ಭ್ರಷ್ಟಾಚಾರ ಜಾಗೃತಿ ಸಪ್ತಾಹಕ್ಕೆ ಚಾಲನೆ

ದಾವಣಗೆರೆ:

      ಭ್ರಷ್ಟಾಚಾರ ನಿಗ್ರಹದಳ, ಪೂರ್ವವಲಯ ಹಾಗೂ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ಇವರ ಸಹಯೋಗದಲ್ಲಿ ಸೋಮವಾರದಿಂದ ನ.3ರ ಆಯೋಜಿಸಿರುವ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್.ಜಿ ಕುಲಕರ್ಣಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

      ಮಹಾನಗರ ಪಾಲಿಕೆಯ ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಎಸಿಬಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಎಸ್.ಕುದುರಿ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎನ್ನುತ್ತೀವೆಯೋ ಹೊರತು ನನಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಯಾರೂ ಹೇಳುವುದಿಲ್ಲ. ಏಕೆಂದರೆ ನಾವೆಲ್ಲ ನಮ್ಮ ಬಯಕೆಗಳ ಸೆರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ.

       ಅತಿಯಾಶೆಯಿಂದ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಪಕ್ಕದವರು ಒಂದಸ್ತಿನ ಮನೆ ಕಟ್ಟಿದರೆ ತಾನು ಅದಕ್ಕಿಂತ ದೊಡ್ಡ ಕಟ್ಟಡ ಕಟ್ಟಬೇಕೇಂಬ ಆಸೆಗಳೇ ಭ್ರಷ್ಟಾಚಾರ, ಅಪರಾಧ ಹಾಗೂ ದುರ್ನಡತೆಗೆ ದಾರಿ ಮಾಡಿಕೊಡುತ್ತವೆ. ಇಂತಹ ಸಮಯದಲ್ಲಿ ನಮ್ಮ ನಿಜವಾದ ಅವಶ್ಯಕತೆಗಳೇನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.

      ತಾನು ಗಳಿಸಿದ ಹಣದಲ್ಲಿ ಬದುಕಿದರೆ ಅದೇ ಸ್ವಾತಂತ್ರ್ಯ. ಸಂವಿಧಾನದಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಎಲ್ಲರೂ ಅಭಿವೃದ್ಧಿ ಹೊಂದುವ ಹಕ್ಕು ನೀಡಲಾಗಿದೆ. ಆದರೆ ಭ್ರಷ್ಟಾಚಾರದ ಕಾರಣದಿಂದ ಈ ಆಶಯ ಈಡೇರುತ್ತಿಲ್ಲ. ಆದ್ದರಿಂದಲೇ ಭ್ರಷ್ಟಾಚಾರ ವಿರೋಧಿ ಕಾನೂನು ರಚಿಸುವ ಅಗತ್ಯ ಎದುರಾಯಿತು ಎಂದರು.

      ಲಂಚ ಪಡೆಯುವುದು. ಲಂಚ ಕೇಳುವುದು ಅಥವಾ ಇದನ್ನು ಪಡೆಯುವ ಪ್ರಯತ್ನ ಮಾಡುವುದು ಕೂಡ ಕಾನೂನು ದೃಷ್ಟಿಯಲ್ಲಿ ಅಪರಾಧ. ಅಧಿಕಾರಿಗಳು ಮಾಡುವ ಭ್ರಷ್ಟಾಚಾರದಿಂದ ಅವರಿಗಷ್ಟೇ ಅಲ್ಲದೇ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರ ವಿರೋಧಿ ಕಾಯ್ದೆ ಕೇವಲ ಅಧಿಕಾರಿಗಳಿಗಷ್ಟೇ ಅಲ್ಲದೇ, ಮಧ್ಯವರ್ತಿಗಳಿಗೂ ಅನ್ವಯವಾಗುತ್ತದೆ. ಯಾರಾದರೂ ಮಧ್ಯವರ್ತಿ ಅಧಿಕಾರಿಯೊಬ್ಬರ ಹೆಸರು ಹೇಳಿಕೊಂಡು ಲಂಚ ಪಡೆದರೆ ಅದು ಗಮನಕ್ಕೆ ಬಂದ ತಕ್ಷಣವೇ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಭ್ರಷ್ಟಾಚಾರದ ಯಾವುದಾದರೂ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದಾಗ ಮಾಹಿತಿ ನೀಡಿದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

        ದಾವಣಗೆರೆ ಎಸಿಬಿ ಇನ್ಸ್‍ಪೆಕ್ಟರ್ ಕೆ.ಪಿ.ರವಿಕುಮಾರ್, ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಪ್ರತಿಜ್ಞಾವಿಧಿ ಬೋಧಿಸಲಾಗುವುದು. ಇಂದಿನಿಂದ ನವೆಂಬರ್ 3 ರವರೆಗೆ ಸಪ್ತಾಹ ನಡೆಯಲಿದೆ. ಈ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಇತ್ಯಾದಿಗಳ ಮೂಲಕ ಅರಿವು ಮೂಡಿಸಲಾಗುವುದು ಎಂದರು.

        ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಹೆಚ್ಚೆಚ್ಚು ಜಾಗೃತರಾಗಬೇಕು. ಎರಡು-ಮೂರಿ ಬಾರಿ ಲಂಚ ಕೊಟ್ಟ ಮೇಲೂ ಕೆಲಸವಾಗದಾಗ ಬರುವುದಲ್ಲ. ಮೊದಲ ಬಾರಿ ಲಂಚ ಕೇಳಿದಾಗಲೇ ದೂರು ನೀಡಬೇಕು. ನಾನೇನು ಮಾಡಲು ಸಾಧ್ಯ. ಕೇವಲ ನನ್ನಿಂದ ಸಮಾಜ ಬದಲಾಗುವುದಿಲ್ಲವೆಂದು ಸುಮ್ಮನೆ ಕೂರಬಾರದು ಎಂದು ಹೇಳಿದರು.

          ಎ.ಸಿ.ಬಿ ಸಬ್‍ಇನ್ಸ್‍ಪೆಕ್ಟರ್ ನಾಗಪ್ಪ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ 2017ರಲ್ಲಿ 12 ಪ್ರಕರಣಗಳು ದಾಖಲಾಗಿದ್ದವು. ಇವರುಗಳಲ್ಲಿ 3 ದಾಳಿ ಹಾಗೂ ಉಳಿದವು ಟ್ರಾಪ್ ಪ್ರಕರಣಗಳಾಗಿವೆ. 2018 ರಲ್ಲಿ ಇದುವರೆಗೆ 15 ಪ್ರಕರಣ ದಾಖಲಾಗಿವೆ. ಇವುಗಳಲ್ಲಿ 6 ಟ್ರಾಪ್ ಪ್ರಕರಣ, 7 ಅಧಿಕಾರಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿ, ಸಭಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪ ಆಯುಕ್ತರಾದ ರವೀಂದ್ರ ಮಲ್ಲಾಪುರ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link