಸರ್ಕಾರ ನಿರ್ಧಾರವನ್ನು ಮರುಪರಿಶೀಲಿಸಿ ಆನ್ಲೈನ್ ಮೂಲಕ ಮಾರಾಟ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಸರಕು ಸಾಗಣೆ ಮಾಲೀಕರು, ಹಮಾಲಿಗಳು ಬೀದಿಗೆ ಬೀಳಲಿದ್ದಾರೆ ಎಂದು ಅವರು ಆಪಾದಿಸಿದರು.
ಪ್ರತಿಭಟನೆಯಲ್ಲಿ ಮರ್ಚೆಂಟ್ ಅಸೋಷಿಯೇಷನ್ ಸಂಘಟನೆಗಳ ಸದಸ್ಯರು ಲಾರಿ ಅಸೋಸಿಯೇಷನ್ ಸದಸ್ಯರು ಹಮಾಲಿಗಳು ಸೇರಿದಂತೆ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








