ಬೆಂಗಳೂರು:
ನಾನು ಬಿಜೆಪಿ ಶಿಸ್ತಿನ ಸಿಪಾಯಿಯಾಗಿದ್ದು ಕೇಂದ್ರೀಯ ಶಿಸ್ತು ಸಮಿತಿ ನೀಡಿದ ನೋಟಿಸ್ಗೆ ಉತ್ತರ ನೀಡಿದ್ದೇನೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ವಿವರಣೆ ನೀಡುವಂತೆ ಶೋ-ಕಾಸ್ ನೋಟಿಸ್ ನೀಡಿರುವ ಐದು ನಾಯಕರಲ್ಲಿ ರೇಣುಕಾಚಾರ್ಯ ಕೂಡ ಒಬ್ಬರಾಗಿದ್ದಾರೆ. ಶಿಸ್ತು ಸಮಿತಿ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿದ, ನಾನು 72 ಗಂಟೆಗಳ ಗಡುವಿನೊಳಗೆ ನನ್ನ ಉತ್ತರವನ್ನು ಸಲ್ಲಿಸಿದ್ದೇನೆ.
ನಾನು ರಾಷ್ಟ್ರೀಯ ನಾಯಕರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಯಡಿಯೂರಪ್ಪ, ರಾಜ್ಯಾಧ್ಯಕ್ಷರ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೇನೆ ಅಷ್ಟೇ. ಯಡಿಯೂರಪ್ಪ ವಿರುದ್ಧ ಸದನದ ಒಳಗೆ, ಹೊರಗೆ ಮಾತನಾಡಿ ಅಪಮಾನ ಮಾಡಿದ್ದರು ಎಂದರು.ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನು ಪಕ್ಷಕ್ಕೆ ಮುಜುಗರ ತಂದಿಲ್ಲ, ರಾಷ್ಟ್ರೀಯ ನಾಯಕರಿಗೂ ಮುಜುಗರ ತಂದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾತನಾಡಿದ್ದೇನೆ. ಸಂಘಟನೆ ಮಾತೃ ಸಮಾನ. ನಾನು ಯಾವತ್ತೂ ಪಕ್ಷ ಸಂಘಟನೆ ವಿರುದ್ಧ ಮಾತನಾಡುವುದಿಲ್ಲ ಎಂದರು.
ಕಳೆದ ನಾಲ್ಕು ವರ್ಷಗಳಿಂದ, ಒಬ್ಬ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ 2,000 ಕೋಟಿ ರೂ. ಲಂಚದ ಆರೋಪ ಮಾಡಿದ್ದಾರೆ, ಇದು ನಮ್ಮ ಪಕ್ಷದ ನಾಯಕರ ವಿರುದ್ಧದ ದುರುದ್ದೇಶಪೂರಿತವಾಗಿ ಮಾಡಿದ ಆರೋಪ. ಆದ್ದರಿಂದ, ನಾನು ಪಕ್ಷ ಮತ್ತು ನಮ್ಮ ನಾಯಕರನ್ನು ಸಮರ್ಥಿಸಿಕೊಳ್ಳಬೇಕಾಯಿತು, ಇದು ಅನಿವಾರ್ಯವಾಗಿ ನನ್ನನ್ನು ಇತರರ ಜೊತೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಯಿತು.ಪಕ್ಷದ ಕೇಂದ್ರ ನಾಯಕರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಇದೇ ವೇಳೆ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಠಾಧೀಶರು, ಖಾವಿ ಬಗ್ಗೆ ನನಗೆ ಅಪಾರ ಗೌರವ ಭಕ್ತಿ ಇದೆ. ಸ್ವಾಮೀಜಿ ಅವರು ಕೈಗೊಂಡ ಎಲ್ಲಾ ಹೋರಾಟಗಳಲ್ಲೂ ನಾನು ಭಾಗಿಯಾಗಿದ್ದೇನೆ.ನೀವು ಒಬ್ಬ ವ್ಯಕ್ತಿ ಪರವಾಗಿ ಧ್ವನಿ ಎತ್ತುವುದು ಬೇಡ. ಭಕ್ತರು ತಪ್ಪು ಮಾಡಿದಾಗ ತಿದ್ದಬೇಕು. ನಾನು ಟೀಕೆ ಮಾಡುತ್ತಿಲ್ಲ, ಮನವಿ ಮಾಡುತ್ತೇನೆ. ನನಗೆ ಶ್ರೀಗಳ ಬಗ್ಗೆ ಅಪಾರ ಗೌರವ ಇದೆ ಎಂದು ಹೇಳಿದರು.
