ಬೆಂಗಳೂರು
ಈಶಾನ್ಯರಾಜ್ಯದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಹಿಳೆಯ ಫೋಟೋವನ್ನು ಕ್ಲಿಕ್ಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಂಧ್ರ ಮೂಲದ ಮಹಿಪಾಲ್ ರೆಡ್ಡಿಯನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ವಾಸವಾಗಿರುವ ಶಿಲ್ಲಾಂಗ್ ಮೂಲದ ಟೆಕ್ಕಿ ದಂಪತಿ ಕಳೆದ ನ.17ರಂದು ಸಂಜೆ ಶಾಪಿಂಗ್ಗಾಗಿ ಬ್ರಿಗೇಡ್ ರಸ್ತೆಗೆ ಬಂದಿದ್ದಾಗ ಆಂಧ್ರಪ್ರದೇಶ ಮೂಲದ ಮಹಿಪಾಲ್ ರೆಡ್ದಿ(30) ಎಂಬಾತ ದಂಪತಿಯನ್ನು ಹಿಂಬಾಲಿಮಹಿಳೆಯನ್ನು ತೆಲುಗಿಲ್ಲಿ ನಿಂದಿಸಿದ್ದಾನೆ.
ಮೊದಮೊದಲು ಇದನ್ನು ನಿರ್ಲಕ್ಷಿಸಿದ ದಂಪತಿಗಳು ಶಾಪಿಂಗ್ಗಾಗಿ ಅಂಗಡಿಯೊಳಗೆ ಹೋಗಿದ್ದಾರೆ. ಶಾಪಿಂಗ್ ಮುಗಿಸಿ ಹೊರಬರುತ್ತಿರುವುದನ್ನು ಕಾದು ನಿಂತಿದ್ದ ದುಷ್ಕರ್ಮಿ ರೆಡ್ದಿ, ತನ್ನ ಮೊಬೈಲ್ ನಲ್ಲಿ ಮಹಿಳೆಯ ಫೋಟೋ ಕ್ಲಿಕ್ಕಿಸಿದ್ದಾನೆ. ಇದರಿಂದ ಕುಪಿತರಾದ ದಂಪತಿ ಮೊಬೈಲ್ ನೀಡುವಂತೆ ಕೇಳಿದ್ದಾರೆ. ಫೋನ್ ನೀಡಲು ಒಪ್ಪದ ದುಷ್ಕರ್ಮಿ ದಂಪತಿಗಳನ್ನು ಬಾಯಿಗೆ ಬಂದಂತೆ ನಿಂದಿಸಲು ಆರಂಭಿಸಿದ್ದಾನೆ.
ಗಲಾಟೆ ಆರಂಭವಾಗುತ್ತಿದ್ದಂತೆಯೇ ಸುತ್ತುವರಿದ ಜನರು ದುಷ್ಕರ್ಮಿಯನ್ನು ಹಿಡಿದು ಥಳಿಸಲು ಮುಂದಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಮಹಿಳಾ ಪೊಲೀಸರು ಟೆಕ್ಕಿ ದಂಪತಿ ಹಾಗೂ ದುಷ್ಕರ್ಮಿಯನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ದರು.
ಪೊಲೀಸರು ದುಷ್ಕರ್ಮಿಯ ವಿಚಾರಣೆ ನಡೆಸಿ, ಮೊಬೈಲ್ ಫೋನ್ ನೀಡುವಂತೆ ಹಾಗೂ ಕ್ಲಿಕ್ಕಿಸಿದ ಮಹಿಳೆಯ ಫೋಟೋ ತೋರಿಸುವಂತೆ ಕೇಳಿದ್ದಾರೆ. ಆದರೂ ಮೊಬೈಲ್ ಕೊಡಲೊಪ್ಪದ ದುಷ್ಕರ್ಮಿ,ಈ ಫೋನ್ ತನ್ನದಲ್ಲವೆಂದು ಹಾಗೂ ತನೆಗೆ ಪಾಸ್ ವರ್ಡ್ ನೆನಪಿಲ್ಲವೆಂದು ನಾಟಕವಾಡಲು ಆರಂಭಿಸಿದ್ದಾನೆ.
ಕಬ್ಬನ್ ಪಾರ್ಕ್ ಪೆಲೀಸರು ತಮ್ಮ ಠಾಣಾ ವ್ಯಾಪ್ತಿಗೆ ಘಟನೆ ಬಾರದಿದ್ದರಿಂದ ಅಶೋಕನಗರ ಪೆಲೀಸ್ ಠಾಣೆಗೆ ಮಾಹಿತಿ ನೀಡಿ, ದುಷ್ಕರ್ಮಿ ಮಹಿಪಾಲ್ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ. ದುಷ್ಕರ್ಮಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಅಶೋಕನಗರ ಪೊಲೀಸರು, ರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ ಸೆಕ್ಷನ್ 354), ಶಾಂತಿ ಭಂಗ (ಐಪಿಸಿ ಸೆಕ್ಷನ್ 504) ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ಟೆಕ್ಕಿ ದಂಪತಿಗಳು ತಾವು ಜೋಹಾನ್ಸ್ ಬರ್ಗ್ ಸೇರಿದಂತೆ ಹಲವಾರು ದೇಶಗಳಲ್ಲಿ ವಾಸವಾಗಿದ್ದೆವು. ಅಪರಾಧ ಪ್ರಕರಣಗಳು ಮಿತಿ ಮೀರಿರುವುದು ನಿಜ. ಆದರೆ ಈ ರೀತಿಯ ಘಟನೆ ನಮಗೆ ಎಂದೂ ಸಂಭವಿಸಿರಲಿಲ್ಲ. ಪೊಲೀಸರು ತಕ್ಷಣ ಸ್ಪಂದಿಸಿ ದುಷ್ಕರ್ಮಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
