ಮಧುಗಿರಿ :
ಗ್ರಾಮದ ಮಕ್ಕಳ ವಿದ್ಯಾವಂತರನ್ನಾಗಿ ಮಾಡಿಸ ಬೇಕೆಂಬ ಉದ್ದೇಶದಿಂದ ಶಾಲೆಗೆ ದಾನಿಗಳು ದಾನವಾಗಿ ನೀಡಿದ್ದ ಸುಮಾರು 18 ಎಕರೆ ಜಮೀನನ್ನು ಕೆಲ ಗ್ರಾಮಸ್ಥರೆ ಆಕ್ರಮವಾಗಿ ಒತ್ತುವರಿ ಮಾಡಿದ್ದು ತೆರವು ಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಶಾಲೆಯ ಸಮೀಪ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಗರಣಿ ಗ್ರಾಪಂ ವ್ಯಾಪ್ತಿಯ ಪುಲಮಾಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಬ್ಬಯ್ಯ ಶೆಟ್ಟಿ ಎನ್ನುವವರು 1956ರಲ್ಲಿ ಮಾಳಗೊಂಡನಹಳ್ಳಿ ಸ.ನಂ.7 ರಲ್ಲಿ 2 ಎಕರೆ ಜಮೀನನ್ನು ಸುತ್ತ ಮುತ್ತಲ ಗ್ರಾಮಗಳಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಮೀನನ್ನು ದಾನವಾಗಿ ನೀಡಿದ್ದರು.
ಆದರೆ ದುರ್ಗಪ್ಪ ಬಿನ್ ಲೇ.ಹನುಮಂತಪ್ಪ ಎನ್ನುವವರು ಶಾಲೆಗೆ ಸೇರಿದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಜಮೀನನ್ನು ಅನುಭವಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಶಾಲೆಗೆ ಸೇರಿದ ಜಮೀನನ್ನು ಬಿಟ್ಟು ಕೊಡುವಂತೆ ಗ್ರಾಮಸ್ಥರು ಹೇಳಿದರೂ ಬಿಟ್ಟುಕೊಡದೆ ದೌರ್ಜನ್ಯ ಎಸುಗುತ್ತಿದ್ದಾರೆಂದು ಬಿಇಓ ರವರಿಗೆ ನೀಡಿರುವ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಂಜುಂಡಯ್ಯ ಮಾತನಾಡಿ ಸುಮಾರು 18 ಎಕರೆ ಜಮೀನನ್ನು ಬಂದೋಬಸ್ತ್ ಮಾಡಿಕೊಡುವಂತೆ ಈಗಾಗಲೇ ತಹಶೀಲ್ದಾರ್ ರವರಿಗೆ ಪತ್ರ ಬರೆಯಲಾಗಿದ್ದು ಸೀನಿಯಾರಿಟಿ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಈಗ ನಾವು ಆ ಜಮೀನನಲ್ಲಿ ಅತಿಕ್ರಮ ಪ್ರವೇಶ ಮಾಡಿರುವವರ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುದೆಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ನರಸಿಂಹಮೂರ್ತಿ, ಪಿ.ಟಿ.ರಮೇಶ್, ಎಸ್ಡಿಎಂಸಿ ಅಧ್ಯಕ್ಷ ರಾಜಣ್ಣ, ಮಾಜಿ ಗ್ರಾಪಂ ಸದಸ್ಯ ನಾಗರಾಜಪ್ಪ, ಮುಖಂಡರಾದ ಚಿತ್ತಯ್ಯ, ನಾಗಭೂಷಣ, ರಂಗಯ್ಯ, ಕೆಂಪಣ್ಣ, ಭೂತರಾಜು, ಸಣ್ಣಮ್ಮ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ