ಶಿರಾ
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ನೀಡಿ, ತಾಲ್ಲೂಕನ್ನು ಫ್ಲೋರೈಡ್ ಮುಕ್ತ ಮಾಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ 51 ಘಟಕ ನಿರ್ಮಾಣ ಮಾಡಿದ್ದು, ಪ್ರತಿ ಘಟಕಕ್ಕೆ 10.90 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಸರ್ಕಾರದ ಗುರಿಯಾಗಿದ್ದು ಕೇವಲ 2 ರೂಪಾಯಿಗೆ 20 ಲೀಟರ್ ಶುದ್ಧ ನೀರು ಪ್ರತಿಯೊಬ್ಬರಿಗೂ ಸಿಗಲಿದೆ ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.
ಶಿರಾ ತಾಲ್ಲೂಕಿನ ವಾಜರಹಳ್ಳಿ, ಹುಲಿಕುಂಟೆ, ಚಂಗಾವರ, ಮೋಸಗಲೋಟಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಗುರುವಾರ ಆಯೋಜಿದ್ದ ಶುದ್ದ ಕುಡಿಯುವ ನೀರಿನ ಘಟಕ ಲೋಕಾರ್ಪಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿರಾ ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬೆಳೆ ಕೈಕೊಟ್ಟ ಕಾರಣ ರೈತರು ಆತ್ಮವಿಶ್ವಾಸ ಕಳೆದು ಕೊಳ್ಳ ಬಾರದು. ಬರ ಅಧ್ಯಯನ ತಂಡ ಶಿರಾಕ್ಕೆ ಬರದಿದ್ದರೂ ಸಹ ಸರ್ಕಾರಕ್ಕೆ ನಷ್ಟದ ವರದಿ ನೀಡಿದ್ದು, ಬೆಳೆ ನಷ್ಟ ಪರಿಹಾರ ಸಿಗಲಿದೆ. ಅಂತರ್ಜಲ ಮಟ್ಟ ಕುಸಿತ ಕಾಣುತ್ತಿರುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಗಳ ಸ್ವಚ್ಚತೆ ಬಗ್ಗೆ ಪಂಚಾಯಿತಿ ಹೆಚ್ಚು ಒತ್ತು ನೀಡಿ ಸ್ವಚ್ಚತೆ ಕಾಪಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜನತೆಗೆ ಶುದ್ಧ ನೀರು ಲಭ್ಯವಾಗದೆ, ಫ್ಲೋರೈಡ್ಯುಕ್ತ ನೀರಿನ ಸೇವನೆಯಿಂದ ರೋಗ ರುಜಿನಗಳು ಹೆಚ್ಚಾಗುತ್ತಿವೆ. ಇದನ್ನು ಮನಗಂಡು ಅಗತ್ಯ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ಸತ್ಯನಾರಾಯಣ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ಕೆ.ರವಿಕುಮಾರ್, ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ಡಿ.ಮಲ್ಲೇಶ್, ತಾಪಂ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಮುಖಂಡ ಪ್ರಕಾಶ್ಗೌಡ, ಚಂಗಾವರ ಮಾರಣ್ಣ, ಜೆಡಿಎಸ್ ಉಪಾಧ್ಯಕ್ಷ ಮಂಜುನಾಥ್, ಎಂ.ಆರ್. ಶಶಿಧರಗೌಡ, ಎಇಇ ರವಿಕುಮಾರ್, ಜೆ.ಇ. ನಾಗೇಂದ್ರಪ್ಪ, ನರಸಿಂಹಮೂರ್ತಿ, ಗ್ರಾಪಂ ಅಧ್ಯಕ್ಷರಾದ ಪುಟ್ಟಮ್ಮ ಕೃಷ್ಣಮೂರ್ತಿ, ನರಸಿಂಹಯ್ಯ, ಡಾ.ನಾಗರಾಜು, ಮುಖಂಡ ಬಂಡೆರಾಮಕೃಷ್ಣ, ನಾಗರಾಜು, ವೆಂಕಟರಾಮೆಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
