ಮಧುಗಿರಿ :

ಶ್ರೀಮತಿ ಸುಧಾಮೂರ್ತಿಯವರ ಇನ್ಫೋಸಿಸ್ ಸಂಸ್ಥೆ ಹಾಗೂ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ದೂರತರಂಗ ಶಿಕ್ಷಣವನ್ನು ನೀಡುತ್ತಿದ್ದು, ಜ.9 ರಂದು ಸಂಸ್ಥೆಯ ಅಧ್ಯಕ್ಷ ನಾರಾಯಣಮೂರ್ತಿಯವರು ವ್ಯಾಸಂಗ ಮಾಡಿದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಲಾಗುವುದು ಎಂದು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಸರ್ಕಾರಿ ಶಾಲೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಗಳು ನಾರಾಯಣಮೂರ್ತಿಯವರು 1958 ರಲ್ಲಿಇದೇ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇಲ್ಲಿಂದಲೇ ಯೋಜನೆಗೆ ಚಾಲನೆ ನೀಡಲಿದ್ದಾರೆ.ಕೋವಿಡ್ ನಿಂದಾಗಿ ಶಾಲಾ ಶಿಕ್ಷಣಕ್ಕೆ ತಡೆಯಾಗಿತ್ತು. ಈಗ ಆರಂಭವಾಗಿದ್ದು, ಇನ್ಫೋಸಿಸ್ ಸಂಸ್ಥೆಯಿಂದಲೇ ದೂರತರಂಗ ಶಿಕ್ಷಣಕ್ಕಾಗಿ ಆನ್ಲೈನ್ ಸೆಟಪ್ ಮಾಡಿಸಿ ಕೊಡಲಾಗುತ್ತದೆ. ಈ ಸೌಲಭ್ಯವನ್ನುಎಲ್ಲತರಗತಿಯಎಲ್ಲ ವಿಷಯಗಳ ಮಕ್ಕಳಿಗೂ ಬಳಸಿಕೊಳ್ಳಬಹುದಾಗಿದ್ದು, ಉತ್ತಮ ಪರಿಸರವುಳ್ಳ ಶಿಕ್ಷಣವನ್ನು ನೀಡಬಹುದಾಗಿದೆ. ಅತ್ಯಂತ ಹಿಂದುಳಿದ ಗ್ರಾಮಾಂತರ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಯೋಜನೆಯ ಲಾಭದೊರಕಲಿದೆ ಎಂದರು.

ಮೊಬೈಲ್ನಿಂದ ಶಿಕ್ಷಣ ಪಡೆದ ಮಕ್ಕಳು ಕಣ್ಣಿನ ತೊಂದರೆಯಿಂದಾಗಿ ಈಗ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸಂಸ್ಥೆಯು ನೀಡುವ ಈ ದೂರತರಂಗ ಶಿಕ್ಷಣದಲ್ಲಿ ಎಲ್ಲ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯಪೂರ್ಣ ಶಿಕ್ಷಣವನ್ನು ಕಲಿಯಬಹುದು. ಇದನ್ನು ಮಧುಗಿರಿ ಶೈಕ್ಷಣಿಕಜಿಲ್ಲೆಯ ಶಿರಾ, ಮಧುಗಿರಿ, ಪಾವಗಡ ಹಾಗೂ ಕೊರಟಗೆರೆಯ ಆಯ್ದ ಭಾಗದಲ್ಲಿ 4 ಶಾಲೆಗಳಿಗೆ ಪ್ರಾಥಮಿಕ ಹಂತದಲ್ಲಿ ನೀಡುತ್ತಿದ್ದು, ನಂತರ ಸಾಧಕ ಭಾದಕವನ್ನು ನೋಡಿಕೊಂಡು ವಿಸ್ತರಿಸಲು ಚಿಂತಿಸಲಾಗಿದೆ. ಈ ಯೋಜನೆಯಿಂದ ಸುಮಾರು 10 ಸಾವಿರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.ಇದಕ್ಕೆ ಶಿಕ್ಷಣ ಇಲಾಖೆಯ ಸಂಪೂರ್ಣವಾದ ಸಹಕಾರವಿದ್ದು, ಸಚಿವ ಸುರೇಶ್ಕುಮಾರ್ ಸಹ ಈ ಕಾರ್ಯಕ್ರಮಕ್ಕೆ ಅಂದು ಬರಲಿದ್ದಾರೆಂದರು.
ರಾಮಕೃಷ್ಣ ಆಶ್ರಮವು ಕೊರೊನಾ ಸಮಯದಲ್ಲಿ ಮಾಸ್ಕ್ ವಿತರಣೆ, ಶಾಲೆಗಳ ಸ್ಯಾನಿಟೈಸರ್, ಹಾಗೂ ನೊಂದವರಿಗೆ ಪಡಿತರ ವಿತರಣೆ ಮಾಡುವಲ್ಲಿ ನಿರತವಾಗಿದ್ದು, ವಿವೇಕ ಬ್ರಿಗೇಡ್ ವತಿಯಿಂದ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜನ ಸೇವೆಯನ್ನು ಕೈಗೊಂಡಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








