ಮಧುಗಿರಿ :
ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡು ದೊರೆಯಬಹುದಾದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಡಿ.ನಾಗರಾಜು ಕರೆ ನೀಡಿದರು.
ಅವರು ತಾಲ್ಲೂಕಿನ ಕಸಬಾ ಸಿದ್ದಾಪುರ ಗ್ರಾಮದ ಕುಡೂತಿ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಒಕ್ಕೂಟದ ವತಿಯಿಂದ ನೋಂದಾಯಿತ ಅರ್ಹ 500 ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಕಟ್ಟಡ ಕಾರ್ಮಿಕರು ಜವಾಬ್ದಾರಿಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದರು.
ಇಲಾಖೆಯಿಂದ ಸವಲತ್ತುಗಳನ್ನು ಕೊಡಿಸುವುದಾಗಿ ಹೇಳಿಕೊಂಡು ಕೆಲ ಮಧ್ಯವರ್ತಿಗಳು ಹಣ ಪಡೆದು, ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಒಕ್ಕೂಟ ಈಗಾಗಲೇ ಕ್ರಮ ಕೈಗೊಂಡು ಕಾರ್ಮಿಕರಲ್ಲಿ ಅರಿವು ಮೂಡಿಸುತ್ತಿದೆ. ಕಾರ್ಮಿಕರು ಕುಟುಂಬದ ಬೆನ್ನೆಲುಬಾಗಿದ್ದು, ಕೊರೋನಾ ನಿಯಂತ್ರಣಕ್ಕಾಗಿ ಸರಕಾರದ ನಿಯಮಗಳನ್ನು ಪಾಲಿಸಿ, ಲಸಿಕೆ ಹಾಕಿಸಿಕೊಂಡು ಆರೋಗ್ಯವಾಗಿರಿ ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಜಿ.ಉಮೇಶ್ ಮಾತನಾಡಿ, ಕಾರ್ಮಿಕ ಇಲಾಖೆ ವತಿಯಿಂದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಮಕ್ಕಳ ಮದುವೆಗೆ 50 ಸಾವಿರ ರೂ. ಸಹಾಯ ಧನ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ., ಅಪಘಾತದಿಂದ ಮರಣ ಹೊಂದಿದರೆ 5 ಲಕ್ಷ ರೂ. ನೀಡಲಾಗುವುದು ಎಂದ ಅವರು, ಕಾರ್ಮಿಕರ ಕಷ್ಟಗಳಿಗೆ ಒಕ್ಕೂಟ ಸ್ಪಂದಿಸುತ್ತದೆ ಹಾಗೂ ಸದಾ ನಿಮ್ಮ ಜೊತೆ ಇರುತ್ತದೆ ಎಂದರು.
ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಕಾಂತಲಕ್ಷ್ಮೀ, ಉಪಾಧ್ಯಕ್ಷ ವೀರಾಪುರ ಶಿವಕುಮಾರ್, ಕಾರ್ಯಾದರ್ಶಿ ಉಮ್ಮನಹಳ್ಳಿ ಗೋಪಾಲ್, ಖಜಾಂಚಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಭಟ್ಟಗೆರೆ ಪ್ರಸನ್ನಕುಮಾರ್, ಗೋಪಾಲ್, ಗಿರೀಶ್, ಸಂಘಟನಾ ಸಂಚಾಲಕ ದೊಡ್ಡೇರಿ ಮಹಾಲಿಂಗಯ್ಯ, ಶಿರಾ ತಾಲ್ಲೂಕು ಅಧ್ಯಕ್ಷ ಉಮೇಶ್, ಕೋಡ್ಲಾಪುರ ರಾಜು ಮತ್ತಿತರರು ಇದ್ದರು.
ಕಸಬಾ ಸಿದ್ದಾಪುರ ಗ್ರಾಮದ ಕುಡೂತಿ ವೇಣುಗೋಪಾಲಸ್ಚಾಮಿ ದೇವಸ್ಥಾನದ ಆವರಣದಲ್ಲಿ ಒಕ್ಕೂಟದ ವತಿಯಿಂದ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
