ಬೆಂಗಳೂರು
ಸ್ಥಳೀಯರಲ್ಲಿ ಭೀತಿ ಹುಟ್ಟಿಸಿ ಕುಖ್ಯಾತಿ ಪಡೆಯಲು ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಹಳೆ ಆರೋಪಿ ರಾಹುಲ್ ಅಲಿಯಾಸ್ ಗೋವಿಂದನ ಕಾಲಿಗೆ ಸೋಮವಾರ ಬೆಳಿಗ್ಗೆ ಬ್ಯಾಟರಾಯನಪುರ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ಎಡಗಾಲಿಗೆ ತಗುಲಿ ಗಾಯಗೊಂಡಿರುವ ಮೂಡಲಪಾಳ್ಯದ ರಾಹುಲ್(21)ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆನ್ನಟ್ಟಿ ಬಂಧಿಸಲು ಹೋದಾಗ ರಾಹುಲ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಪ್ರಕಾಶ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಲೆಯತ್ನ ಸುಲಿಗೆ ಡಕಾಯಿತಿ ಯತ್ನ ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗಿ ಪೊಲೀಸರಿಗೆ ತಲೆನೋವಾಗಿದ್ದ ರಾಹುಲ್ ಕಳೆದ ಜೂ.22ರಂದು 6 ಮಂದಿಯ ಗ್ಯಾಂಗ್ ಕಟ್ಟಿಕೊಂಡು ಕಸ್ತೂರಬಾನಗರದ ಮುತ್ತುಮಾರಿಯಮ್ಮ ದೇವಾಲಯದ ಬಳಿ ರೇಷನ್ ಅಂಗಡಿ ಮುಂಭಾಗದ ನಿಲ್ಲಿಸಿದ್ದ ಬೈಕ್ನ್ನು ಜಖಂಗೊಳಿಸಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದರು.
ಅಂಗಡಿಗೆ ನುಗ್ಗಿ ಹಲ್ಲೆ
ಜಖಂಗೊಳಿಸಿರುವುದನ್ನು ಪ್ರಶ್ನಿಸಿದ ಬೈಕ್ನ ಮಾಲೀಕ ವೇದಮೂರ್ತಿ ಮೇಲೆ ಹಲ್ಲೆ ನಡೆಸಿ ಆತ ಕೆಲಸ ಮಾಡುತ್ತಿದ್ದ ರೇಷನ್ ಅಂಗಡಿಗೂ ನುಗ್ಗಿ ಹಾನಿಯುಂಟು ಮಾಡಿದ್ದ ಪರಾರಿಯಾಗಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬ್ಯಾಟರಾಯನಪುರ ಪೆÇಲೀಸರು ಗಾಯಗೊಂಡ ವೇದಮೂರ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ರಾಹುಲ್ ಗ್ಯಾಂಗ್ಗೆ ಶೋಧ ನಡೆಸಿದ್ದರು.
ಪರಾರಿಯಾಗಿದ್ದ ರಾಹುಲ್ಬೆಳಿಗ್ಗೆ 6ರ ವೇಳೆ ವಿಶ್ವೇಶ್ವರಯ್ಯ ಲೇಔಟ್ ದೊಡ್ಡಬಸ್ತಿಯ ನೈಸ್ ರಸ್ತೆ ಬಳಿ ಅಡಗಿರುವ ಖಚಿತ ಮಾಹಿತಿ ಆಧರಿಸಿ ಬ್ಯಾಟರಾಯನಪುರ ಪೊಲೀಸ್ ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡರು.
ಪೊಲೀಸರನ್ನು ಕಂಡು ಓಡಲು ಯತ್ನಿಸಿದ ರಾಹುಲ್ನನ್ನು ಬೆನ್ನಟ್ಟಿ ಹಿಡಿಯಲು ಹೋದ ಪೊಲೀಸ್ ಪೇದೆ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಕುಖ್ಯಾತಿಗಾಗಿ ಕೃತ್ಯ
ಆದರೂ ಪೇದೆ ಮೇಲೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.ಆತನನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕಾಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂದಲು ಕಸ್ತೂರಬಾ ನಗರದಲ್ಲಿದ್ದ ರಾಹುಲ್ ಎರಡು ವರ್ಷಗಳಿಂದ ಮೂಡಲಪಾಳ್ಯಕ್ಕೆ ಬಂದು ನೆಲೆಸಿದ್ದ ಸ್ಥಳೀಯರಲ್ಲಿ ಭಯಹುಟ್ಟಿಸಿ ಕುಖ್ಯಾತಿ ಪಡೆಯಲು ಅಪರಾಧ ಕೃತ್ಯದಲ್ಲಿ ತೊಡಗಿದ್ದು ಈತನ ಮೇಲೆ ಕೊಲೆ ಯತ್ನ, ಡಕಾಯಿತಿ ಕಳ್ಳತನ ಸುಲಿಗೆ ಸೇರಿ 11 ಪ್ರಕರಣಗಳು ದಾಖಲಾಗಿದ್ದವು.
ವೇದಮೂರ್ತಿ ಮೇಲೆ ನಡೆದ ಹಲ್ಲೆಗೆ ಸಂಬಂಧ ರಾಹುಲ್ ಜೊತೆಯಲ್ಲಿದ್ದ ಗ್ಯಾಂಗ್ನ 6 ಮಂದಿ ಪರಾರಿಯಾಗಿದ್ದು ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
