ದಾವಣಗೆರೆ :
ಮಳೆಯ ಅಭಾವದಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಹಾಗೂ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬುಧವಾರ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮಾತನಾಡಿ, ಜಿಲ್ಲೆಯ ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ, ಜಗಳೂರು ತಾಲ್ಲೂಕನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಂತೆ, ಇತರೆ ಸದಸ್ಯರು ತಮ್ಮ ತಮ್ಮ ತಾಲ್ಲೂಕುಗಳಲ್ಲೂ ಬರದ ಛಾಯೆ ಇದೆ. ಆದ್ದರಿಂದ ನಮ್ಮ ತಾಲೂಕುಗಳನ್ನು ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಆನಗೋಡು ಕ್ಷೇತ್ರದ ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ ತಾಲೂಕಿನಲ್ಲೂ ಮಳೆ ಅಭಾವದಿಂದ ಬೆಳೆ ಹದಗೆಟ್ಟಿದೆ. ಆದ್ದರಿಂದ ನಮ್ಮ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆನ್ನುತ್ತಿದ್ದಂತೆ, ಸದಸ್ಯ ಡಿ.ಜಿ.ವಿಶ್ವನಾಥ್ ಮಾತನಾಡಿ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕನ್ನೂ ಬರಪೀಡಿತವೆಂದು ಘೋಷಿಸಬೇಕೆಂದು ಹೇಳುತ್ತಿದ್ದಂತೆ, ದನಿಗೂಡಿಸಿದ ಸದಸ್ಯ ವಾಗೀಶ್, ಚನ್ನಗಿರಿ ತಾಲ್ಲೂಕಿನಲ್ಲೂ ಬರ ಎದುರಾಗಿದೆ ಎನ್ನುತ್ತಿದ್ದಂತೆ, ಇತರೆ ಸದಸ್ಯರು ಮಾತನಾಡಿ ಇಡೀ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ವಾಗೀಶ್ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ನಿಗದಿಗೊಳಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಬೆಳೆಗಳ ಖರೀದಿ ಕೇಂದ್ರೆ ತೆರೆದು ಖರೀದಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಸುರೇಂದ್ರ ನಾಯ್ಕ ದನಿಗೂಡಿಸಿ, ಖರೀದಿ ಕೇಂದ್ರ ತೆರೆದಲ್ಲಿ ರೈತರ ಸಂಕಷ್ಟ ಕಡಿಮೆಯಾಗುತ್ತದೆ ಎಂದರು.
ಸದಸ್ಯರಾದ ಬಸವಂತಪ್ಪ ಮತ್ತು ಓಬಳಪ್ಪ ಮಾತನಾಡಿ, ಈಗಾಗಲೇ ಕೇಂದ್ರ ತೆರೆಯಲು ಪ್ರಸ್ತಾವನೆ ಹೋಗಿದೆ. ಕೇಂದ್ರದಿಂದ ಮ್ಯಾಚಿಂಗ್ ಗ್ರಾಂಟ್ ಬಿಡುಗಡೆಯಾದರೆ, ಮಾತ್ರ ಕೇಂದ್ರ ತೆರೆಯಲು ಸಾಧ್ಯ. ಆದ್ದರಿಂದ ಸಭೆಯಲ್ಲಿ ಖರೀದಿ ಕೇಂದ್ರಗಳನ್ನು ತುರ್ತಾಗಿ ತೆರೆಯಲು ನಿರ್ಣಯ ಕೈಗೊಂಡು ಸಭಾ ನಡವಳಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಿದರು.
ಜಿ ಪಂ ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ, ಪಂಜಾಬ್ ರಾಜ್ಯದಲ್ಲಿ ಬಹುತೇಕ ದವಸ ಧಾನ್ಯಗಳನ್ನು ಖರೀದಿ ಕೇಂದ್ರಗಳ ಮೂಲಕವೇ ಖರೀದಿಸಲಾಗುತ್ತಿದೆ. ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಎರಡು ಬಾರಿ ಟಾಸ್ಕ್ಫೋರ್ಸ್ ಸಭೆ ನಡೆಸಿ ಬೆಂಬಲ ಬೆಲೆ ಯೋಜನೆಯಡಿ ಧಾನ್ಯ-ಬೆಳೆ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ತಕ್ಷಣವೇ ಆರಂಭಿಸಲಾಗುವುದು. ಪಂಜಾಬಿನಲ್ಲಿ ಖರೀದಿಸುವ ಧಾನ್ಯಗಳೆಲ್ಲ ಪಡಿತರದಲ್ಲಿ ವಿತರಿಸುವ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ ಮೆಕ್ಕೆಜೋಳವನ್ನು ಪಡಿತರದಲ್ಲಿ ವಿತರಿಸುತ್ತಿಲ್ಲ. ಆದ್ದರಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಕಾನೂನು ತೊಡಕಿದೆ ಎಂದರು.
ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಎಲ್ಲ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಗೆ ತಾಂತ್ರಿಕ ತೊಂದರೆಯೇನಾದರೂ ಆಗುತ್ತದೆಯೇ ಎಂಬ ಬಗ್ಗೆ ಯೋಚಿಸಿ, ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದರು. ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ತರದ ರೈತರಿದ್ದು, ನೀರು ಲಭಿಸಿದ ಕೆಲವೆಡೆ ತಕ್ಕಮಟ್ಟಿಗೆ ಬೆಳೆ ಬಂದಿದೆ, ಮತ್ತೆ ಕೆಲವೆಡೆ ಸಂಪೂರ್ಣ ಬರ ಆವರಿಸಿದೆ. ಈ ಇಬ್ಬರಿಗೂ ನ್ಯಾಯ ಒದಗುವಂತೆ ಮಾನದಂಡ ರೂಪಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ ನಿಂಗಪ್ಪ ಇವರು ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ರೈತರು ಹೇಗೆ ಸಿದ್ಧಗೊಳ್ಳಬೇಕು. ಎಫ್ಎಕ್ಯೂ ಮಾದರಿ ಬೆಳೆ ಇತರೆ ಕುರಿತು ವ್ಯಾಪಕ ಪ್ರಚಾರ ಮಾಡಿದಲ್ಲಿ ಆ ಮಾನದಂಡಗಳಿಗೆ ತಕ್ಕಂತೆ ರೈತರು ತಮ್ಮ ಬೆಳೆ ಮಾರಾಟ ಮಾಡಬಹುದು ಎಂದರೆ, ಸದಸ್ಯರು ರೈತರ ಬೆಳೆಗಳು ದಲ್ಲಾಳಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಬೇಕೆಂದರು. ಸದಸ್ಯೆ ಮಂಜುಳಾ ಟಿ ವಿ ರಾಜು ಮಾತನಾಡಿ, ಬೆಂಬಲ ಬೆಲೆ ಯೋಜನೆಗೆ ಸಂಬಂಧಿಸಿದ ಎಪಿಎಂಸಿ ಅಧಿಕಾರಿಗಳನ್ನು ಮುಂದಿನ ಸಭೆಗೆ ಕರೆಯಿಸಬೇಕೆಂದರು.
ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಮಾತನಾಡಿ, ಹರಪನಹಳ್ಳಿಯ ಚಿರಸ್ತನಹಳ್ಳಿಯಲ್ಲಿ ಖಾಸಗಿ ಕಂಪೆನಿಯವರು ಸ್ಥಳೀಯರಿಂದ ಮೆಕ್ಕೆಜೋಳ ಖರೀದಿಸುತ್ತಿಲ್ಲ. ಕೃಷಿ ಇಲಾಖೆಗೆ ಖಾಸಗಿ ಸಂಸ್ಥೆಗಳ ಮೇಲೆ ನಿಯಂತ್ರಣವಿಲ್ಲವೇ ಎಂದು ಪ್ರಶ್ನಿಸಿದರು. ಸದಸ್ಯ ಬಸವಂತಪ್ಪ ಮಾತನಾಡಿ ಕಾರ್ಗಿಲ್ ಕಂಪೆನಿಯವರು ಕೂಡ ಸ್ಥಳೀಯರಿಂದ ಮೆಕ್ಕೆಜೋಳವನ್ನು ಖರೀದಿಸುತ್ತಿಲ್ಲವೆಂದು ಆಪಾದಿಸಿದರು.
ಜಿ ಪಂ ಅಧ್ಯಕ್ಷೆ ಸ್ಥಳೀಯರ ಬೆಳೆಗಳನ್ನು ಏಕೆ ತಿರಸ್ಕರಿಸಲಾಗುತ್ತಿದೆ ಜಿಲ್ಲಾ ಕೈಗಾರಿಕಾ ಕೇಂದ್ರದವರು ಉತ್ತರಿಸಬೇಕೆಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಮಂಜುನಾಥ ಮಾತನಾಡಿ, ಸುಮಾರ 640 ಕೋಟಿಯ ಈ ಸಂಸ್ಥೆಯ ಒಡಂಬಡಿಕೆ ಬೆಂಗಳೂರಿನಲ್ಲಿ ಆಗಿರುತ್ತದೆ. ಆದರೆ ತಾವು ಕಾರ್ಗಿಲ್ ಸಂಸ್ಥೆಗೆ ಭೇಟಿ ನೀಡಿದಾಗ ಕಳೆದ ಎರಡು ವರ್ಷದಿಂದ ಉತ್ಪಾದನೆ ಆಗುತ್ತಿಲ್ಲ ಎಂಬುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
