ಮಧುಗಿರಿ :

ಸಾಂಕ್ರಾಮಿಕ ರೋಗಗಳು ಈ ಹಿಂದೆ ಬಂದಾಗ ಜನತೆ ದೇವರಿಗೆ ಮೊರೆ ಹೊಕ್ಕು ಹರಕೆಗಳನ್ನು ಹೊತ್ತು ತೀರಿಸುತ್ತಿದ್ದರು ಎಂದು ಉಪವಿಭಾಗಾಧಿಕಾರಿ ಹಾಗೂ ದಂಡಿನ ಮಾರಮ್ಮ ದೇವಸ್ಥಾನದ ಆಡಳಿತಾಧಿಕಾರಿ ಸೋಮಪ್ಪ ಕಡಕೋಳ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ದಂಡಿನ ಮಾರಮ್ಮನವರ ಹತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಷ್ಟ ಬಂದಾಗ ಮಾನವ ದೈವಿ ಶಕ್ತಿಯ ಮೊರೆ ಹೋದಾಗ, ಅವನಲ್ಲಿ ಧೈರ್ಯ ಮತ್ತು ಶಕ್ತಿ ತುಂಬುವ ಕಾರ್ಯ ದೇವರಿಂದ ಆಗುತ್ತದೆ. ಇದೀಗ ಕರೋನಾ 2ನೇ ಅಲೆ ಬಂದಿದ್ದು ಭಕ್ತಾದಿಗಳು ಸ್ವಚ್ಛತೆಗೆ ಆದ್ಯತೆ ನೀಡಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಇಲಾಖೆ ಅಧಿಕಾರಿಗಳು ಹಾಗೂ ಉತ್ಸವ ಸಮಿತಿಯವರು ಸಹಕಾರ ಸಹಭಾಗಿತ್ವದೊಂದಿಗೆ ಈ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿ ಕೊಡುತ್ತಾರೆ. ದೇವಸ್ಥಾನ ಹಾಗೂ ಸ್ವಾಗತ ಕಮಾನುಗಳಿಗೆ ಬಣ್ಣ ಲೇಪನ ಮಾಡಿರುವುದರಿಂದ ಸುಂದರವಾಗಿ ಕಾಣುತ್ತಿದ್ದು, ಭಕ್ತಾದಿಗಳಲ್ಲಿ ಸಂತಸ ತಂದಿದೆ ಎಂದರು.
ಸರ್ವ ಧರ್ಮಕ್ಕೆ ಸಾಕ್ಷಿ :
ಮುಸ್ಲಿಂ ಸಮುದಾಯದವರಾದ ಸಿಪಿಐ ಎಂ.ಎಸ್.ಸರ್ದಾರ್ ಹಾಗೂ ಕ್ರೈಸ್ತ ಸಮುದಾಯದವರಾದ ತಹಶೀಲ್ದಾರ್ ಸ್ಟೆಲ್ಲಾ ವರ್ಗೀಸ್ರವರು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾದರು.
ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಮ.ಲ.ನರಸಿಂಹಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಉತ್ಸವ ಸಮಿತಿ ಅಧ್ಯಕ್ಷ ಹೆಚ್.ಬಿ.ತಿಮ್ಮೇಗೌಡ, ಪದಾಧಿಕಾರಿಗಳಾದ ಹರಿನಾಥ್ಗೌಡ ಬಿ, ವೆಂಕಟೇಶಪ್ಪ, ರಾಮೇಗೌಡ, ಗ್ರೇಡ್2 ತಹಸೀಲ್ದಾರ್, ವರದರಾಜ್, ಅರ್ಚಕರಾದ ಲಕ್ಷ್ಮೀಕಾಂತ್, ಮುರಳಿಧರ, ಅರುಣ್ಕುಮಾರ್, ಕಂದಾಯ ಇಲಾಖೆಯ ಶಿವರಾಮಯ್ಯ, ಸಿದ್ದರಾಜು, ರಜಾಲಿ, ಓಬಳೇಶಪ್ಪ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








