ಹಾಲು ಉತ್ಪಾದಕರ ಸಂಕಷ್ಟಕ್ಕೆ ಸ್ಪಂದಿಸಲು ಒಕ್ಕೂಟಕ್ಕೆ ಮನವಿ

ಶಿರಾ

       ಶಾಶ್ವತ ಬರಗಾಲಕ್ಕೆ ತುತ್ತಾಗಿ ಭಾರತ ಲಾಕ್‍ಡೌನ್ ಆದಾಗಿನಿಂದ ಇಲ್ಲಿಯವರೆಗೂ ಶಿರಾ ತಾಲ್ಲೂಕಿನ ಹಾಲು ಉತ್ಪಾದಕರ ಬವಣೆ ಹೇಳತೀರದಾಗಿದೆ. ಕೊರೋನಾ ಸಂಕಷ್ಟದಲ್ಲೂ ಹಾಲು ಉತ್ಪಾದನೆ ಮಾಡಿ ಕರ್ತವ್ಯ ನಿಷ್ಠೆ ಮೆರೆದ ಶಿರಾ ತಾಲ್ಲೂಕಿನ ಹಾಲು ಉತ್ಪಾದಕರ ಸಂಕಷ್ಟಕ್ಕೆ ಈ ಕೂಡಲೇ ಜಿಲ್ಲಾ ಹಾಲು ಒಕ್ಕೂಟ ಸ್ಪಂದಿಸುವಂತೆ ಜಿ.ಪಂ. ಮಾಜಿ ಸದಸ್ಯ ಹಾಗೂ ಚಿನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಆರ್.ಉಮೇಶ್ ಮನವಿ ಮಾಡಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ತಾಲ್ಲೂಕಿನಲ್ಲಿ 119 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 5,000 ಮಂದಿ ಹಾಲು ಉತ್ಪಾದಿಸುವ ರೈತರಿದ್ದಾರೆ. ಸಂಕಷ್ಟದಲ್ಲಿರುವ ಇಂತಹ ಹಾಲು ಉತ್ಪಾದಕರಿಗೆ ಎರಡು ತಿಂಗಳಿಗಾಗುವಷ್ಟು ಉಚಿತ ಪಡಿತರವನ್ನು ನೀಡಬೇಕು ಎಂದರು.

      ರೈತರು ತಮ್ಮ ರಾಸುಗಳನ್ನು ಸಲಹಲು ಹುಲ್ಲನ್ನು ಬೆಳೆಯಲು ಪ್ರೋತ್ಸಾಹಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಲು ಉತ್ಪಾದಕರಿಗೆ ಉಚಿತ ಬೇವಿನ ಬೀಜ, ಗೊಬ್ಬರ ನೀಡುವುದರ ಜೊತೆಗೆ ಉಚಿತ ಪಶು ಆಹಾರವನ್ನು ಸ್ಥಳೀಯ ಸಹಕಾರ ಸಂಘಗಳ ಮೂಲಕ ನೀಡಲು ಜಿಲ್ಲಾ ಒಕ್ಕೂಟ ಕ್ರಮ ಕೈಗೊಳ್ಳಬೇಕು. ರೈತರ ಹಣಕಾಸಿನ ಪರಿಸ್ಥಿತಿಗೂ ನೆರವಾಗಬೇಕು ಎಂದರು.

     ಮಾರ್ಚ್ 2020ರಿಂದ ಮೇ 31ರವರೆಗೆ ಪ್ರತಿ ರೈತ ತಾನು ಪಡೆದ ಒಟ್ಟು ಬಟವಾಡೆಯ ಹಣ ಅಂದರೆ ಹಾಲನ್ನು ಸಂಘಗಳಿಗೆ ಹಾಕಿ ಸಂಪಾದಿಸಿದ ಹಣದಷ್ಟನ್ನು ಒಂದು ವರ್ಷಗಳ ಕಾಲ ಯಾವುದೇ ಬಡ್ಡಿ ಇಲ್ಲದೆ ನೀಡಿ ಒಂದು ವರ್ಷದ ನಂತರ ಪ್ರತಿ ತಿಂಗಳ ಅವರ ಬಟವಾಡೆಯಲ್ಲಿ ಅರ್ಧದಷ್ಟು ಹಣವನ್ನು ಅದರಿಂದ ತೀರುವಳಿ ಮಾಡಿಕೊಳ್ಳುವ ರೀತಿಯಲ್ಲಿ ಮಾಡಿದರೆ ನಿಜವಾಗಿಯೂ ಹಾಲು ಉತ್ಪಾದಿಸುವ ರೈತನಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದರು.

     ಈಗಾಗಲೇ ಹಾಲು ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗಪ್ಪ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದೇನೆ ಎಂದ ಸಿ.ಆರ್.ಉಮೇಶ್, ಕೋವಿಡ್-19ನಂತಹ ಕಷ್ಟಕರ ಸಂದರ್ಭದಲ್ಲೂ ನಮ್ಮ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದನೆ ನಿಲ್ಲಿಸದೆ ರೈತರನ್ನು ಪ್ರೋತ್ಸಾಹಿಸಿರುವುದು ನಿಜಕ್ಕೂ ಶ್ಲಾಘನಾರ್ಹ ಸಂಗತಿ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಹಾಲು ಉತ್ಪಾದಕರು ಸಂಕಷ್ಟಪಡುವಂತಾದಾಗ ರಾಜ್ಯ ಸರ್ಕಾರ ಹಾಲನ್ನು ಕೊಂಡು ಉಚಿತವಾಗಿ ನೀಡಿತು. ನಮ್ಮ ಜಿಲ್ಲಾ ಒಕ್ಕೂಟ ಉತ್ಪಾದಕರಿಂದಲೆ ಹಾಲು ಖರೀದಿಸಿ ಅವರಿಗೆ ಉತ್ತೇಜನ ನೀಡಿದ್ದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಪ್ರಶಂಶಿಸಿದರು.

      ಜಿಲ್ಲಾ ಒಕ್ಕೂಟಕ್ಕೆ ನಾವು ಸಲ್ಲಿಸಿರುವ ಮನವಿಗೆ ಸ್ಪಂದನೆ ಸಿಗುತ್ತದೆ ಎಂಬ ಭಾವನೆ ನನ್ನದು. ಬರದ ದವಡೆಗೆ ತುತ್ತಾದ, ಅದರಲ್ಲೂ ಕೋವಿಡ್ ಹಿನ್ನೆಲೆಯಲ್ಲೂ ಒಕ್ಕೂಟಕ್ಕೆ ಹಾಲು ನೀಡುವ ಮೂಲಕ ಉತ್ತೇಜನ ನೀಡಿದ ರೈತರ ಬದುಕನ್ನು ಹಾಲು ಒಕ್ಕೂಟ ಹಸನು ಮಾಡಲಿ ಎಂದು ಸಿ.ಆರ್.ಉಮೇಶ್ ಮನವಿ ಮಾಡಿದರು.ಉದ್ದರಾಮನಹಳ್ಳಿ ನಾಗರಾಜು, ಮಾರುತಿ ರಂಗಾಪುರ, ಇರ್ಷಾದ್ ಅಹಮದ್ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link