ಸಾಧನೆಗೈದು ನ್ಯಾವ್ಯಾರಿಗೂ ಕಡಿಮೆಯಲ್ಲ ಅಂತಾ ತೋರಿಸಿ: ಎಸ್‍ಎಆರ್

ದಾವಣಗೆರೆ:

       ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇರಲಿದ್ದು, ಇದರ ಸದುಪಯೋಗ ಪಡೆದುಕೊಂಡು ಸಾಧನೆಗೈಯ್ಯುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.

        ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪನಿರ್ದೇಶಕರ ಕಚೇರಿ (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ 14ರಿಂದ 17 ವಯೋಮಿತಿ ಒಳಗಿನ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಮೇಲಾಟಗಳ (ಅಥ್ಲೇಟಿಕ್ಸ್) ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಯಾವುದೇ ನೂನ್ಯತೆ ಇಲ್ಲದೇ ಎಲ್ಲಾ ರೀತಿಯಲ್ಲೂ ಚೆನ್ನಾಗಿರುವ ಮಕ್ಕಳಿಗೆ ಚಂಚಲತೆ ಇರುತ್ತದೆ. ಆದರೆ, ವಿಶೇಷ ಚೇತನ ಮಕ್ಕಳಿಗೆ ಯಾವುದೇ ರೀತಿಯ ಚಂಚಲತೆ ಇಲ್ಲದ ಕಾರಣ ವಿಶೇಷ ಪ್ರತಿಭೆ ಹಾಗೂ ಜಾಣ ತಲೆ ಇರುತ್ತದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

       ಎಲ್ಲಾ ರೀತಿಯಲ್ಲೂ ಗಟ್ಟಿಮುಟ್ಟಾಗಿರುವವರಿಗಾಗಿ ಮೊದಲು ಕ್ರೀಡೆಗಳನ್ನು ಆಯೋಜಿಸಲಾಗುತಿತ್ತು. ಆದರೆ, ವಿಕಲಚೇತನ ಮಕ್ಕಳಿಗಾಗಿಯೂ ಕ್ರೀಡಾಕೂಟ ಏರ್ಪಡಿಸಿರು ಇಲಾಖೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

          ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪಾಲಿಕೆ ಮೇಯರ್ ಶೋಭಾ ಪಲ್ಲಾಘಟ್ಟೆ, 14ರಿಂದ 17ದ ಒಳಗಿನ ವಯಸ್ಸು ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುವ ಕಾಲಘಟ್ಟವಾಗಿದೆ. ಮಕ್ಕಳಿಗೆ ಬರೀ ಓದು ಮುಖ್ಯವಲ್ಲ, ಆರೋಗ್ಯ ಸುಧಾರಣೆಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದರು.

        ಪ್ರಾಸ್ತಾವಿಕ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ದೈಹಿಕ ನ್ಯೂನ್ಯತೆ ಇರುವ ಮಕ್ಕಳಿಗಾಗಿ ಇಂದು ಕ್ರೀಡಾಕೂಟ ಏರ್ಪಡಿಸಿರುವುದು ವಿಶೇಷವಾಗಿದೆ. ಗುಂಡು ಎಸೆತ, ಭರ್ಚಿ ಎಸೆತ, ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾಗಿದೆ. ನಿರ್ಣಾಯಕರು ನಿಜವಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದರು.

         ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬಿ.ಆರ್.ಬಸವರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2 ಸಾವಿರ ಜನ ವಿಶೇಷ ಚೇತನ ಮಕ್ಕಳಿದ್ದು, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ಮಕ್ಕಳಿಗಾಗಿ ಇಲ್ಲಿ ಜಿಲ್ಲಾ ಮಟ್ಟದಲ್ಲಿ ಗುಂಪು ಕ್ರೀಡೆ ಹಾಗೂ ಅಥ್ಲೇಟಿಕ್ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದರು.

        ವಿಶೇಷ ಚೇತನ ಮಕ್ಕಳಲ್ಲೂ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವ ಅವಕಾಶವಿದೆ. ಈಗಾಗಲೇ ವಿಶೇಷಚೇತನರು ಕ್ರಿಕೇಟ್ ಹಾಗೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಆದರೆ, ಈ ಮಕ್ಕಳಲ್ಲಿರುವ ಪ್ರತಿಭೆಯನ್ನು ಬ್ಲಾಕ್ ಮಟ್ಟದ ಸಂಪನ್ಮೂಲ ಶಿಕ್ಷಕರು ಗುರುತಿಸಿ, ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಸಿದ್ದೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ್, ಪ್ರಕಾಶ್, ಬಂಕಾಪುರ, ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು. ದೈಹಿಕ ಶಿಕ್ಷಣಾಧಿಕಾರಿ ಪಿ.ಕೊಟ್ರೇಶ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link