ಮನೆ ಬಾಗಿಲಿಗೆ ಬರುತ್ತವೆ ಕಡಿಮೆ ಬೆಲೆಗೆ ಈರುಳ್ಳಿ…..!

ಬೆಂಗಳೂರು

    ಈರುಳ್ಳಿ ಬೆಲೆ ಏರಿಕೆ ಸಮಸ್ಯೆಗೆ ಸದ್ಯದ ಮಟ್ಟಿಗೆ ಮುಕ್ತಿ ನೀಡಲು ಮತ್ತು ಗ್ರಾಹಕರ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ಬೆಂಗಳೂರು ಶಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ನೀಡುವ ಮೊಬೈಲ್ ವ್ಯಾನ್‌ಗಳಿಗೆ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.

   ಮೊಬೈಲ್ ವ್ಯಾನ್​ಗಳಲ್ಲಿ ಪ್ರತಿ ಕೆಜಿಗೆ 35 ರೂ.ಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಸ್ಥಿರೀಕರಣ ನಿಧಿ (PSF) ಅಡಿಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮಾತ್ರವಲ್ಲದೆ, ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ.

   ಸೋಮವಾರದಂದು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಈರುಳ್ಳಿ ಬೆಲೆ ಕೆಜಿಗೆ 45 ರಿಂದ 52 ರೂ.ವರೆಗೆ ಇದ್ದರೆ, ಚಿಲ್ಲರೆ ಬೆಲೆ ಕೆಜಿಗೆ 60 ರಿಂದ 70 ರೂ. ಇತ್ತು. ಮೊಬೈಲ್ ವ್ಯಾನ್‌ಗಳು ಈರುಳ್ಳಿಯನ್ನು ಕೆಜಿಗೆ 35 ರೂ.ನಂತೆ ಮಾರಾಟ ಮಾಡುತ್ತಿವೆ.

   ಬೆಂಗಳೂರಿನ ನಂದಿನಿ ಲೇಔಟ್, ಸುಂಕದಕಟ್ಟೆ, ನಾಗರಭಾವಿ, ರಾಜಾಜಿನಗರ, ಲಗ್ಗೆರೆ, ಮಲ್ಲೇಶ್ವರಂ, ಯಶವಂತಪುರ ಮತ್ತು ಮೆಜೆಸ್ಟಿಕ್‌ನಂತಹ ಪ್ರದೇಶಗಳಲ್ಲಿ ಸದ್ಯ 30 ಟನ್ ಸಾಮರ್ಥ್ಯದ 15 ಟ್ರಕ್‌ಗಳನ್ನು ನಿಯೋಜಿಸಲಾಗಿದೆ. ಗುರುವಾರದ ವೇಳೆಗೆ ನಗರಕ್ಕೆ ಒಟ್ಟು 50 ಮೊಬೈಲ್ ವ್ಯಾನ್‌ಗಳು ಬರಲಿದ್ದು, ಇತರ ಪ್ರದೇಶಗಳಿಗೂ ಈರುಳ್ಳಿ ವಿತರಣೆ ಮಾಡಲಿವೆ ಎಂದು ಎನ್‌ಸಿಸಿಎಫ್ ಶಾಖಾ ವ್ಯವಸ್ಥಾಪಕ ರವಿಚಂದ್ರ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಬರುವ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ ಮತ್ತು ಹಲವಾರು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು. ಇವುಗಳನ್ನು ಕರ್ನಾಟಕಕ್ಕೆ ಆಮದು ಮಾಡಿಕೊಳ್ಳಲು ಎನ್‌ಸಿಸಿಎಫ್‌ಗೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. 

   ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಿಂದ ನಮ್ಮಲ್ಲಿ ಕನಿಷ್ಠ 5 ಲಕ್ಷ ಟನ್ ಈರುಳ್ಳಿ ದಾಸ್ತಾನು ಇದೆ. ಆದ್ದರಿಂದ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವವರೆಗೆ, ಅಗತ್ಯವಿದ್ದಲ್ಲಿ ಜನವರಿವರೆಗೆ ವ್ಯಾನ್‌ಗಳ ಮೂಲಕ ಈರುಳ್ಳಿ ಪೂರೈಕೆ ಮುಂದುವರಿಯುತ್ತದೆ. ನಾವು ಪ್ರತಿ ವಾರ ಹೆಚ್ಚಿನ ಈರುಳ್ಳಿ ವಿತರಣೆ ಮಾಡುತ್ತೇವೆ. ನಗರ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಪೂರೈಕೆ ಮುಂದುವರಿಯಲಿದೆ ಎಂದು ರವಿಚಂದ್ರ ಮಾಹಿತಿ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ. 

   ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ವಿಜಯಪುರದಲ್ಲಿ ಎನ್‌ಸಿಸಿಎಫ್ ಮೊಬೈಲ್ ವ್ಯಾನ್ ಮಾರಾಟ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದ್ದು, ಮುಂದಿನ ವಾರದ ವೇಳೆಗೆ ಇಡೀ ರಾಜ್ಯಕ್ಕೆ ವಿಸ್ತರಣೆಯಾಗಲಿದೆ.

Recent Articles

spot_img

Related Stories

Share via
Copy link
Powered by Social Snap