ಬೆಂಗಳೂರು:
ದಕ್ಷಿಣ ಕೋರಿಯಾದ ಐದು ದಿನಗಳ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಭಾರೀ ಮತ್ತು ಮಧ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ವಿದೇಶಿ ಕಂಪನಿಗಳಿಂದ ಬಂಡವಾಳ ಸೆಳೆಯವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದಲ್ಲಿ ₹1,245 ಕೋಟಿ ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್ ತಯಾರಿಕಾ ಕಂಪನಿ ವೈಜಿ–1 ಘೋಷಿಸಿದೆ. ಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ದಕ್ಷಿಣ ಕೊರಿಯಾಕ್ಕೆ ಐದು ದಿನಗಳ ಭೇಟಿ ಕೈಗೊಂಡಿದೆ. ನಿಯೋಗದ ಜತೆಗೆ ಬುಧವಾರ ನಡೆದ ಸಭೆಯ ಸಂದರ್ಭದಲ್ಲಿ ವೈಜಿ–1 ಈ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಕೊರಿಯಾ ಭಾಷೆ ಕಲಿಕಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಇಂಧನ–ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಕಂಪನಿಯ ಮುಖ್ಯಸ್ಥ ಹೊ ಕ್ಯೂನ್ ಸಾಂಗ್ ಅವರು ಹೇಳಿದ್ದಾರೆ.
ಐಟಿ, ಎಲೆಕ್ಟ್ರಾನಿಕ್ ಸಿಸ್ಟಮ್ಸ್, ವೈಮಾಂತರಿಕ್ಷ ಹಾಗೂ ರಕ್ಷಣೆಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಕರ್ನಾಟಕವು ಭಾರತದಲ್ಲಿ ಮೊದಲ ಸ್ಥಾನದಲ್ಲಿ ಇರುವುದನ್ನು ಸಚಿವ ಪಾಟೀಲ ಅವರು ಕೊರಿಯಾದ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸೌರಶಕ್ತಿಯೂ ಸೇರಿದಂತೆ ರಾಜ್ಯವು ವಿಪುಲ ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲ ಹೊಂದಿದೆ. ವಿದ್ಯುತ್ ಚಾಲಿತ ವಾಹನ, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ಫೋನ್ ತಯಾರಿಕೆಗೆ ರಾಜ್ಯ ಸರ್ಕಾರವು ಗರಿಷ್ಠ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದೆ ಎಂದರು.
ಜಾಗತಿಕ ಮಟ್ಟದ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಕ್ ಸಹ ಮುಂದಿನ 2–3 ವರ್ಷಗಳಲ್ಲಿ ₹1,245 ಕೋಟಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ. ಕಂಪನಿಯು ಭಾರತದ ವಿವಿಧ ನವೋದ್ಯಮಗಳಲ್ಲಿ ₹1,162 ಕೋಟಿ ಹೂಡಿಕೆಯನ್ನು ಈಗಾಗಲೇ ಮಾಡಿದೆ. ಇ–ಕ್ರೀಡೆಗಳು ಮತ್ತು ಮೊಬೈಲ್ ಫೋನ್ ಗೇಮಿಂಗ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮತ್ತು ಭಾರತದ್ದೇ ಗೇಮಿಂಗ್ ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಕಂಪನಿಯೊಂದಿಗೆ ಚರ್ಚಿಸಲಾಗಿದೆ ಎಂದು ನಿಯೋಗವು ತಿಳಿಸಿದೆ.
ಎಂ. ಬಿ ಪಾಟೀಲ್ ಗೋ ಪಿಜ್ಜಾದ ಸಿಇಒ ಲಿಮ್ ಜೇ-ವಾನ್ ಅವರೊಂದಿಗೆ ಕರ್ನಾಟಕದ ಎಫ್ಎಂಸಿಜಿ ಪರಿಸರ ವ್ಯವಸ್ಥೆ ಕುರಿತು ಚರ್ಚಿಸಿದರು. ಗೋ ಪಿಜ್ಜಾ ಭಾರತದಲ್ಲಿ ಮುಂದಿನ ಮೊದಲ ಆರ್ಥಿಕ ವರ್ಷದ ವೇಳೆಗೆ 150 ಕೋಟಿ ರೂ.ಗಿಂತ ಹೆಚ್ಚಿನ ಮಾರಾಟದ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.