ಮಧುಗಿರಿ :
2019 ನೆ ಸಾಲಿನಲ್ಲಿ ತುಮಕೂರು ಜಿಲ್ಲೆ ಸೇರಿದಂತೆ ಮಧುಗಿರಿ ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದವರಿಂದ ಸಕ್ರಮಗೊಳಿಸಲು ನಮೂನೆ-57ರಲ್ಲಿ ಅರ್ಜಿ ಜೊತೆ ಪಡೆದಿರುವ 6,75,200 ರೂ. ಅರ್ಜಿ ಶುಲ್ಕವನ್ನು ಅಧಿಕಾರಿಗಳು ಸರ್ಕಾರಕ್ಕೆ ಪಾವತಿ ಮಾಡಿಲ್ಲ ಎಂಬುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಈ ಅರ್ಜಿ ಪಡೆಯುವ ಸಂಬಂಧ ಆಯುಕ್ತರು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ಬೆಂಗಳೂರು ಇವರು ಆಯಾಯ ಜಿಲ್ಲಾಧಿಕಾರಿಗಳಿಗೆ ಪತ್ರ ಹೊರಡಿಸಿ ಪತ್ರದಲ್ಲಿನ ಅಂಶಗಳನ್ನು ಪಾಲಿಸಲು ತಿಳಿಸಿರುತ್ತಾರೆ. ಆದರೆ ಮಧುಗಿರಿ ತಾಲ್ಲೂಕು ಕಛೇರಿಯ ಅಧಿಕಾರಿಗಳು ಈ ಅಂಶಗಳನ್ನು ಪರಿಗಣಿಸದೆ ಗಾಳಿಗೆ ತೂರಿ ಜನರಿಂದ ಅರ್ಜಿ ಪಡೆದು ಅರ್ಜಿ ಶುಲ್ಕ ಸುಮಾರು ಐದಾರು ಲಕ್ಷ ರೂ.ಗಳನ್ನು ಕೆಲ ಅಧಿಕಾರಿಗಳು ಸರ್ಕಾರಕ್ಕೆ ಪಾವತಿ ಮಾಡದೆ ಜನರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಆಯುಕ್ತರು ಭೂ ದಾಖಲೆಗಳ ಇಲಾಖೆ ಬೆಂಗಳೂರು, ತುಮಕೂರು ಜಿಲ್ಲಾಧಿಕಾರಿ ಇವರುಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಧುಗಿರಿ ತಾಲ್ಲೂಕು ಒಂದರಲ್ಲೇ ಐದಾರು ಲಕ್ಷ ಹಣ ದುರುಪಯೋಗವಾಗಿದ್ದು, ಇಡೀ ತುಮಕೂರು ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಹಣ ದುರುಪಯೋಗವಾಗಿರಬಹುದು..? ಈ ಹಣ ದುರುಪಯೋಗವಾಗಲು ಜಿಲ್ಲಾಧಿಕಾರಿಗಳ ಆಡಳಿತ ವೈಫಲ್ಯವೆ ಮುಖ್ಯ ಕಾರಣವಾಗಿದೆ.
ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಯೋಚಿಸುವುದರ ಜೊತೆಗೆ ಆಯಾಯ ತಾಲ್ಲೂಕಿನ ಪ್ರಜ್ಞಾವಂತರು ನಮೂನೆ-57ರ ಹಣದಲ್ಲಿ ಆಗಿರುವ ಮೋಸ ವಂಚನೆಯ ವಿರುದ್ದ ಧ್ವನಿ ಎತ್ತಬೇಕಾಗಿ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ