ದಾವಣಗೆರೆ :
ಬಸ್ ಚಾಲಕರ ಕೆಲಸ ಕಷ್ಟಕರ ಮತ್ತು ಜವಾಬ್ದಾರಿಯುತವಾದದ್ದಾಗಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅಪಘಾತಕ್ಕೀಡಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಚಾಲಕರು ಪ್ರತಿ ಕ್ಷಣವೂ ಜಾಗರೂಕತೆಯಿಂದ ವಾಹನ ಚಲಾಯಿಸಬೇಕೆಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಕಿವಿಮಾತು ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗ ವತಿಯಿಂದ ಏರ್ಪಡಿಸಿದ್ದ ಅಪಘಾತರಹಿತ ಚಾಲಕರಿಗೆ ಬೆಳ್ಳಿಪದಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ ಹಾಗೂ ಅಪರಾಧ ರಹಿತ ಚಾಲಕರಿಗೆ ಸನ್ಮಾನಿಸುತ್ತಿರುವುದು ಅಭಿನಂದಾರ್ಹ ಕಾರ್ಯವಾಗಿದ್ದು, ಇವರು ಇತರೆ ಚಾಲಕರಿಗೆ ಅಪಘಾತರಹಿತವಾಗಿ ವಾಹನ ಚಲಾಯಿಸಲು ಪ್ರೇರಣೆಯಾಗಲಿ ಎಂದರು.
ಅಪಘಾತರಹಿತವಾಗಿ ವಾಹನ ಓಡಿಸಿದ ಚಾಲಕರಿಗೆ ಪದಕಗಳನ್ನು ನೀಡಿ ಗೌರವಿಸುತ್ತಿರುವುದು ಒಳ್ಳೆಯ ವಿಚಾರ. ಇದರಿಂದ ಇತರೆ ವಾಹನ ಚಾಲಕರೂ ಪ್ರೇರಿತಗೊಂಡು ಎಚ್ಚರಿಕೆಯಿಂದ ಬಸ್ ಚಲಾಯಿಸುತ್ತಾರೆ. ನಾನೂ ಕೂಡ 1979 ನೇ ಸಾಲಿನಲ್ಲಿ ನಮ್ಮ ರಾಷ್ಟ್ರದ ಉಪ ರಾಷ್ಟ್ರಪ್ರಶಸ್ತಿಯಿಂದ ಶೌರ್ಯ ಪ್ರಶಸ್ತಿ ಪಡೆದಿದ್ದಾಗ ಅತ್ಯಂತ ಸಂತೋಷಗೊಂಡಿದ್ದೆ. ಯಾವುದೇ ಚಾಲಕರಾಗಿರಲಿ ಬಹು ಎಚ್ಚರಿಕೆಯಿಂದ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಓಡಿಸಬೇಕೆಂದು ಹೇಳಿದರು.
ಸಂಸದ ಜಿ ಎಂ ಸಿದ್ದೇಶ್ವರ ಮಾತನಾಡಿ, ಬಸ್ ಚಾಲಕರು ಒಂದು ಕ್ಷಣವೂ ಮೈಮರೆಯುವಂತಿಲ್ಲ. ಸುಮಾರು 50 ರಿಂದ 60 ಪ್ರಯಾಣಿಕರ ಪ್ರಾಣ ರಕ್ಷಣೆ ಜವಾಬ್ದಾರಿ ಅವರ ಮೇಲಿರುತ್ತದೆ. ಆದ್ದರಿಂದ ಅತ್ಯಂತ ಜಾಗರೂಕತೆಯಿಂದ ವಾಹನ ಓಡಿಸಬೇಕು. ಕೆಎಸ್ಆರ್ಟಿಸಿಯು ಜನರನ್ನು ಅಪಘಾತದಿಂದ ರಕ್ಷಿಸಿ ಸೇವೆ ಒದಗಿಸುವ ರಕ್ಷಣಾ ಸಂಸ್ಥೆಯಂತಿದೆ ಎಂದರು.
ಬಸ್ ಒಂದೇ ಅಲ್ಲ, ಕಾರು, ಲಾರಿ, ವಿಮಾನ ಯಾವುದೇ ರೀತಿಯ ವಾಹನಗಳನ್ನು ಎಚ್ಚರಿಕೆಯಿಂದ ಓಡಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಎಷ್ಟೋ ಬಸ್ಗಳು ಹಂಪ್ಸ್ಗಳನ್ನು ಹಾರಿಸಿಕೊಂಡು ಹೋಗುವುದನ್ನು ಕಾಣುತ್ತೇವೆ. ಹೀಗೆ ಮಾಡದೇ ಅಲ್ಲಿ ನಿಧಾನವಾಗಿ ಚಲಿಸಬೇಕು. ಅಪಘಾತವಾದರೆ ಪರಿಹಾರ ನೀಡಬಹುದು, ಆದರೆ ಹೋದ ಜೀವ ಮರಳಿ ತರಲಾಗುವುದಿಲ್ಲವೆಂದರು.
ಗ್ರಾಮೀಣ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಂಸ್ಥೆಯವರು ಮಾರ್ಗಗಳನ್ನು ಕೇಳುತ್ತಾರೆ. ಮಾರ್ಗಗಳ ಬಗ್ಗೆ ಸಚಿವರ ಗಮನಕ್ಕೂ ತರಲಾಗಿದೆ. ಆದ್ದರಿಂದ ತಾತ್ಕಾಲಿಕ ಮಾರ್ಗಗಳನ್ನಾಗಿ ಹಾಕಿಕೊಡಬೇಕು. ಸರ್ಕಾರ ಬಸ್ಗಳನ್ನು ಖರೀದಿಸಿ ನೀಡುತ್ತದೆ. ಗ್ರಾಮೀಣ ಭಾಗಗಳಿಗೆ ನೀಡಬೇಕು ಎಂದ ಅವರು ನಗರದ ಗಾಜಿನ ಮನೆಗೆ ಕೂಡ ಸಿಟಿ ಬಸ್ ಸೌಲಭ್ಯ ವಿಸ್ತರಿಸಬೇಕು ಎಂದರು.
ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಅಪಘಾತರಹಿತ ಚಾಲಕರಿಗೆ ಪದಕಗಳು ಸಿಗಬೇಕು. ವಯಸ್ಸಾದಂತೆ ಬಸ್ ಚಾಲನೆ ಕಷ್ಟವಾಗುತ್ತದೆ. ಆದ್ದರಿಂದ ವಯೋಮಿತಿ ನಿಗದಿಪಡಿಸಿ ಯುವಕರಿಗೆ ಬಸ್ ಚಾಲನೆಗೆ ಅವಕಾಶ ನೀಡಬೇಕು. ಹಾಗೂ ಚಾಲಕರ ಸಂಭಾವನೆಯನ್ನು ಹೆಚ್ಚಿಸಬೇಕೆಂದರು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್ ಹೆಬ್ಬಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಪ್ರಾರ್ಥಿಸಿದರು. ರಮೇಶ್ ಭಾರಧ್ವಾಜ ನಿರೂಪಿಸಿದರು. ವಿಧಾನ ಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್, ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಅಶ್ವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
