ಮಧುಗಿರಿ :
ಪಟ್ಟಣದಲ್ಲಿರುವ ಎಸ್ಬಿಐ ಶಾಖೆಯ ಎಟಿಎಂ ಕೇಂದ್ರದಲ್ಲಿ ಹಣವನ್ನು ಠೇವಣಿ ಮಾಡಲು ಠೇವಣಿ ಯಂತ್ರವನ್ನು ಎಟಿಎಂ ಕೇಂದ್ರಗಳಲ್ಲಿ ಅಳವಡಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ಮಧುಗಿರಿ ಹೈಸ್ಕೂಲ್ ರಸ್ತೆಯಲ್ಲಿರುವ ಎಸ್ಬಿಐ ಪುರಾತನವಾಗಿದ್ದು, ಮಧುಗಿರಿಗೆ ದೊಡ್ಡಶಾಖೆಯಾಗಿದೆ. ಪ್ರತಿ ದಿನ ನಗದು ವಹಿವಾಟಿಗಾಗಿ ಬ್ಯಾಂಕ್ಗೆ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ, ಇಲ್ಲಿನ ಸಿಬ್ಬಂದಿವರ್ಗದವರು ಗ್ರಾಹಕರೊಂದಿಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಪ್ರತಿ ನಿತ್ಯ ಬ್ಯಾಂಕ್ನ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದರಿಂದ ವಾಹನಗಳು ಈ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದೆ.
ಬ್ಯಾಂಕ್ಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿಯೇ ಎರಡು ಎಟಿಎಂ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ 4 ಯಂತ್ರಗಳಿವೆ. ಹಣವನ್ನು ಬಿಡಿಸಿಕೊಳ್ಳುವ ಅವಕಾಶ ಮಾತ್ರವಿದೆ. ಆದರೆ ಠೇವಣಿ ಮಾಡುವ ಯಂತ್ರದ ವ್ಯವಸ್ಥೆಯನ್ನು ಇದೂವರೆವಿಗೂ ಪಟ್ಟಣದ ಬಹು ದೊಡ್ಡ ಶಾಖೆ ತೆರೆಯದಿರುವುದು ವಿಪರ್ಯಾಸ.
ಇದೇ ರಸ್ತೆಯಲ್ಲಿ ಕರ್ನಾಟಕ ಬ್ಯಾಂಕಿನ ಎಟಿಎಂ ಇದ್ದು, ಈ ಕೇಂದ್ರದಲ್ಲಿ ಠೇವಣಿ ಜೊತೆಗೆ ಡ್ರಾ ಮಾಡುವ ಯಂತ್ರವನ್ನು ಅಳವಡಿಸಿದ್ದು, ಈ ಕೇಂದ್ರದಿಂದ ಕರ್ನಾಟಕ ಬ್ಯಾಂಕಿನ ಖಾತೆಗಳಿಗೆ ಮಾತ್ರ ಹಣ ತುಂಬ ಬಹುದಾಗಿದೆ. ಬಡವನಹಳ್ಳಿ ಮತ್ತು ಬ್ಯಾಲ್ಯ ಎಸ್ಬಿಐ ಶಾಖೆಯಲ್ಲಿ ಎಟಿಎಂ ನಲ್ಲಿ ಠೇವಣಿ ಮಾಡುವ ಯಂತ್ರವನ್ನು ಅಳವಡಿಸಿದ್ದು, ಗ್ರಾಮಾಂತರ ಪ್ರದೇಶದಲ್ಲಿರುವ ವ್ಯವಸ್ಥೆ ನಗರ ಪ್ರದೇಶದಲ್ಲಿ ಏಕೆ ಮಾಡಿಲ್ಲ ಎಂಬುದು ಗ್ರಾಹಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
