ಚಿಕ್ಕನಾಯಕನಹಳ್ಳಿ
ಕರ್ನಾಟಕದ ಉಚ್ಛ ನ್ಯಾಯಾಲಯ ಕೆ.ಎ.ಎಸ್ ಹುದ್ದೆಗಳ ನೇಮಕಕ್ಕೆ ಮಾತ್ರ ಅನ್ವಯವಾಗುವಂತೆ ನೀಡಿದ್ದ ಆದೇಶವನ್ನೇ ಇಟ್ಟುಕೊಂಡು ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶವು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ದವಾಗಿದ್ದು, ಈ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ತಾಲ್ಲೂಕು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಕ್ರಿಯಾ ಸಮಿತಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚ್ಛನ್ಯಾಯಾಲಯದ ತೀರ್ಪಿನಲ್ಲಿ ಲೋಕಸೇವಾ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಅನೇಕ ಮಾರ್ಗಸೂಚಿಗಳನ್ನು ನೀಡಿದೆ. ಅದರಲ್ಲಿ ಎಸ್.ಸಿ, ಎಸ್.ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗಕ್ಕೆ ಪರಿಗಣಿಸದೆ ಅದೇ ವರ್ಗಗಳಲ್ಲಿ ಪರಿಗಣಿಸಲು ತಿಳಿಸಲಾಗಿದೆ. ಈ ನಿಬಂಧನೆಯು ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದೆ ಎಂದರು.
ರಾಜ್ಯ ಸರ್ಕಾರವೂ ಇದೇ ರೀತಿ ಆದೇಶ ಹೊರಡಿಸಿದ್ದು ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗಗಳ ಮೆರಿಟ್ನ್ನು ಧಿಕ್ಕರಿಸಿ ಆ ವರ್ಗಗಳ ನ್ಯಾಯೋಚಿತ ಹುದ್ದೆಗಳನ್ನು ಕಸಿದುಕೊಂಡತಾಗಿದೆ. ಇದು ಈ ವರ್ಗಗಳ ಹಕ್ಕುಗಳನ್ನು ಕಿತ್ತು ಕೊಳ್ಳುವ ಕ್ರಮವಾಗಿದೆ. ಆದ್ದರಿಂದ ಸರ್ಕಾರ ಜಾರಿಗೆ ತಂದಿರುವ ಮೀಸಲಾತಿ ನಿಯಮಗಳಿಗೆ ವಿರುದ್ದವಾಗಿರುವ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸಮಿತಿಯ ಸದಸ್ಯ ಸಿ.ಎಸ್.ಲಿಂಗದೇವರು ಮಾತನಾಡಿ, 1998-1999, 2004ನೇ ಕೆ.ಎ.ಎಸ್ ಹುದ್ದೆಗಳ ಪ್ರೊಬೆಷನರಿ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ ತೀರ್ಪನ್ನು ಸರ್ವೋಚ್ಛ ನ್ಯಾಯಾಲವು ಸ್ವೀಕರಿಸಿದೆ. ಅದರಂತೆ ಸರ್ಕಾರ ಕೆ.ಎ.ಎಸ್ ಹುದ್ದೆಗಳ ನೇಮಕಾತಿಗಳನ್ನು ನ್ಯಾಯಾಲಯದ ತೀರ್ಪಿನಂತೆ ಪರಿಷ್ಕರಿಸಿ ಅಕ್ರಮವೆಸಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ. ಆದರೆ ಸರ್ಕಾರವು ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ದ ಮರು ಪರಿಶೀಲನಾ ಅರ್ಜಿ ದಾಖಲಿಸದೆ, ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದ ಅವರು, ಇದರಿಂದ ಮೆರಿಟ್ ಮೇಲೆ ಆಯ್ಕೆಯಾಗುವ ಎಸ್.ಸಿ, ಎಸ್.ಟಿ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಅವಕಾಶವನ್ನು ತಪ್ಪಿಸಲು ಮುಂದಾಗಿದೆ, ಅಕ್ರಮವಾಗಿ ನೇಮಕವಾಗಿರುವವರನ್ನು ಉಳಿಸಿಕೊಂಡು ರಾಜ್ಯದಲ್ಲಿ ಈ ವರ್ಗಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗದಂತೆ ಸಂಚು ಮಾಡಲಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ದಲಿತ,ಹಿಂದುಳಿದ,ಅಲ್ಪಸಂಖ್ಯಾತರ ಕ್ರಿಯಾ ಸಮಿತಿಯ ಬೇವಿನಹಳ್ಳಿಚನ್ನಬಸವಯ್ಯ, ಗೋ.ನಿ.ವಸಂತ್ಕುಮಾರ್, ಗೋವಿಂದರಾಜು, ಶಂಕರ್, ತಯ್ಯೂಬ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
