ಚಳ್ಳಕೆರೆ
ತಾಲ್ಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಸರ್ಕಾರ ಗೋಮಾಳದಲ್ಲಿ 2018-19ನೇ ಸಾಲಿನಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಹುಕಮಾನ ಚೆಕ್ಡ್ಯಾಂ ಕಾಮಗಾರಿ ಪೂರ್ಣಗೊಳ್ಳದೆ ನೀರು ಸಹ ಸಂಗ್ರಹವಾಗದೆ ಆ ಭಾಗದ ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆಂದು ಗ್ರಾಮದ ರೈತರಾದ ರಾಜಣ್ಣ, ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ಗ್ರಾಮದ ಮುಖಂಡ ರಾಜಣ್ಣ ಮಾಹಿತಿ ನೀಡಿ, ಮಳೆಗಾಲದ ಸಂದರ್ಭದಲ್ಲಿ ಚೆಕ್ಡ್ಯಾಂಗೆ ಸೇರ್ಪಡೆಯಾಗುವ ನೀರು ಬಹುಕಮಾನ ಚೆಕ್ ಡ್ಯಾಂ ಮೂಲಕವೇ ಹರಿಯಬೇಕಾಗಿದ್ದು, ಆದರೆ, ಕಾಮಗಾರಿಯನ್ನು ಪೂರ್ಣಗೊಳಿಸದೇ ಕೈಬಿಟ್ಟಿದ್ದು, ನಿರ್ಮಾಣಗೊಂಡಿರುವ ಚೆಕ್ ಡ್ಯಾಂ ಈಗಾಗಲೇ ಶಿಥಿಲಗೊಂಡು ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ತಾಲ್ಲೂಕು ಪಂಚಾಯಿತಿ ಆಡಳಿತ ರೈತರ ಅನುಕೂಲಕ್ಕಾಗಿ ಇಂತಹ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಅವು ಜನರಿಗೆ ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಬಾರದಂತಾಗಿದೆ. ಬರುವ ಅಲ್ಪಸ್ವಲ್ಪ ಮಳೆಯ ನೀರು ಸಂಗ್ರಹವಾದಲ್ಲಿ ಈ ಭಾಗದ ಹಲವಾರು ಬೋರ್ವೆಲ್ಗಳ ಅಂತರ್ಜಲ ಹೆಚ್ಚುತ್ತದೆ. ಆದರೆ, ಈಗ ನೀರು ಸಂಗ್ರವಾಗದೆ ಪೋಲಾಗುತ್ತಿದ್ದಾವೆ ಇದರಿಂದ ಸರ್ಕಾರದ ಹಣ ಅನಗತ್ಯವಾಗಿ ವ್ಯರ್ಥವಾಗುವ ಸಂದರ್ಭವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ