ವಿಜಯಪುರ:
ಗ್ಯಾರಂಟಿ ಯೋಜನೆಗಳ ಪ್ರಯೋಜನಗಳು ಬಡವರು ಮತ್ತು ನಿರ್ಗತಿಕರಿಗೆ ಮಾತ್ರ ತಲುಪಬೇಕು, ಶ್ರೀಮಂತರಿಗೆ ಅಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಬುಧವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಕೀ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು, ಬಡವರಿಗೆ ಹೋಗಬೇಕು. ಶ್ರೀಮಂತರನ್ನು ಯೋಜನೆಯಿಂದ ಹೊರಗಿಡಲು ಸರ್ಕಾರಿ ಮಟ್ಟದಲ್ಲಿ ಯಾವುದೇ ಚರ್ಚೆ ಇಲ್ಲ. ಆದರೆ, ಶ್ರೀಮಂತರು, ಉಳ್ಳವರು ಯೋಜನೆ ಪ್ರಯೋಜನಗಳನ್ನು ಸ್ವಯಂ ಪ್ರೇರಣೆಯಿಂದ ಬಿಡಬೇಕೆಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಬಿಡದಿದ್ದರೆ, ಸರ್ಕಾರವೇ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದುಹಾಕುವ ಕೆಲಸ ಮಾಡಬೇಕು. ಯೋಜನೆಯಿಂದ ಇನ್ನೂ ಹೊರಗುಳಿದಿರುವ ಬಡವರನ್ನು ಸೇರ್ಪಡೆಗೊಳಿಸಬೇಕೆಂದು ಹೇಳಿದರು.
ಇದೇ ವೇಳೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ನಡೆಯಲ್ಲ ಎಂದರೆ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿರೋದು ಯಾಕೆ? ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವುಗಳು ಮುಂದುವರಿಯಲಿವೆ, ಅಭಿವೃದ್ಧಿ ಕೂಡ ಆಗಲಿದೆ ಕಿಡಿಕಾರಿದರು.
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ವಿಚಾರವಾಗಿ ಮಾತನಾಡಿ, ಅನಧಿಕೃತವಾಗಿ ಗುತ್ತಿಗೆ ನೀಡಿದ್ದಾರೆ. ಅದಕ್ಕೆ ಕಾಂಗ್ರೆಸ್ ಕಾರಣ ಅಲ್ಲ. ಬಜೆಟ್ ಇಲ್ಲದೆ ಟೆಂಡರ್ ಕರೆದು ಕಮೀಷನ್ ಹೊಡೆದು ಹೋಗಿದ್ದಾರೆ. ಅವರ ಪಾಪದ ಕೊಡ ನಾವು ಹೊರುತ್ತಿದ್ದೇವೆ. ನೂರು ರೂಪಾಯಿ ಅನುದಾನ ಇದ್ದರೆ, ಸಾವಿರ ರೂಪಾಯಿಯಷ್ಟು ಟೆಂಡರ್ ಕೊಟ್ಟಿದ್ದಾರೆ. ಇನ್ನೂ ವೈದ್ಯಕೀಯ ಇಲಾಖೆಯಲ್ಲಿ ದೊಡ್ಡ ಹಗರಣ ಆಗಿದೆ. ಬಜೆಟ್ಗಿಂತ ಹೆಚ್ಚಿಗೆ ಕಾಮಗಾರಿ ಕೊಟ್ಟಿದ್ದು ಯಾರು? ಒಂದು ಲಕ್ಷ ಕೋಟಿ ಹಣದ ಕಾಮಗಾರಿ ಟೆಂಡರ್ ಕರೆದಿದ್ದವರು ಯಾರು? ಟೆಂಡರ್ ಕರೆದು ಕಮೀಷನ್ ಪಡೆದು ಹೋಗಿದ್ದಾರೆ. ಅಕ್ರಮವಾಗಿ ಕಾನೂನು ಬಾಹಿರವಾಗಿ ಸಚಿವ ಸಂಪುಟದ ಅನುಮೋದನೆ ಪಡೆಯದೇ ಟೆಂಡರ್ ಕರೆದು ಕಮೀಷನ್ ಪಡೆದಿದ್ದಾರೆಂದು ಪರೋಕ್ಷವಾಗಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
