ಮಧುಗಿರಿ :
ಎಸ್.ಸಿ.ಪಿ – ಟಿ.ಎಸ್.ಪಿ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣ ಗೊಳಿಸಬೇಕು ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ತಿಳಿಸಿದರು.
ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಗೂ ಪ.ಪಂಗಡದ ವಿಶೇಷ ಚೇತನರ ಮನೆಗಳ ಬಳಿ ಸೋಲಾರ್ ಬೀದಿ ದೀಪ, ಗಂಗಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬೇಸಿಗೆ ಕಾಲ ಆರಂಭವಾಗಿದ್ದು, ಗ್ರಾಮಗಳಲ್ಲಿ ಸಮರ್ಪಕ ನೀರು ಸರಬರಾಜಿಗೆ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸಿದ್ದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ? ಕಾಮಗಾರಿ ಯಾವ ಹಂತದಲ್ಲಿದೆ ಇತ್ಯಾದಿ ವಿವರಗಳನ್ನು ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ ಸದಸ್ಯ ಎಚ್.ಆರ್ ದೊಡ್ಡಯ್ಯ ಮಾತನಾಡಿ, ಕವಣದಾಲ ಗ್ರಾಮಕ್ಕೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಆರಂಭವಾಗದೆ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲವೆಂದು ದೂರಿದರು.
ತಾ.ಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ, ಅರಣ್ಯ ಇಲಾಖೆಯವರು ರಸ್ತೆಬದಿ ಸಸಿಗಳಿಗೆ ಬೇಸಿಗೆ ಕಾಲದಲ್ಲಿ ನೀರುಣಿಸಬೇಕು. ಶಾಲಾ ಕಾಲೇಜುಗಳು ಪ್ರಾರಂ¨, ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಆಹಾರ ಇಲಾಖೆ ಶಿರಸ್ತೇದಾರ್ ಗಣೇಶ್ ಮಾತನಾಡಿ, ಬಿ.ಪಿ.ಎಲ್. ಪಡಿತರ ಚೀಟಿಗಾಗಿ ಸಲ್ಲಿಸಿದ್ದ 296 ಅರ್ಜಿಗಳು ಸ್ವೀಕೃತವಾಗಿದ್ದು, ತಾಲ್ಲೂಕಿನ ತಿಪ್ಪಾಪುರ, ವೀರೇನಹಳ್ಳಿ ಹಾಗೂ ದಾದಗೊಂಡನಹಳ್ಳಿ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸರಕಾರ ಆದೇಶಿಸಿದೆ ಎಂದರು.
ತಾ.ಪಂ ಉಪಾಧ್ಯಕ್ಷ ಲಕ್ಷ್ಮೀ ನರಸಪ್ಪ, ಸದಸ್ಯ ಬಿ.ಜಿ. ರಂಗನಾಥ್, ಇಒ.ಡಿ. ದೊಡ್ಡಸಿದ್ದಯ್ಯ, ಸದಸ್ಯರಾದ ನಾಗಭೂಷಣ್, ಗೋಪಾಲಯ್ಯ, ಲೋಕೋಪಯೋಗಿ ಇಲಾಖೆಯ ಎ.ಇ.ಇ. ಹೊನ್ನೇಶಪ್ಪ, ಜಿ.ಪಂ ಎ.ಇ.ಇ ಸುರೇಶ್ ರೆಡ್ಡಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
