ಸಾಲ ಮರುಪಾವತಿಗೆ ನೋಟೀಸ್ ಜಾರಿ

ಚಿತ್ರದುರ್ಗ:
          ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿ ರೈತರಿಗೆ ಕಿರುಕುಳ ನೀಡುತ್ತಿರುವ ಬ್ಯಾಂಕ್ ಅಧಿಕಾರಿಗಳ ದೌರ್ಜನ್ಯವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರು ಡೆಂಟಲ್ ಕಾಲೇಜು ಎದುರಿನಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗ ಶುಕ್ರವಾರ ಧರಣಿ ನಡೆಸಿದರು.
         ಕರ್ನಾಟಕ ಬ್ಯಾಂಕ್‍ನಲ್ಲಿ ನಾಲ್ಕು ಲಕ್ಷ ರೂ.ಗಳನ್ನು ಸಾಲ ಪಡೆದಿರುವ ರೈತರು ಎರಡು ಲಕ್ಷ ರೂ.ಗಳನ್ನು ತೀರುವಳಿ ಮಾಡಿ ನಂತರ ಕೃಷಿ ಹಾಗೂ ಕುಟುಂಬ ನಿರ್ವಹಣೆಗಾಗಿ ಮತ್ತೆ ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ ಒಂಬತ್ತು ಲಕ್ಷ ರೂ.ಗಳ ಸಾಲ ನೀಡುತ್ತೇವೆಂದು ನಂಬಿಸಿ ಮಾಟ್‍ಗೇಜ್ ಮಾಡಿಸಿಕೊಂಡು ಬಳಿಕ ಇಷ್ಟೊಂದು ಮೊತ್ತದ ಸಾಲವನ್ನು ನೀಡಲು ಆಗುವುದಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ ಮೇಲೆ ಬ್ಯಾಂಕ್‍ಗೆ ನೀಡಿದ ದಾಖಲೆಗಳನ್ನು ಹಿಂದಕ್ಕೆ ಪಡೆದುಕೊಂಡು ಬಂದಿದ್ದರು ಮಾಟ್‍ಗೇಜ್ ರದ್ದುಪಡಿಸದೆ ಮೂರು ವರ್ಷಗಳಿಂದಲೂ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ದ ರೈತರು ಧಿಕ್ಕಾರಗಳನ್ನು ಕೂಗಿದರು.
        ಸಾಲ ವಸೂಲಾತಿಗಾಗಿ ರೈತರ ಜಮೀನಿಗೆ ಬಂದ ಕರ್ನಾಟಕ ಬ್ಯಾಂಕ್ ಅಧಿಕಾರಿಗಳು ದಬ್ಬಾಳಿಕೆಯಿಂದ ರೈತರ ಬಳಿ ಸಹಿ ಮಾಡಿಸಿಕೊಂಡು ನಾಲ್ಕು ದಿನಗಳ ನಂತರ ಮನೆಗೆ ಬಂದು ಸಾಲ ಕಟ್ಟಿ ಇಲ್ಲವೇ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆಂದು ಬೆದರಿಸಿ ನೊಟೀಸ್ ನೀಡದೆ ಮರುದಿನವೇ ದಾವೆ ಹೂಡಿದ್ದಾರೆ. ನಮ್ಮ ಸಾಲ ತೀರಿಸುತ್ತೇವೆ. ಮೂರ್ನಾಲ್ಕು ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಜೀವನ ಕಷ್ಟಕರವಾಗಿದೆ. ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದ್ದರೂ ಬ್ಯಾಂಕ್ ಅಧಿಕಾರಿಗಳ ಕಿರುಕುಳ ಮಾತ್ರ ನಿಂತಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
       ದೇಶಕ್ಕೆ ಅನ್ನಕೊಡುವ ರೈತರಿಗೆ ಸಾಲ ಮರುಪಾವತಿಸಲು ಕಾಲಾವಕಾಶ ಕೊಡಬೇಕು. ಕೋರ್ಟ್‍ನಲ್ಲಿ ಸಲ್ಲಿಸಿರುವ ದಾವೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ರೈತರು ಕರ್ನಾಟಕ ಬ್ಯಾಂಕ್ ಅಧಿಕಾರಿಗಳನ್ನು ಎಚ್ಚರಿಸಿದರು.
        ರೈತ ಮುಖಂಡರುಗಳಾದ ಇ.ಎನ್.ಲಕ್ಷ್ಮಿಕಾಂತ ಲಿಂಗಾವರಹಟ್ಟಿ, ಎಲ್.ಬಿ.ಮಂಜುನಾಥ್‍ರೆಡ್ಡಿ, ಕೆ.ಬಿ.ಪಾಲಯ್ಯ, ಕೆ.ಟಿ.ಜಗನ್ನಾಥರೆಡ್ಡಿ, ಲೋಲಾಕ್ಷಮ್ಮ, ಸೂರಪ್ಪ, ಅಂಜಿನಪ್ಪ, ಕೆ.ಬಿ.ನಾಗೇಂದ್ರರೆಡ್ಡಿ, ಎಸ್.ನಾಗರಾಜು, ಪಾಪಣ್ಣ, ವೆಂಕಟೇಶ್, ಬಾಬುರೆಡ್ಡಿ, ತಿಮ್ಮಾರೆಡ್ಡಿ, ಅಂಜನಮೂರ್ತಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link